ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಕರ್ನಾಟಕದಲ್ಲಿ ಕಡಿಮೆ
ನವದೆಹಲಿ, ಜೂನ್ 5: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಶುಕ್ರವಾರ ಸಂಜೆ ಭಾರಿ ಮಳೆ ಸುರಿದಿದೆ.
Recommended Video
ಕಲ್ಕಾಜಿ ಎಕ್ಸ್ಟೆನ್ಷನ್, ತುಘ್ಲಕಾಬಾದ್ ಎಕ್ಸ್ಟೆನ್ಷನ್, ಗೋವಿಂದ್ ಪುರಿ ಎಕ್ಸ್ಟೆನ್ಷನ್ ಸೇರಿದಂತೆ ಹಲವು ಕಡೆ ಹೆಚ್ಚು ಮಳೆ ಸುರಿದಿದೆ.ದೆಹಲಿಯಲ್ಲಿ ಇಂದು ಸುರಿದ ಮಳೆಯಿಂದಾಗಿ ದೆಹಲಿ, ಗುರುಗ್ರಾಮ, ಫರೀದಾಬಾದ್ ಹಾಗೂ ಹರ್ಯಾಣದ ಕೆಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ತಗ್ಗಿದೆ.
ಗಾಳಿಯು ಗಂಟೆಗೆ 20-40 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಕೈಥಾಳ್, ಬಲ್ಲಬಗಢದಲ್ಲಿ ಮುಂದಿನ 2 ಗಂಟೆಯಲ್ಲಿ ಭಾರಿ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕರ್ನಾಟಕ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರವೂ ಮಳೆಯಾಗಿದೆ. ಜೂನ್ 7ರಿಂದ 9ರ ತನಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ 7ರ ಬಳಿಕ ಕರ್ನಾಟಕದಲ್ಲಿ ಮಳೆ
ಅವಧಿಗೂ ಮುನ್ನವೇ ಮುಂಗಾರು ಕರ್ನಾಟಕ ಪ್ರವೇಶಿಸಿದ್ದು, ಪರಿಣಾಮ ಭಾನುವಾರದಿಂದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಜೂನ್ 1ರಂದು ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶ ಮಾಡಿತ್ತು. ಕೇರಳ ಪ್ರವೇಶಿಸಿದ ಒಂದೆರಡು ದಿನಗಳಲ್ಲಿ ಮುಂಗಾರು ರಾಜ್ಯದ ಕರಾವಳಿಗೂ ಆಗಮಿಸುವುದು ವಾಡಿಕೆ.

ಕೇರಳದಲ್ಲಿ ಮುಂಗಾರು ದುರ್ಬಲ
ಕೇರಳ ಪ್ರವೇಶಿಸಿದ ಮುಂಗಾರು ದುರ್ಬಲವಾಗಿದ್ದರಿಂದ ರಾಜ್ಯಕ್ಕೆ ಆಗಮಿಸುವುದರಲ್ಲಿ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು, ಆದರೆ ಗುರುವಾರವೇ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಆಗಮನವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಗುರುವಾರ ಮಳೆಯಾದ ಕರ್ನಾಟಕದ ಪ್ರದೇಶಗಳು
ಗುರುವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಅತಿ ಹೆಚ್ಚು ಅಂದರೆ 7 ಸೆಂ.ಮೀ ಮಳೆಯಾಗಿತ್ತು. ಕೊಲ್ಲೂರು, ಕಾರವಾರ, ಕುಂದಾಪುರ, ಗೋಕರ್ಣ, ಸಿದ್ದಾಪುರ, ಕೋಟಾ, ತ್ಯಾಗರ್ತಿ, ವಿರಾಜಪೇಟೆ, ಮಂಕಿ, ಮುಂಡಗೋಡು, ಮೂಡಬಿದಿರೆ, ಸೊರಬ, ಲಿಂಗನಮಕ್ಕಿ, ತಾಳಗುಪ್ಪ, ಶಿಖಾರಿಪುರದಲ್ಲಿ ಮಳೆಯಾಗಿತ್ತು.

ಮುಂದಿನ 24 ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆಯಾಗುವ ನಿರೀಕ್ಷೆ
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚು ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.












Click it and Unblock the Notifications