ಕೇರಳ:ಸಾಹಿತಿ ಮೇಲೆ ಹಲ್ಲೆ, ಆರ್ಎಸ್ಎಸ್ ಕಾರ್ಯಕರ್ತರ ಬಂಧನ
ಕೊಲ್ಲಂ, ಫೆಬ್ರವರಿ 06: ಮಲೆಯಾಳಂ ಸಾಹಿತಿ ಕೆ.ಶ್ರೀಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಮಂದಿ ಆರ್ಎಸ್ಎಸ್ ಕಾರ್ಯಕರ್ತರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಾಷಣ ನೀಡಿ ಕಾರಿನಲ್ಲಿ ವಾಪಾಸಾಗಲು ಅಣಿಯಾಗುತ್ತಿದ್ದ ಸಮಯದಲ್ಲಿ ಸಾಹಿತಿ ಕೆ.ಶ್ರೀಕುಮಾರ್ ಅವರ ಕಾರಿನ ಬಳಿ ಬಂದ ಯುವಕರ ಗುಂಪೊಂದು ಅವರನ್ನು ಅಡ್ಡಗಟ್ಟಿ ಬೆದರಿಕೆ ಒಡ್ಡಿ ಹಲ್ಲೆ ಮಾಡಿತ್ತು.
ಶ್ರೀಕುಮಾರ್ ಅವರು ಭಾಷಣದಲ್ಲಿ ಹಿಂದುತ್ವದ ವಿರುದ್ಧ ಭಾಷಣ ಮಾಡಿದ್ದರು, ಜಾತಿ ಗೋಡೆಯನ್ನು ನಿರ್ಮಿಸಿ ರಾಜಕಾರಣ ಮಾಡುತ್ತಿರುವ ಜಾತೀವಾದಿ ಪಕ್ಷಗಳನ್ನು ಅವರು ಟೀಕಿಸಿದ್ದರು. ಭಾಷಣದಿಂದ ಕೋಪಗೊಂಡ ಆರ್ಎಸ್ಎಸ್ ಯುವಕರು ಶ್ರೀಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ಟು 15 ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲಾಗಿದ್ದು, ಈಗಾಗಲೇ 6 ಜನ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಕೊಲ್ಲಂ ಜಿಲ್ಲೆಯ ಎಸ್ಪಿ ಅಶೋಕ್ ಹೇಳಿದ್ದಾರೆ.
ಶ್ರೀಕುಮಾರ್ ಅವರು ಕೇರಳದ ಪ್ರಮುಖ ಪ್ರಗತಿಪರ ಸಾಹಿತಿಗಳಲ್ಲೊಬ್ಬರಾಗಿದ್ದು, ಅವರ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕೇರಳ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ನೀಡಲಾಗಿತ್ತು.
ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಗತಿಪರರ ಮೇಲೆ ಬದರಿಕೆಗಳು ಹೆಚ್ಚಾಗುತ್ತಿದ್ದು, ಎಂ.ಟಿ.ವಾಸುದೇವನೈಯರ್, ಸಿನಿಮಾ ನಿರ್ದೇಶಕ ಕಮಲ್ ಇನ್ನೂ ಮುಂತಾದವರು ಮತೀಯ ಸಂಘಟನೆಗಳಿಂದ ಬೆದರಿಕೆಗಳನ್ನು ಅನುಭವಿಸಿದ್ದಾರೆ.