ಬಿಜೆಪಿ ಸರ್ವನಾಶ ಇಲ್ಲಿಂದಲೇ, ಈ ಕ್ಷಣದಿಂದಲೇ ಆರಂಭ: ಲಾಲೂ
'ದೇಶ್ ಬಚಾವೋ, ಬಿಜೆಪಿ ಭಗಾವೋ' ಸಾರ್ವಜನಿಕ ಸಭೆಯಲ್ಲಿ ಲಾಲೂ ಪ್ರಸಾದ್, ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ಮುಖಂಡರು ಪರಿಪರಿಯಾಗಿ ಬಿಜೆಪಿ, ನಿತೀಶ್ ಕುಮಾರ್ ಮತ್ತು RSS ವಿರುದ್ದ ವಾಗ್ದಾಳಿ.
ಪಾಟ್ನಾ, ಆ 28: ಬಿಹಾರದ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಭಾನುವಾರ (ಆ 27) ಆಯೋಜಿಸಲಾಗಿದ್ದ 'ದೇಶ್ ಬಚಾವೋ, ಬಿಜೆಪಿ ಭಗಾವೋ' ಸಾರ್ವಜನಿಕ ಸಭೆಯಲ್ಲಿ ಲಾಲೂ ಪ್ರಸಾದ್, ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ಮುಖಂಡರು ಪರಿಪರಿಯಾಗಿ ಬಿಜೆಪಿ, ನಿತೀಶ್ ಕುಮಾರ್ ಮತ್ತು RSS ವಿರುದ್ದ ಕೆಂಡಕಾರಿದ್ದಾರೆ.
ಕೋಮುವಾದಿ ಬಿಜೆಪಿ ಈ ದೇಶಕ್ಕೆ ಅಂಟಿಕೊಂಡಿರುವ ವಿಷಜಂತು, ಆ ವಿಷಜಂತುವನ್ನು ದೇಶದಿಂದ ಓಡಿಸದಿದ್ದರೆ ದೇಶ ಸರ್ವನಾಶವಾಗುತ್ತದೆ. ಬಿಜೆಪಿಯನ್ನು ಬೇರು ಸಮೇತ ನಾಶ ಮಾಡುವ ಕೆಲಸ ಈ ಅಭೂತಪೂರ್ವ ಸಾರ್ವಜನಿಕ ಸಭೆಯ ಮೂಲಕ ಆರಂಭವಾಗಿದೆ ಎಂದು ಆರ್ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ವಿರುದ್ದ ಎಲ್ಲಾ ಪಕ್ಷಗಳನ್ನು ಎತ್ತಿಕಟ್ಟ ಬೇಕು ಎನ್ನುವ ಈ ಸಾರ್ವಜನಿಕ ಸಭೆಯ ಮೂಲಕ ವೇದಿಕೆ ಕಲ್ಪಿಸಲು ಮುಂದಾಗಿದ್ದ ಲಾಲೂಗೆ ಉತ್ತಮ ಪ್ರಮಾಣದಲ್ಲಿ ಇತರ ಪಕ್ಷಗಳ ಬೆಂಬಲ ವ್ಯಕ್ತವಾಗಿದ್ದು ವಿಶೇಷ. ಮಮತಾ, ಅಖಿಲೇಶ್, ಗುಲಾಂ ನಬಿ ಮತ್ತು ಶರದ್ ಯಾದವ್ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು.
ಕಿಕ್ಕಿರಿದು ತುಂಬಿದ್ದ ಗಾಂಧಿ ಮೈದಾನದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಲಾಲೂ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದು ನನ್ನ ಮತ್ತು ಶರದ್ ಯಾದವ್ ಅವರಿಂದ. ಈಗ ಅಧಿಕಾರದ ಆಸೆಗಾಗಿ ಮೋದಿ ಜೊತೆ ಕೈಜೋಡಿಸಿ ಅಧಿಕಾರಕ್ಕೆ ಬಂದಿದ್ದಾರೆ. ಇದು ಎಷ್ಟು ದಿನ ನಡೆಯಲು ಸಾಧ್ಯ ಎಂದು ಲಾಲೂ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಸರಕಾರ ಅಧಿಕಾರ ನಡೆಸುತ್ತಿರುವ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಇದರ ಗಂಭೀರತೆಯನ್ನು ಜನ ಅರ್ಥಮಾಡಿಕೊಳ್ಳಬೇಕಾಗಿದೆ. ಇಡೀ ದೇಶದ ಕಾನೂನು ನಡೆಯುತ್ತಿರುವುದು ಬರೀ ಇಬ್ಬರ ಕೈಯಲ್ಲಿ ಎಂದು ಬಿಜೆಪಿ ಮತ್ತು RSS ಸಂಘಟನೆಯತ್ತ ಪರೋಕ್ಷವಾಗಿ ಲಾಲೂ ಬೊಟ್ಟು ಮಾಡಿದ್ದಾರೆ. ಈ ವಯಸ್ಸಿನಲ್ಲೂ ಚಡ್ಡಿ ಹಾಕೋತೀರಲ್ಲಾ, ನಾಚಿಕೆಯಾಗಲ್ವಾ, RSS ಮುಖ್ಯಸ್ಥರತ್ತ ಲೇವಡಿ..
|
ಇಂದು ನಿನ್ನೆ ರಾಜಕೀಯಕ್ಕೆ ಬಂದವನಲ್ಲ, ಲಾಲೂ
ಇಂದು ನಿನ್ನೆ ರಾಜಕೀಯಕ್ಕೆ ಬಂದವನಲ್ಲ..ನಾನು ಸಿದ್ದಾಂತವನ್ನು ನಂಬಿಕೊಂಡು ಬಂದವನು. ಕೋಮುವಾದಿಗಳನ್ನು ಈ ದೇಶದಲ್ಲಿ ಬೆಳೆಯಲು ನನ್ನ ರಕ್ತದ ಕೊನೆಯ ಕಣ ಇರುವ ತನಕ ಬಿಡುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಬಿಜೆಪಿ ಸಿದ್ದಾಂತವನ್ನು ನಂಬುವುದಿಲ್ಲ - ಲಾಲೂ ಪ್ರಸಾದ್.

