ಆಧಾರ್ ಜೊತೆ ಮೊಬೈಲ್ ಲಿಂಕ್ : ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ನಕಾರ
ನವದೆಹಲಿ, ನವೆಂಬರ್ 03 : ಆಧಾರ್ ಜೊತೆಗೆ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯನ್ನು ಜೋಡಿಸುವುದನ್ನು ತಡೆಯಬೇಕೆಂದು ಕೋರಲಾಗಿದ್ದ ಅರ್ಜಿಯಲ್ಲಿ ಮಧ್ಯಂತರ ಆದೇಶವನ್ನು ನೀಡಲು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ನವೆಂಬರ್ ಕೊನೆಯ ವಾರದಲ್ಲಿ ತೆಗೆದುಕೊಳ್ಳಲಿದ್ದು, ಈ ವಿಷಯವನ್ನು ಅದಕ್ಕೇ ಬಿಡಲಾಗುವುದು ಎಂದು ನ್ಯಾಯಮೂರ್ತಿ ಎಕೆ ಸಿಕ್ರಿ ಅವರು ಹೇಳಿದರು.
ಇದೇ ಸಮಯದಲ್ಲಿ, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಜೊತೆ ಜೋಡಿಸಲೇಬೇಕೆಂದು ಬ್ಯಾಂಕ್ ಮತ್ತು ಮೊಬೈಲ್ ಕಂಪನಿಗಳು ಒತ್ತಾಯಿಸಿ ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿರುವುದಕ್ಕೆ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಅಥವಾ ಮೊಬೈಲ್ ಸಂಖ್ಯೆಯನ್ನು ಡಿಸೆಂಬರ್ 31ರೊಳಗೆ ಆಧಾರ್ ಜೊತೆಗೆ ಜೋಡಿಸಲಿದ್ದರೆ ನಿಮ್ಮ ಖಾತೆ ಅಥವಾ ಮೊಬೈಲ್ ಚಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಫ್ಎಂ ಸೇರಿದಂತೆ ಎಲ್ಲೆಂದರಲ್ಲಿ ಜಾಹೀರಾತುಗಳು ಬಂದು ಗ್ರಾಹಕರನ್ನು ಕಂಗೆಡಿಸಿವೆ.
ಇಂಥ ಸಂದೇಶಗಳು ತಮಗೂ ಬರುತ್ತಿವೆ ಎಂದು ನ್ಯಾಯಮೂರ್ತಿ ಸಿಕ್ರಿ ತಿಳಿಸಿದರು. ಆದರೆ ಈ ರೀತಿ ಸಂದೇಶಗಳನ್ನು ಕಳಿಸಿ ಗ್ರಾಹಕರಿಗೆ ಧಮ್ಕಿ ಹಾಕುತ್ತಿರುವುದನ್ನು ಕೇಂದ್ರ ನಿರಾಕರಿಸಿದೆ. ಈ ಸಂಸ್ಥೆಗಳು ತಕ್ಷಣ ಗ್ರಾಹಕರಿಗೆ ಇಂಥ ಸಂದೇಶ ರವಾನಿಸುವುದನ್ನು ನಿಲ್ಲಿಸಬೇಕು ಎಂದು ನ್ಯಾ. ಸಿಕ್ರಿ ಆದೇಶಿಸಿದರು.
ಆಧಾರ್ ಕಾರ್ಡ್ ದೇಶದ ನಾಗರಿಕರ ಖಾಸಗಿತನದ ಮೇಲೆ ಲಗ್ಗೆ ಹಾಕಿದೆ ಎಂದು ದೂರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರ ವಾದ ಪ್ರತಿವಾದವನ್ನು ಸಾಂವಿಧಾನಿಕ ಪೀಠ ನವೆಂಬರ್ ಕೊನೆಯ ವಾರದಲ್ಲಿ ತೆಗೆದುಕೊಳ್ಳಲಿದೆ.
ಇ-ಕೆವೈಸಿ ಅಡಿಯಲ್ಲಿ ಫೆಬ್ರವರಿ 6ರೊಳಗೆ ಎಲ್ಲ ಮೊಬೈಲ್ ಬಳಕೆದಾರರು ಆಧಾರ್ ಸಂಖ್ಯೆಯ ಜೊತೆ ಲಿಂಕ್ ಮಾಡಬೇಕೆಂದು ಗುರುವಾರವೇ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಇದಕ್ಕೆ ಸರ್ವೋಚ್ಚ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ.












Click it and Unblock the Notifications