ಮೋದಿ ಸಭೆಯಲ್ಲಿ ಸ್ಪೋಟ: ಉಗ್ರರು ತಪ್ಪಿಸಿಕೊಂಡಿದ್ದು ಹೀಗೆ
ನವದೆಹಲಿ, ನ 20: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸಿದ್ದ ಪಾಟ್ನಾದ 'ಹೂಂಕಾರ್' ಸಾರ್ವಜನಿಕ ಸಭೆಯಲ್ಲಿ ನಡೆದ ಸರಣಿ ಸ್ಪೋಟದ ರೂವಾರಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಪೊಲೀಸರು ಮಾಡಿಕೊಂಡ ಎಡವಟ್ಟೇ ಕಾರಣ ಎಂದು ರಾಷ್ಟ್ರೀಯ ತನಿಖಾ ತಂಡ (NIA) ಹೇಳಿದೆ.
ಅತಿ ಸುಲಭವಾಗಿ ಹಿಡಿದು ಹಾಕಬಹುದಾಗಿದ್ದ ಆರೋಪಿಗಳು ರಾಯಪುರದಿಂದ ತಪ್ಪಿಸಿಕೊಂಡರು. ಸ್ಪೋಟಕ್ಕೆ ಕಾರಣರಾದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಹನ್ನೆರಡು ಕಾರ್ಯಕರ್ತರು ರಾಯಪುರದಲ್ಲೇ ತಂಗಿದ್ದರು.
ಈ ಮಾಹಿತಿಯನ್ನು ಪಾಟ್ನಾ ಪೊಲೀಸರು ಮಾಧ್ಯಮಗಳಿಗೆ ನೀಡಿ ಎಡವಟ್ಟು ಮಾಡಿಕೊಂಡರು ಎಂದು NIA ಅಧಿಕಾರಿಗಳು 'ಮಾಧ್ಯಮ'ಗಳಿಗೆ ತಿಳಿಸಿದ್ದಾರೆ. (ಪಾಟ್ನಾದಲ್ಲಿ ಸರಣಿ ಬಾಂಬ್ ಸ್ಫೋಟ, ಐವರು ಸಾವು)
ಸ್ಪೋಟದ ರೂವಾರಿಗಳು ರಾಯಪುರದಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರನ್ನು ಸೆರೆ ಹಿಡಿಯಲು ತನಿಖಾ ದಳದ ಅಧಿಕಾರಿಗಳು ರಾಯಪುರದಲ್ಲಿ ಬೀರು ಬಿಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಪಾಟ್ನಾ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದರು. ಇದರಿಂದ ಎಚ್ಚೆತ್ತುಗೊಂಡ ಉಗ್ರರು ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು NIA ಅಧಿಕಾರಿಗಳು ಹೇಳಿದ್ದಾರೆ.
Actually, ಪೊಲೀಸರಿಗೆ ಮಾಹಿತಿ ನೀಡಿದ್ದು 'ಸಿಮಿ'. ಮುಂದೆ ಓದಿ..
ಸಿಮಿ
ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ (ಸಿಮಿ) ಸಂಘಟನೆಯ ಏಳು ಜನ ಸದಸ್ಯರನ್ನು ಪಾಟ್ನಾ ನಗರ ವ್ಯಾಪ್ತಿಯಿಂದ ಪೊಲೀಸರು ಬಂಧಿಸಿದ್ದರು. ಇವರು ನೀಡಿದ ಮಾಹಿತಿ ಪ್ರಕಾರ ಇಂಡಿಯನ್ ಮುಜಾಹಿದೀನ್ ಉಗ್ರರು ಮಾಧ್ಯಮಗಳಲ್ಲಿ ಬಂದ ವರದಿಗಳ ನಂತರ ರಾಯಪುರದಿಂದ ಪಲಾಯನಗೈದರು.
ಮೋದಿ ಸಾರ್ವಜನಿಕ ಸಭೆ
ದೇಶದೆಲ್ಲಡೆ ಭಾರೀ ಸುದ್ದಿ ಮಾಡಿದ್ದ ಅಕ್ಟೋಬರ್ 27ರಂದು ಪಾಟ್ನಾದಲ್ಲಿ ನಡೆದ ನರೇಂದ್ರ ಮೋದಿಯ 'ಹೂಂಕಾರ್ ಸಾರ್ವಜನಿಕ ಸಭೆ'ಯಲ್ಲಿ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿತ್ತು. ಗಾಂಧಿ ಮೈದಾನದಲ್ಲಿ ನಡೆದ ಈ ಸಭೆಯಲ್ಲಿ ನಾಲ್ಕು ಸ್ಪೋಟ ಸಂಭವಿಸಿತ್ತು. ಪಾಟ್ನಾ ರೈಲು ನಿಲ್ದಾಣ, ಗಾಂಧಿ ಮೈದಾನ ಸೇರಿ ಒಟ್ಟು ಆರು ಸ್ಪೋಟಗಳು ಸಂಭವಿಸಿ ಐದು ಮಂದಿ ಸಾವನ್ನಪ್ಪಿದ್ದರು.
ನೇಪಾಳಕ್ಕೆ ಪರಾರಿಯಾಗಲು ಉಗ್ರರ ಚಿಂತನೆ
ಇಂಡಿಯನ್ ಮುಜಾಹಿದೀನ್ ಉಗ್ರರು ಸ್ಪೋಟದ ನಂತರ ಪಾಟ್ನಾದಿಂದ ರಾಯಪುರಕ್ಕೆ ಬಂದು ಅಲ್ಲಿ ಕೆಲವು ದಿನ ತಂಗಲು ಬಯಸಿದ್ದರು. ತದನಂತರ ಮೋತಿಹಾರ್ ಮೂಲಕ ನೇಪಾಳಕ್ಕೆ ಹೋಗಲು ನಿಶ್ಚಯಿಸಿದ್ದರು. ಆದರೆ ಮಾಧ್ಯಮಗಳ ವರದಿಯ ನಂತರ ರಾಯಪುರದಲ್ಲೇ ಅಡಗಿ ಕೊಳ್ಳಲು ನಿರ್ಧರಿಸಿದ್ದರು.
ಇಂಡಿಯನ್ ಮುಜಾಹಿದೀನ್
ಐಎಂ ಉಗ್ರ ಸಂಘಟನೆಯ ನುಮಾನ್ ಅನ್ಸಾರಿ, ಹೈದರ್ ಆಲಿ, ತಾರಿಕ್ ಅನ್ಸಾರಿ ಸೇರಿದಂತೆ ಈ ಸ್ಪೋಟದಲ್ಲಿ ತೊಡಗಿಸಿ ಕೊಂಡಿದ್ದ ಉಗ್ರರು ಮಾಧ್ಯಮಗಳ ವರದಿಯ ನಂತರ ರಾಯಪುರದಿಂದ ಪರಾರಿಯಾದರು.
ಶಕ್ತಿ ಪ್ರದರ್ಶನ
ನಿತೀಶ್ ಕುಮಾರ್ ಅವರ ಜೆಡಿಯು, ಬಿಜೆಪಿಯಿಂದ ಬೇರ್ಪಟ್ಟ ನಂತರ ಮೊದಲ ಬಾರಿ ನರೇಂದ್ರ ಮೋದಿ ಬಿಹಾರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಇದೊಂದು ಭಾರತೀಯರ ಶಕ್ತಿ ಮತ್ತು ಏಕತೆಯ ಪ್ರದರ್ಶನ ಎಂದು ಹೇಳಿದ್ದರು.