ಬಿಜೆಪಿಯನ್ನು ದೇಶದಿಂದ ಕಿತ್ತೊಗೆಯುವ ಕೆಲಸ ಆರಂಭ
ಕಾರ್ಯಕ್ರಮದ ಸಂಘಟಕರಾಗಿದ್ದ ಲಾಲೂ ಪುತ್ರ ತೇಜಸ್ವಿನಿ ಯಾದವ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿಯನ್ನು ಈ ದೇಶದಿಂದ ಕಿತ್ತೊಗೆಯುವ ಕೆಲಸ ಆರಂಭವಾಗಿದೆ. ನಾನು ಕೃಷ್ಣ, ನನ್ನ ಸಹೋದರ ಅರ್ಜುನ, ಬಿಜೆಪಿ ಸರ್ವನಾಶ ಆರಂಭವಾಗಿದೆ ಎಂದು ತೇಜಸ್ವಿನಿ ಯಾದವ್ ಹೇಳಿದ್ದಾರೆ.

ಅರ್ಥ ಚಡ್ದಿ ಹಾಕೋತೀರಲ್ವಾ ನಿಮಗೆ ನಾಚಿಕೆ ಅನ್ನೋದು ಇಲ್ವಾ
RSS ಸಂಘಟನೆಯನ್ನು ಲೇವಡಿ ಮಾಡುತ್ತಾ, ಲಾಲೂ ಇನ್ನೊಬ್ಬ ಪುತ್ರ ತೇಜಪ್ರತಾಪ್ ಯಾದವ್, ಈ ವಯಸಿನ್ನಲ್ಲೂ ಅರ್ಥ ಚಡ್ದಿ ಹಾಕೋತೀರಲ್ವಾ ನಿಮಗೆ ನಾಚಿಕೆ ಅನ್ನೋದು ಇಲ್ವಾ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ದ ತೇಜಪ್ರತಾಪ್ ಕಿಡಿಕಾರಿದ್ದಾರೆ. ನಿತೀಶ್ ಕುಮಾರ್ ಅವರು ಅರ್ಥ ಪ್ಯಾಂಟ್ ತೊಟ್ಟು ಬಿಜೆಪಿ ನಾಯಕರ ತೊಡೆ ಮೇಲೆ ಕುಳಿತಿದ್ದಾರೆಂದು ತೇಜಪ್ರತಾಪ್ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

ಕೇಂದ್ರ ಸರಕಾರದ ವಿರುದ್ದ ನಾವೆಲ್ಲಾ ಕೈಜೋಡಿಸಬೇಕಾಗಿದೆ
ಗಾಂಧಿ ಮೈದಾನದಲ್ಲಿ ಇಷ್ಟು ಪ್ರಮಾಣದಲ್ಲಿ ಜನ ಸೇರಿರುವುದು ಸರಕಾರದ ವಿರುದ್ದ ಆಕ್ರೋಶದ ಸಂಕೇತ. ಕೇಂದ್ರ ಸರಕಾರದ ವಿರುದ್ದ ನಾವೆಲ್ಲಾ ಕೈಜೋಡಿಸಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಮತದಾರ ನಿತೀಶ್ ಮತ್ತು ಬಿಜೆಪಿ ವಿರುದ್ದ ಮತಚಲಾಯಿಸಿ, ಶರದ್ ಯಾದವ್ ಮತ್ತು ಲಾಲೂ ಶಕ್ತಿ ಹೆಚ್ಚಿಸಲಿದ್ದಾರೆಂದು, ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಗುಲಾಂನಬಿ ಆಜಾದ್, ಶರದ್ ಯಾದವ್, ಮಮತಾ ಇತ್ತಿತರು
ಲಾಲೂ ಆಯೋಜಿಸಿದ್ದ ಸಭೆಯಲ್ಲಿ ಗುಲಾಂನಬಿ ಆಜಾದ್, ಶರದ್ ಯಾದವ್, ಮಮತಾ ಬ್ಯಾನರ್ಜಿ, ಎನ್ಸಿಪಿ ಮುಖಂಡ ತಾರಿಕ್ ಅನ್ವರ್, ಸಿಪಿಐನ ಸುಧಾಕರ ರೆಡ್ಡಿ, ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಮುಂತಾದವರು ಭಾಗವಹಿಸಿದ್ದರು. ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರೆಕಾರ್ಡೆಡ್ ಭಾಷಣ ಪ್ರಸಾರ ಮಾಡಲಾಯಿತು.












Click it and Unblock the Notifications