ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್!
ನವದೆಹಲಿ, ನ.13: ರಾಜಕೀಯ ತಂತ್ರಜ್ಞ, ಈಗ ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಳ್ಳುತ್ತಿರುವ ಪ್ರಶಾಂತ್ ಕಿಶೋರ್ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಆದರೆ, ತಮ್ಮ ತವರು ರಾಜ್ಯವಾದ ಬಿಹಾರಕ್ಕೆ ಉತ್ತಮ ಪರ್ಯಾಯವನ್ನು ನಿರ್ಮಿಸುವ ಬಗ್ಗೆ ಪ್ರತಿಜ್ಞೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿದ್ದಾರೆ.
ತನ್ನನ್ನು ಅಲ್ಪ ಸ್ವಲ್ಪ ರಾಜಕೀಯ ಚಾಣಾಕ್ಷತನವನ್ನು ಹೊಂದಿರುವ ವ್ಯಾಪಾರಿ ಎಂದು ಆರೋಪಿಸಿರುವ ಜೆಡಿಯು ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಶಾಂತ್ ಕಿಶೋರ್, ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ನಿತೀಶ್ ಕುಮಾರ್ ತನ್ನನ್ನು ಅವರ ನಿವಾಸದಲ್ಲಿ ಇರಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಆಕಾಂಕ್ಷೆಗಳಿಲ್ಲ ಎಂದು ಈ ವೇಳೆ ಸ್ಪಷ್ಟ ಪಡಿಸಿದ್ದಾರೆ.
ಪಶ್ಚಿಮ ಚಂಪಾರಣೆಯಲ್ಲಿ ಭಾನುವಾರ ನಡೆಯುತ್ತಿರುವ ಜನ್ ಸೂರಜ್ ಅಭಿಯಾನವನ್ನು ರಾಜಕೀಯ ಪಕ್ಷವನ್ನಾಗಿ ಮಾಡಲಾಗುವುದೇ ಎಂಬ ಬಗ್ಗೆ ಜನರ ಅಭಿಪ್ರಾಯ ಪಡೆಯಲಾಗುವುದು ಎಂದಿದ್ದಾರೆ.
ಬಿಹಾರ ರಾಜ್ಯದಲ್ಲಿ 3,500 ಕಿಮೀ ಉದ್ದದ ಪಾದಯಾತ್ರೆ ನಡೆಸುತ್ತಿರುವ ಪ್ರಶಾಂತ್ ಕಿಶೋರ್, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
"ಜೆಡಿಯು ನಾಯಕರು ನನ್ನನ್ನು ನಿಂದಿಸಲು ಬಹಳ ಇಷ್ಟಪಡುತ್ತಾರೆ. ನನಗೆ ರಾಜಕೀಯ ತಿಳುವಳಿಕೆ ಇಲ್ಲದಿದ್ದರೆ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ಎರಡು ವರ್ಷಗಳಿಂದ ನಾನು ಏನು ಮಾಡುತ್ತಿದ್ದೆ ಎಂದು ಅವರುಗಳು ಮುಖ್ಯಮಂತ್ರಿಗಳನ್ನು ಕೇಳಬೇಕು" ಎಂದು ವ್ಯಂಗ್ಯವಾಡಿದ್ದಾರೆ.

"ಕಳೆದ 10 ವರ್ಷಗಳ ಹಿಂದೆ ನಿತೀಶ್ ಕುಮಾರ್ ಏನಾಗಿದ್ದರು ಮತ್ತು ಈಗ ಇರುವುದರ ನಡುವೆ ಬಹಳ ವ್ಯತ್ಯಾಸವಿದೆ. ಅವರು 2014 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನೈತಿಕ ಹೊಣೆಗಾರಿಕೆಯನ್ನು ಹೊತ್ತು ತಮ್ಮ ಕುರ್ಚಿಯನ್ನು ತ್ಯಜಿಸಿದ್ದರು. ಆದರೆ, ಈಗ ಅಧಿಕಾರದಲ್ಲಿ ಉಳಿಯಲು ಯಾವುದೇ ರೀತಿಯ ರಾಜಿಗೆ ಸಿದ್ಧರಾಗಿದ್ದಾರೆ" ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.












Click it and Unblock the Notifications