ಸಂಸತ್ತಿನ ಮಳೆಗಾಲದ ಅಧಿವೇಶನ: ಚಕ್ರವ್ಯೂಹದಲ್ಲಿ ಮೋದಿ ಸರಕಾರ!
ಸಂಸತ್ತಿನ ಮಳೆಗಾಲದ ಅಧಿವೇಶನ, ಜುಲೈ 17ರಿಂದ ಆರಂಭವಾಗಲಿದೆ. ಜುಲೈ ಹದಿನೇಳರಿಂದ ಆಗಸ್ಟ್ ಹನ್ನೊಂದರವರೆಗೆ ಅಧಿವೇಶನ ನಡೆಯಲಿದೆ. ಒಟ್ಟಾರೆ 26 ದಿನದ ಅವಧಿಯಲ್ಲಿ 19ದಿನ ಅಧಿವೇಶನ ನಡೆಯಲಿದೆ.
ನವದೆಹಲಿ, ಜುಲೈ 17: ಸಂಸತ್ತಿನ ಮಳೆಗಾಲದ ಅಧಿವೇಶನ, ಸೋಮವಾರದಿಂದ (ಜುಲೈ 17) ಆರಂಭವಾಗಲಿದೆ. ಜುಲೈ ಹದಿನೇಳರಿಂದ ಆಗಸ್ಟ್ ಹನ್ನೊಂದರವರೆಗೆ ಅಧಿವೇಶನ ನಡೆಯಲಿದೆ.
ಒಟ್ಟಾರೆ 26 ದಿನದ ಅವಧಿಯಲ್ಲಿ 19ದಿನ ಅಧಿವೇಶನ ನಡೆಯಲಿದೆ. ಕಳೆದ ಎರಡು ಅಧಿವೇಶನದ ವೇಳೆ ವಿಪಕ್ಷಗಳು ಸಂಸತ್ತಿನ ಅಮೂಲ್ಯ ಸಮಯವನ್ನು ಪೋಲು ಮಾಡಿದವು ಎನ್ನುವ ಸಾರ್ವಜನಿಕ ಅಭಿಪ್ರಾಯದ ನಡುವೆ, ವಿಪಕ್ಷಗಳು ಮತ್ತೆ ಮೋದಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಲು ಸಜ್ಜಾಗಿವೆ.
ಕಾಶ್ಮೀರ, ಚೀನಾ ಗಡಿ ತಂಟೆ, ಜಿಎಸ್ಟಿ, ರಾಷ್ಟ್ರಪತಿ ಚುನಾವಣೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಮೋದಿ ಸರಕಾರದ ವಿರುದ್ದ ಮುಗಿಬೀಳುವುದು ನಿಶ್ಚಿತ, ವಿಪಕ್ಷಗಳ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಯಾವ ರೀತಿ ಉತ್ತರ/ತಿರುಗೇಟು ನೀಡಲಿದೆ ಎನ್ನುವುದೇ ಕುತೂಹಲ!
ವಾಡಿಕೆಯಂತೆ ಅಧಿವೇಶನಕ್ಕೆ ಮುನ್ನ ಕೇಂದ್ರ ಸರಕಾರ ವಿಪಕ್ಷಗಳ ಸಭೆಯನ್ನು ಕರೆದು ಸಂಸತ್ತಿನ ಅಮೂಲ್ಯ ಸಮಯ ಹಾಳಾಗದಂತೆ ಸಹಕರಿಸಲು ಎಲ್ಲಾ ವಿಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿದ್ದಾಗಿದೆ.
ಅಮರನಾಥ್ ಯಾತ್ರಾರ್ಥಿಗಳ ಮೇಲಿನ ಉಗ್ರರ ದಾಳಿ, ಗಂಭೀರ ಸ್ವರೂಪ ಪಡೆದುಕೊಂಡಿರುವ ಚೀನಾ ಗಡಿ ಸಮಸ್ಯೆ ಮುಂತಾದ ವಿಷಯಗಳನ್ನು ಇಟ್ಟುಕೊಂಡು, ವಿಪಕ್ಷಗಳು ಮೋದಿ ಸರಕಾರದ ವಿರುದ್ದ ತಿರುಗಿಬೀಳುವುದು ಖಂಡಿತ.
ಮೋದಿ ಸರಕಾರಕ್ಕೆ ಭಾರೀ ಪ್ರಶ್ನೆಗಳ ಸುರಿಮಳೆಗಳನ್ನೇ ತಂದೊಡ್ಡುವ ಪ್ರಮುಖ ವಿಷಯಗಳು, ಮುಂದೆ ಓದಿ..
ನಕಲಿ ಗೋರಕ್ಷರಿಂದ ಕೇಂದ್ರ ಸರಕಾರಕ್ಕೆ ಮುಜುಗರ
ಗೋಹತ್ಯೆಯ ವಿಚಾರದಲ್ಲಿ ನಡೆಯುತ್ತಿರುವ ದಾಳಿಗಳು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಅಧಿವೇಶನದಲ್ಲಿ ಭಾರೀ ಮುಜುಗರ ತರುವ ಸಾಧ್ಯತೆಯಿದೆ. ನಕಲಿ ಗೋರಕ್ಷಕರ ವಿರುದ್ದ ಮೋದಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ, ಗೋವಿನ ವಿಚಾರದಲ್ಲಿ ರಾದ್ದಾಂತ ಮಾಡುತ್ತಿರುವವರು ಬಿಜೆಪಿ, ಸಂಘ ಪರಿವಾರದ ಹಿನ್ನಲೆಯವರು ಎಂದೇ ಗುರುತಿಸಲಾಗುತ್ತಿದೆ.
