'ಪ್ರಾಮಾಣಿಕ ಪ್ರಧಾನಿ' ಶಾಸ್ತ್ರಿಗೆ ಸಾಲ ನೀಡಿದ್ದ ಪಿಎನ್ ಬಿ!
ಬೆಂಗಳೂರು, ಫೆಬ್ರವರಿ 21: ಬಹುಕೋಟಿ ಹಗರಣದಿಂದ ಜಾಗತಿಕವಾಗಿ ಅಪಖ್ಯಾತಿಗೆ ಒಳಗಾಗುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನಿಂದ ಹಿಂದೊಮ್ಮೆ ದೇಶದ 'ಪ್ರಮಾಣಿಕ ಪ್ರಧಾನಿ' ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕಾರು ಕೊಳ್ಳಲು ಸಾಲ ಪಡೆದಿದ್ದರು ಎಂಬ ಮಾಹಿತಿ ಈಗ ಹೊರ ಬಂದಿದೆ.
ಪಿಎನ್ ಬಿಯ ಹಳೆ ಗ್ರಾಹಕರ ಪಟ್ಟಿಯಲ್ಲಿ ಮಾಜಿ ಪ್ರಧಾನಿ, ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೂಡಾ ಇದ್ದರು ಎಂಬುದು ವಿಶೇಷ. ಶಾಸ್ತ್ರಿ ಅವರು 'ಫಿಯೆಟ್' ಕಾರು ಕೊಳ್ಳಲು ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದರು.
— Shashi Tharoor (@ShashiTharoor) February 20, 2018
ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ಈ ಸಾಲವನ್ನು ತಮ್ಮ ಪಿಂಚಣಿ ಮೊತ್ತದಿಂದ ತೀರಿಸಿದರು ಎಂದು ಶಾಸ್ತ್ರಿ ಅವರ ಪುತ್ರ ಅನಿಲ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರು ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕಾರು ಕೊಳ್ಳಲು ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 5000 ರೂ. ಪಡೆದುಕೊಂಡಿದ್ದರು ಎಂಬ ವಿಷಯ ಈಗ ಬಹಿರಂಗಗೊಂಡಿದೆ.
5 ಸಾವಿರ ರುಪಾಯಿ ಸಾಲ ಪಡೆದಿದ್ದ ಶಾಸ್ತ್ರೀಜಿ
1964ನೇ ಇಸವಿಯಲ್ಲಿ ತಮ್ಮ ವಿಶೇಷ ಸಹಾಯಕ ವೆಂಕಟರಾಮನ್ ಅವರ ಬಳಿ ವಿಚಾರಿಸಿದ ಪ್ರಧಾನಿ ಶಾಸ್ತ್ರೀಜಿ ಹೊಸ ಫಿಯಟ್ ಕಾರಿನ ಬೆಲೆ 12 ಸಾವಿರ ಎಂದು ತಿಳಿದುಕೊಂಡಿದ್ದಾರೆ. ಆದರೆ ಪ್ರಧಾನಿ ಕುಟುಂಬದ ಬಳಿ ಬ್ಯಾಂಕ್ ನಲ್ಲಿ ಇದ್ದದ್ದು 7 ಸಾವಿರ ರುಪಾಯಿ ಮಾತ್ರ. ಬಾಕಿ 5 ಸಾವಿರ ರುಪಾಯಿಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಅದೇ ದಿನ ಸಾಲ ಕೂಡ ಮಂಜೂರಾಗಿದೆ.
