ಮಾಂಡೌಸ್ ಚಂಡಮಾರುತ: ಮಂಗಳವಾರದವರೆಗೆ ತಮಿಳುನಾಡು, ಆಂಧ್ರ, ಕೇರಳದಲ್ಲಿ ಮಳೆ ಅರ್ಭಟ
ನವದೆಹಲಿ ಡಿಸೆಂಬರ್ 12: ಮಾಂಡೌಸ್ ಚಂಡಮಾರುತದ ಪರಿಣಾಮ ಕಳೆದ ಕೆಲ ದಿನಗಳಿಂದ ದೇಶದ ಹಲವೆಡೆ ಅಧಿಕ ಮಳೆಯಾಗುತ್ತಿದೆ. ಚಳಿ, ಗಾಳಿ, ಅಧಿಕ ಮಳೆಗೆ ಜನ ಮನೆಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದು ತಮಿಳುನಾಡಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಮಂಗಳವಾರದವರೆಗೆ (ಡಿಸೆಂಬರ್ 13) ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.
ಈಗಾಗಲೇ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ನಾಳೆಯವರೆಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಾದ್ಯಂತ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.
ಬಿಬಿಎಂಪಿ: ಬೊಮ್ಮನಹಳ್ಳಿ, ದಕ್ಷಿಣ ವಲಯದಲ್ಲಿ ಬೀದಿ ನಾಯಿ ಕಾಟ, ನಿತ್ಯ 40-50 ಕೇಸ್
Recommended Video
ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ
ಮಳೆಯ ಅರ್ಭಟಕ್ಕೆ ಕಾಂಚಿಪುರಂ ಜಿಲ್ಲೆಯ ಕಾಂಚೀಪುರಂ ತಾಲೂಕು ಮತ್ತು ತಿರುವಳ್ಳೂರು ಜಿಲ್ಲೆಯ ಉತ್ತುಕೊಟ್ಟೈ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ಕೂಡ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವೆಡೆ ತುಂತುರು ಮಳೆ ಇದೆ. ಮತ್ತೊಂದೆಡೆ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದ್ದು ಜನ ಹೈರಾಣಾಗಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದು ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ತಮಿಳುನಾಡಿನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ರಾತ್ರಿಯಿಡಿ ಜನ ನಿದ್ದೆಗೆಟ್ಟು ಜಾಗರಣೆ ಮಾಡಿದ್ದಾರೆ. ಇನ್ನೂ ತಮಿಳುನಾಡಿನ ಹಲವೆಡೆ ಭೂಕುಸಿತ ಉಂಟಾಗಿದ್ದು ವಿದ್ಯುತ್ ವ್ಯತ್ಯಯಗೊಂಡಿದೆ.
ಡಿ.13 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ
"ಮಳೆ ಎಚ್ಚರಿಕೆ: ತಮಿಳುನಾಡು, ಕೇರಳ, ಆಂಧ್ರಪ್ರದೇಶ, ದಕ್ಷಿಣ ಒಳ ಕರ್ನಾಟಕದಲ್ಲಿ 2022ರ ಡಿಸೆಂಬರ್ 11 ರಿಂದ 13 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ" ಎಂದು ಐಎಂಡಿ ಟ್ವೀಟ್ ಮೂಲಕ ತಿಳಿಸಿದೆ. 11 ರಿಂದ 13 ರ ಅವಧಿಯಲ್ಲಿ ಆಗ್ನೇಯ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರ ಹಾಗೂ ಕೇರಳ-ಕರ್ನಾಟಕ ಕರಾವಳಿಯ ಉದ್ದಕ್ಕೂ ಗಾಳಿಯ ವೇಗ ಗಂಟೆಗೆ 35-45 ಕಿಮೀ ತಲುಪುತ್ತದೆ ಎಂದು ಐಎಂಡಿ ಸೂಚನೆ ನೀಡಲಾಗಿದೆ. ಈ ವೇಳೆ ಸಮುದ್ರದ ಅಲೆಗಳು ತೀವ್ರಗೊಳ್ಳಲಿದ್ದು ಕಡಲ ತೀರದತ್ತ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಎಲ್ಲೆಲ್ಲಿ ಲಘು ಮಳೆಯ ಎಚ್ಚರಿಕೆ?
ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ವಾಲಾಜಾಬಾದ್, ಕಾಂಚೀಪುರಂ, ತಿರುಪೋರುರ್ ಮತ್ತು ವಂಡಲೂರ್ನಂತಹ ಚೆನ್ನೈ ಸುತ್ತಮುತ್ತಲಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯ ಎಚ್ಚರಿಕೆ ನೀಡಲಾಗಿದೆ.
ಡಿ.14-15ರಂದು ಅಂಡಮಾನ್ನಲ್ಲಿ ಮಳೆ
13 ಡಿಸೆಂಬರ್ 2022 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ. ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಡಿಸೆಂಬರ್ 14 ಮತ್ತು 15 ರಂದು ಪ್ರತ್ಯೇಕವಾದ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.