ಅಮರನಾಥ್ ಯಾತ್ರಾರ್ಥಿಕರ ಮೇಲೆ ನಡೆದ ಉಗ್ರರ ದಾಳಿ
ದೇಶದ ಸ್ವಾಭಿಮಾನದ ಪ್ರಶ್ನೆಯಂತಾಗಿರುವ ಅಮರನಾಥ್ ಯಾತ್ರಾರ್ಥಿಕರ ಮೇಲೆ ನಡೆದ ಉಗ್ರರ ದಾಳಿ, ಸಂಸತ್ತಿನಲ್ಲಿ ಮೋದಿ ಸರಕಾರಕ್ಕೆ ಭಾರೀ ಹಿನ್ನಡೆ ತಂದೊಡ್ದುವುದು ಗ್ಯಾರಂಟಿ. ಗುಪ್ತಚರ ಎಚ್ಚರಿಕೆಯ ನಡುವೆಯೂ ನಡೆದ ಭದ್ರತಾ ವೈಫಲ್ಯ, ಮೋದಿ ಸರಕಾರದ ವಿರುದ್ದ ಅಧಿವೇಶನದಲ್ಲಿ ವಿಪಕ್ಷಗಳು ಮುಗಿಬೀಳುವುದು ನಿಶ್ಚಿತ.
ಜಿಎಸ್ಟಿ ಕಾನೂನಿನಲ್ಲಿನ ಪ್ಲಸ್, ಮೈನಸ್
ದೇಶಕ್ಕೆಲ್ಲಾ ಒಂದೇ ಕಾನೂನು (ಜಿಎಸ್ಟಿ) ವಿಚಾರದಲ್ಲಿ ಗಂಭೀರ ಚರ್ಚೆಯಾಗಲಿದೆ. ಪೂರ್ವ ತಯಾರಿ ನಡೆಸದೇ ಮೋದಿ ಸರಕಾರ ಮಹತ್ವದ ಈ ನಿರ್ಧಾರ ತೆಗೆದುಕೊಂಡಿತು, ಬಡವರ ಮತ್ತು ವ್ಯಾಪಾರಸ್ಥರ ಬದುಕು ಹೈರಾಣವಾಯಿತು ಎಂದು ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ದ ತಿರುಗಿಬೀಳಲಿವೆ.
ರಾಷ್ಟ್ರಪತಿ ಚುನಾವಣೆಗೆ ದೇಶ ಸಜ್ಜು
ರಾಷ್ಟ್ರಪತಿ ಚುನಾವಣೆಯ ವಿಚಾರದಲ್ಲೂ ಭಾರೀ ರಾದ್ದಾಂತ ಆಗುವ ಸಾಧ್ಯತೆಯಿಲ್ಲದಿಲ್ಲ. ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟ ದಲಿತ ಸಮುದಾಯದ ಮುಖಂಡರನ್ನು ಪರಮೋಚ್ಚ ಹುದ್ದೆಗೆ ಅಭ್ಯರ್ಥಿಯಾಗಿ ನಿಲ್ಲಿಸಿರುವುದರಿಂದ ಸದನದಲ್ಲಿ ವಾಗ್ಯುದ್ದ ನಿಶ್ಚಿತ.
ಹಲವು ಮಸೂದೆ ಮಂಡನೆ
ಈ ಅಧಿವೇಶನದಲ್ಲಿ ಶೈಕ್ಷಣಿಕ, ರಾಷ್ಟ್ರೀಯ ಭದ್ರತೆ, ಹಣಕಾಸು, ಕಾರ್ಮಿಕ, ಈಶಾನ್ಯ ಭಾರತದ ಕಾರ್ಮಿಕರ ಕಲ್ಯಾಣ ಮತ್ತು ಬಂದರು ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ಮಸೂದೆ ಚರ್ಚೆಗೆ ಬರುವ ಸಾಧ್ಯತೆಯಿದೆ.
ಚಕ್ರವ್ಯೂಹದಲ್ಲಿ ಮೋದಿ ಸರಕಾರ
ಪ್ರಮುಖವಾಗಿ ಸಿಕ್ಕಿಂ ವಿಚಾರದಲ್ಲಿ ಚೀನಾ ಗಡಿತಂಟೆ, ಅಮರನಾಥ್ ದಾಳಿ ಸಂಸತ್ತಿನ ಉಭಯ ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಲಿದೆ. ಅಧಿವೇಶನದ ಮೊದಲ ದಿನ ಮೃತಪಟ್ಟ ಸಂಸತ್ತಿನ ಸದಸ್ಯರಿಗೆ ಶ್ರದ್ದಾಂಜಲಿ ಅರ್ಪಿಸಲು ಸಮಯ ನಿಗದಿಯಾಗಿರುವುದರಿಂದ ಮಂಗಳವಾರದಿಂದ ಪೂರ್ಣ ಪ್ರಮಾಣದಲ್ಲಿ ಅಧಿವೇಶನ ಆರಂಭವಾಗಬಹುದು.