ಎಷ್ಟು ಉಗ್ರರು ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ್ದರು?
ಬೆಂಗಳೂರು, ಜನವರಿ 05 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಗುರುದಾಸ್ಪುರ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ಅಹಪಹರಣ ಮಾಡಿದ ಉಗ್ರರು ಎಷ್ಟು ಜನ? ಎಂದು ಎನ್ಐಎ ತನಿಖೆ ಆರಂಭಿಸಿದೆ.
ಗುರುದಾಸ್ಪುರ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ಹಾಗೂ ಅವರ ಸಹಾಯಕನನ್ನು ವಾಹನದ ಸಮೇತ ಅಹರಿಸಿದ ಉಗ್ರರು, ನಂತರ ಆ ಕಾರಿನಲ್ಲಿಯೇ ಪಠಾಣ್ ಕೋಟ್ ವಾಯುನೆಲೆ ಸಮೀಪಕ್ಕೆ ಆಗಮಿಸಿದ್ದರು. ಸಲ್ವಿದರ್ ಸಿಂಗ್ ಅವರು ಹೇಳುವ ಪ್ರಕಾರ 5 ಉಗ್ರರು ಅಪಹರಣ ಮಾಡಿದ್ದರು. [ಪಠಾಣ್ ಕೋಟ್ ಕಾರ್ಯಾಚರಣೆ ಅಂತ್ಯ, 6 ಉಗ್ರರ ಹತ್ಯೆ]
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸಲ್ವಿಂದರ್ ಸಿಂಗ್ ಹಾಗೂ ಅವರ ಸಹಾಯಕ ಮದನ್ ಗೋಪಾಲ್ ವಿಚಾರಣೆ ನಡೆಸಿದಾಗ ಎಷ್ಟು ಉಗ್ರರು ಇದ್ದರು? ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. ಸಲ್ವಿಂದರ್ ಸಿಂಗ್ ಅವರ ಬಳಿ ಪಠಾಣ್ ಕೋಟ್ ದಾರಿ ಕೇಳಿದ ಉಗ್ರರು ಕಾಡಿನಲ್ಲಿ ಅವರನ್ನು ಬಿಟ್ಟು, ಕಾರನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]
ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದಾಖಲು ಮಾಡಿಕೊಂಡು ಎನ್ಐಎ ತನಿಖೆ ನಡೆಸುತ್ತಿದೆ. ಉಗ್ರರು ವಾಯುನೆಲೆಯಿಂದ ಸುಮಾರು 1 ಕಿ.ಮೀ.ದೂರದಲ್ಲಿಯೇ ಕಾರು ನಿಲ್ಲಿಸಿ, ಅಲ್ಲಿಂದ ವಾಯುನೆಲೆಗೆ ಆಗಮಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಎಸ್ಪಿಯನ್ನು ಏಕೆ ಸುಮ್ಮನೆ ಬಿಟ್ಟರು? : ಪೊಲೀಸ್ ವರಿಷ್ಠಾಧಿಕಾರಿಯೇ ಕೈಗೆ ಸಿಕ್ಕಿದರೂ ಉಗ್ರರು ಅವರನ್ನು ಏಕೆ ಸುಮ್ಮನೆ ಬಿಟ್ಟರು ಎಂಬ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಟ್ಯಾಕ್ಸಿಯಲ್ಲಿ ಬಂದ ಉಗ್ರರು ಅದರ ಚಾಲಕನನ್ನು ಹತ್ಯೆ ಮಾಡಿ, ನಂತರ ಎಸ್ಪಿ ಕಾರನ್ನು ಅಪಹರಣ ಮಾಡಿ ಅದರ ಮೂಲಕ ವಾಯುನೆಲೆ ತಲುಪಿದ್ದರು.
ಉಗ್ರರ ಬಳಿ ತಾನು ಪೊಲೀಸ್ ವರಿಷ್ಠಾಧಿಕಾರಿ ಎಂದು ಹೇಳಿರಲಿಲ್ಲ. ತನ್ನ ಕೈ ಮತ್ತು ಕಣ್ಣನ್ನು ಕಟ್ಟಿ ಕಾಡಿನಲ್ಲಿ ಬಿಟ್ಟು ಹೋದರು ಎಂದು ಎನ್ಐಎ ವಿಚಾರಣೆ ವೇಳೆ ಸಿಂಗ್ ಹೇಳಿದ್ದಾರೆ. ಸಿಂಗ್ ಪೊಲೀಸ್ ಎಂಬುದನ್ನು ತಿಳಿಯದ ಉಗ್ರರು ಅವರ ಬಳಿ ದಾರಿ ಕೇಳಿಕೊಂಡು, ನಂತರ ಅವರನ್ನು ಕಾಡಿನಲ್ಲಿ ತಳ್ಳಿ, ಕಾರಿನೊಂದಿಗೆ ಪರಾರಿಯಾಗಿದ್ದರು.
ಸುಮಾರು 60 ಗಂಟೆಗಳ ಕಾರ್ಯಾಚರಣೆ ಬಳಿಕ ಪಠಾಣ್ ಕೋಟ್ ವಾಯುನೆಲೆಯಲ್ಲಿ ಅಡಗಿದ್ದ ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾತ್ತು. ಸೋಮವಾರ ಸಂಜೆ 6ನೇ ಉಗ್ರನನ್ನು ಯೋಧರು ಕೊಂದು ಹಾಕಿದ್ದರು. ಜನವರಿ 2ರ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಉಗ್ರರು ವಾಯುನೆಲೆಗೆ ನುಗ್ಗಿದ್ದರು. [ಪಿಟಿಐ ಚಿತ್ರ]