ಪಿಂಚಣಿ ಹಣದಲ್ಲಿ ಸಾಲ ತೀರಿಸಿದ್ದ ಲಲಿತಾ ಶಾಸ್ತ್ರಿ
ಅದಾಗಿ ಕೆಲ ವರ್ಷಕ್ಕೆ ಕುಟುಂಬಕ್ಕೆ ಆಘಾತವೊಂದು ಶಾಸ್ತ್ರೀಜಿ ಸಾವಿನ ರೂಪದಲ್ಲಿ ಬಂದಿತು. ಜನವರಿ 11, 1966ರಲ್ಲಿ ತಾಷ್ಕೆಂಟ್ ನಲ್ಲಿ ಅವರು ತೀರಿಕೊಂಡರು. "ಕಾರಿಗಾಗಿ ಪಡೆದಿದ್ದ ಸಾಲ ಹಾಗೆ ಉಳಿದಿತ್ತು. ನನ್ನ ತಂದೆಯ ಸಾವಿನ ನಂತರ ಬರುತ್ತಿದ್ದ ಪಿಂಚಣಿಯಲ್ಲಿ ಆ ಸಾಲವನ್ನು ನನ್ನ ತಾಯಿ ತೀರಿಸಿದರು" ಎಂದು ನೆನಪಿಸಿಕೊಳ್ಳುತ್ತಾರೆ ಅನಿಲ್.
1964ನೇ ಮಾಡೆಲ್ ನ ಫಿಯಟ್ ಕಂಪೆನಿಯದ್ದು
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ವಿಶೇಷ ಸಹಾಯಕರಾಗಿದ್ದ ವಿ.ಎಸ್. ವೆಂಕಟರಾಮನ್ ಅವರ ಸಲಹೆಯಂತೆ ಕೆನೆ ಬಣ್ಣದ 1964ನೇ ಮಾಡೆಲ್ ನ ಫಿಯಟ್ ಕಂಪೆನಿಯ ಕಾರು ಖರೀದಿಸಿದರು. ಅದರ ಸಂಖ್ಯೆ DLE 6. ಸದ್ಯಕ್ಕೆ ಆ ಕಾರನ್ನು ದೆಹಲಿಯ ಮೋತಿಲಾಲ್ ಮಾರ್ಗ್ ನಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಮಾರಕ ಭವನದಲ್ಲಿ ಇರಿಸಲಾಗಿದೆ.
ಪಿಎನ್ ಬಿಗೆ ಲಾಲಾ ಲಜಪತ್ ರಾಯ್ ನಿರ್ದೇಶಕರಾಗಿದ್ದರು
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸ್ಥಾಪನೆಯಾಗಿದ್ದು 1894ರಲ್ಲಿ, ಬ್ರಿಟಿಷರು ದೇಶವಾಳುತ್ತಿದ್ದ ಕಾಲದಲ್ಲಿ. ಸ್ವದೇಶಿ ಬ್ಯಾಂಕ್ ಬೇಕು ಎಂಬ ಘನವಾದ ಉದ್ದೇಶದಿಂದ ಬ್ಯಾಂಕ್ ಆರಂಭವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಲಾಲಾ ಲಜಪತ್ ರಾಯ್ ಬ್ಯಾಂಕ್ ನ ನಿರ್ದೇಶಕರಾಗಿದ್ದರು.
— Shashi Tharoor (@ShashiTharoor) February 20, 2018 |
ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಶಾಸ್ತ್ರಿ ಅವರ ಸಾವಿನ ನಂತರ ಬ್ಯಾಂಕ್ ಅವರ ಕುಟುಂಬಸ್ಥರಿಗೆ ಸಾಲ ಮರುಪಾವತಿಸುವಂತೆ ಪತ್ರ ಬಂದಿತ್ತು. ಶಾಸ್ತ್ರೀಜಿ ಅವರ ಪತ್ನಿ ಲಲಿತಾ ಶಾಸ್ತ್ರಿ ತಮ್ಮ ಪತಿಯ ಪಿಂಚಣಿ ಹಣದಲ್ಲಿ ಬ್ಯಾಂಕಿನ ಸಾಲವನ್ನು ಮರು ಪಾವತಿ ಮಾಡಿದ್ದರು ಎಂದು ವಿವರಗಳನ್ನು ಟ್ವೀಟ್ ಮಾಡಿರುವ ಕೇಂದ್ರದ ಮಾಜಿ ಸಚಿವ ಶಶಿ ತರೂರ್.