ಆಮ್ಲಜನಕ ಬಿಕ್ಕಟ್ಟಿಗೆ ಮೂರು ಪ್ರಮುಖ ಸಲಹೆ ನೀಡಿದ ಮೋದಿ
ನವದೆಹಲಿ, ಏಪ್ರಿಲ್ 22: ಭಾರತದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾದಂತೆ ಹಲವೆಡೆ ವೈದ್ಯಕೀಯ ಆಮ್ಲಜನಕಕ್ಕೆ ತೀವ್ರ ಅಭಾವ ಉಂಟಾಗಿದೆ. ಹೀಗಾಗಿ ದೇಶದಲ್ಲಿ ಆಮ್ಲಜನಕ ಸರಬರಾಜು ಕುರಿತ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಈ ಸಂದರ್ಭ ಆಮ್ಲಜನಕದ ಬಿಕ್ಕಟ್ಟನ್ನು ನಿವಾರಿಸಲು ಮೋದಿ, ಮೂರು ಪ್ರಮುಖ ಅಂಶಗಳ ಮೇಲೆ ಕಾರ್ಯ ನಿರ್ವಹಿಸುವ ಸಲಹೆಯನ್ನು ನೀಡಿದ್ದಾರೆ.
ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸುವುದು, ಆಮ್ಲಜನಕ ವಿತರಣೆ ವೇಗ ವರ್ಧಿಸುವುದು ಹಾಗೂ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಒದಗಿಸಲು ನವೀನ ಮಾರ್ಗಗಳನ್ನು ಕಂಡುಕೊಳ್ಳುವುದು ಅತಿ ಮಹತ್ವದ ಅಂಶಗಳಾಗಿವೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ನೀತಿ ಆಯೋಗ ಹಾಗೂ ಇತರೆ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು.
ರಾಜ್ಯಗಳ ಸಮನ್ವಯದೊಂದಿಗೆ ದೇಶದಲ್ಲಿ ಆಮ್ಲಜನಕ ಪೂರೈಕೆಯ ಸ್ಥಿತಿಗತಿ ಕುರಿತು ವಿಸ್ತೃತ ಮಾಹಿತಿ ಪಡೆದಿದ್ದು, ಆಮ್ಲಜನಕದ ಬೇಡಿಕೆ ಹಾಗೂ ಬೇಡಿಕೆಗೆ ತಕ್ಕಂತೆ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಹಾಗೂ ಆಮ್ಲಜನಕ ಪೂರೈಕೆ ಪ್ರಮಾಣ ಏರಿಸುವುದರ ಕುರಿತು ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications