ದೆಹಲಿಯಲ್ಲಿರುವ ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದ್ದಾರೆ: ಮೋದಿ
ನವದೆಹಲಿ, ಡಿಸೆಂಬರ್ 26: ದೆಹಲಿಯಲ್ಲಿರುವ ಕೆಲವು ಜನರು ನನಗೆ ಪ್ರಜಾಪ್ರಭುತ್ವ ಕಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. ಭಾರತದಲ್ಲಿ ಯಾವ ಪ್ರಜಾಪ್ರಭುತ್ವವೂಉಳಿದಿಲ್ಲ ಎಂದು ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಇತ್ತೀಚೆಗೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ವಿರುದ್ಧ ಎದ್ದು ನಿಲ್ಲುವವರನ್ನು ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಅದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆದರೂ ಸರಿ ಎಂದು ರಾಹುಲ್ ಟೀಕಿಸಿದ್ದರು.
'ದೆಹಲಿಯಲ್ಲಿ ಕೆಲವು ಜನರಿದ್ದಾರೆ. ಅವರು ಯಾವಾಗಲೂ ನನ್ನನ್ನು ಹಂಗಿಸುವ ಮತ್ತು ಅವಮಾನಿಸುವ ಕೆಲಸ ಮಾಡುತ್ತಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠ ಕಲಿಸಲು ಬಯಸಿದ್ದಾರೆ. ಪ್ರಜಾಪ್ರಭುತ್ವದ ಉದಾಹರಣೆಯನ್ನಾಗಿ ನಾನು ಅವರಿಗೆ ಜಮ್ಮು ಮತ್ತು ಕಾಶ್ಮೀರ ಡಿಡಿಸಿ ಚುನಾವಣೆಯ ಫಲಿತಾಂಶವನ್ನು ತೋರಿಸಲು ಬಯಸಿದ್ದೇನೆ' ಎಂದು ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಆರೋಗ್ಯ ವಿಮೆ ಕಲ್ಪಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಷ್ಠಾನಗೊಳಿಸಿ ಅವರು ಮಾಡನಾಡಿದರು.

'ಕೆಲವು ರಾಜಕೀಯ ಶಕ್ತಿಗಳು ಪ್ರಜಾಪ್ರಭುತ್ವದ ಬೋಧನೆ ಮಾಡುವುದನ್ನು ಮುಂದುವರಿಸಿವೆ. ಆದರೆ ಅವರ ನಕಲಿತನ ಮತ್ತು ಪೊಳ್ಳುತನವನ್ನು ನೋಡಿ. ಪುದುಚೆರಿಯಲ್ಲಿ ಆಡಳಿತ ಮಾಡುತ್ತಿರುವ ಪಕ್ಷವು ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಡೆಸಿಲ್ಲ. ಆದರೆ ಕೇಂದ್ರಾಡಳಿತ ಪ್ರದೇಶವಾಗಿ ಒಂದು ವರ್ಷದೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯಿತಿ ಮಟ್ಟದ ಚುನಾವಣೆ ನಡೆಸಲಾಗಿದೆ' ಎಂದು ಹೇಳಿದರು.
'ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಚುನಾವಣೆಯು ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿದೆ' ಎಂದ ಅವರು, ಎಂಟು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಮತ ಹಾಕಿದ ಜನರನ್ನು ಅಭಿನಂದಿಸಿದರು.












Click it and Unblock the Notifications