ಮೋದಿಯನ್ನು ಭೇಟಿಯಾಗಿ ಗಂಗೆಯ ಬಗ್ಗೆ ಚರ್ಚಿಸಿದ ನಿತಿಶ್
ನವದೆಹಲಿ, ಮೇ 27 : "ನನ್ನ ಮತ್ತು ನರೇಂದ್ರ ಮೋದಿ ಭೇಟಿಯ ಬಗ್ಗೆ ವಿಶೇಷವಾದ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗಂಗಾ ನದಿ ತೀರ ಮಲಿನವಾಗಿದ್ದು, ಇದರಿಂದಾಗಿ ಪ್ರವಾಹದ ಭೀತಿ ಕಾಡುತ್ತಿದೆ. ಈ ಕುರಿತಂತೆ ಮೋದಿಯೊಡನೆ ಭೇಟಿಯಾಗಿ ಚರ್ಚಿಸಿದ್ದೇನೆ" ಎಂದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆದಿದ್ದ ಸಭೆಗೆ ಚಕ್ಕರ್ ಹಾಕಿದ್ದ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಕುತೂಹಲ ಏಕೆಂದರೆ, ಸೋನಿಯಾ ಗಾಂಧಿ ಅವರು ಶುಕ್ರವಾರ, ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಯ ಕುರಿತಂತೆ ಕರೆದಿದ್ದ ಸಭೆಗೆ ನಿತಿಶ್ ಕುಮಾರ್ ಅವರು ಗೈರಾಗಿದ್ದರು. ಆದರೆ ಮರುದಿನವೇ, ಮೋದಿ ಅವರ ಆಹ್ವಾನವನ್ನು ಮನ್ನಿಸಿ ನಿತಿಶ್ ಅವರು ಪ್ರಧಾನಿಯನ್ನು ಭೇಟಿಯಾಗಿದ್ದಾರೆ.

ಇಬ್ಬರ ನಡುವಿನ ಭೇಟಿಯಲ್ಲಿ ಅಂತಹ ವಿಶೇಷತೆಯೇನೂ ಇಲ್ಲ. ಮಾರಿಷಸ್ ಪ್ರಧಾನಿ ಅವರ ಭೇಟಿಯ ನಿಮಿತ್ತ ಆಯೋಜಿಸಲಾಗಿದ್ದ ಸ್ನೇಹಕೂಟಕ್ಕೆ ನೀಡಿದ್ದ ಆಹ್ವಾನ ಮನ್ನಿಸಿ ಬಂದಿದ್ದೇನೆ. ಮೋದಿಯವರೊಂದಿಗೆ ರಾಜ್ಯಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಚರ್ಚಿಸಿದ್ದೇನೆ ಎಂದು ನಿತಿಶ್ ಹೇಳಿದರು.
ಸೋನಿಯಾ ಕರೆದಿದ್ದ ಸಭೆಯಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಗೆ ನಿತಿಶ್ ಅವರು ಹಾರಿಕೆಯ ಉತ್ತರ ನೀಡಿದ್ದರು. ಶರದ್ ಯಾವದ್ ಅವರು ಪ್ರತಿನಿಧಿಸಿದ್ದರಿಂದ ತಾವು ಸಭೆಯಲ್ಲಿ ಹೋಗಲಿಲ್ಲ. ಇದಕ್ಕೆ ವಿಪರೀತ ಅರ್ಥ ಕಲ್ಪಿಸಬಾರದು ಎಂದು ನಿತಿಶ್ ಅವರು ಹೇಳಿದ್ದರು. [ಈ 20 ಪ್ರಭಾವಿ ವ್ಯಕ್ತಿಗಳಲ್ಲಿ ರಾಷ್ಟ್ರಪತಿಯಾಗಲು ಯಾರು ಸಮರ್ಥರು?]
ಒಂದೆಡೆ ಲಾಲೂ ಪ್ರಸಾದ್ ಯಾದವ್ ಅವರು ಮತ್ತೆ ಮೇವು ಹಗರಣದಲ್ಲಿ ಸಿಲುಕಿದ್ದಾರೆ, ಮತ್ತೊಂದೆಡೆ ಮೋದಿ ಅವರ ಜನಪ್ರಿಯತೆ ಉತ್ತುಂಗಕ್ಕೇರುತ್ತದೆ ಮತ್ತು ಬಿಜೆಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಿದೆ. [ಮೋದಿ ಸಭೆಗೆ ರಾಜಕೀಯ ಕಡುವೈರಿ ಹಾಜರ್!]
ಒಂದಾನೊಂದು ಕಾಲದಲ್ಲಿ ಸ್ನೇಹಿತರಾಗಿದ್ದು, ನಂತರ ಮೋದಿ ಕಂಡರೆ ಕೆಂಡ ಕಾರುತ್ತಿದ್ದ ನಿತಿಶ್ ಅವರು ಮತ್ತೆ ಮೋದಿಯ ಕೈಕುಲುಕಿರುವುದು ಅವರ ವಿರೋಧಿಗಳಿಗೆ ನುಂಗಿಕೊಳ್ಳದ ಸಂಗತಿಯಾದರೂ ಅಚ್ಚರಿಯಿಲ್ಲ. [ಸಂಭಾವ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದಷ್ಟು]












Click it and Unblock the Notifications