ಸೋಮವಾರದಿಂದ ಮುಂಗಾರು ಅಧಿವೇಶನ- ಮಂಡನೆಯಾಗಲಿರುವ ಮಸೂದೆಗಳ ಪಟ್ಟಿ
ನವದೆಹಲಿ, ಜುಲೈ 18: ಇಂದು ಸೋಮವಾರದಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದೆ. ಮೊದಲ ದಿನದಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಯೂ ಇದೇ ಅಧಿವೇಶನದಲ್ಲಿ ನಡೆಯಲಿರುವುದು ವಿಶೇಷ.
ಮುಂಗಾರು ಅಧಿವೇಶನ ಇಂದು ಜುಲೈ 18ರಂದು ಆರಂಭಗೊಂಡು ಆಗಸ್ಟ್ 12ರವರೆಗೆ ನಡೆಯಲಿದೆ. ಒಟ್ಟು 26 ದಿನಗಳಲ್ಲಿ ಕಲಾಪ ನಡೆಯುವುದು 18 ದಿನ ಮಾತ್ರ.
ಈ ಬಾರಿಯ ಅಧಿವೇಶನದಲ್ಲಿ 32ಮಸೂದೆಗಳು ಪಟ್ಟಿಯಾಗಿವೆ. ಈ ಪೈಕಿ 24 ಹೊಸ ಮಸೂದೆಗಳಿವೆ. ಎಂಟು ಮಸೂದೆಗಳು ಈ ಹಿಂದೆ ಮಂಡನೆಯಾಗಿ ಅನುಮೋದನೆ ಕಾರ್ಯ ಉಳಿದುಕೊಂಡಿದೆ.
ಕಲಾಪ ನಡೆಯುವುದು ಅಲ್ಪ ಅವಧಿ ಮಾತ್ರ. ಆದರೆ 32 ಮಸೂದೆಗಳನ್ನು ಸರಕಾರ ಚರ್ಚೆಗೆ ತರುತ್ತಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಲ್ಪ ಅವಧಿಯಲ್ಲಿ ಇಷ್ಟೊಂದು ಮಸೂದೆಗಳ ಮೇಲೆ ಸಮರ್ಪಕವಾಗಿ ಚರ್ಚೆ ನಡೆಸಲು ಸಾಧ್ಯವಿಲ್ಲ. 17 ಮಸೂದೆಗಳ ಮೇಲೆ ಚರ್ಚೆ ನಡೆಯಲಿದೆ ಎಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ಧಾರೆ.

ಮಂಡನೆಯಾಗಲಿರುವ ಮಸೂದೆಗಳು
* ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ತಿದ್ದುಪಡಿ ಮಸೂದೆ, 2019
* ರಾಷ್ಟ್ರೀಯ ಮಾದಕ ವಸ್ತು ವಿರೋಧಿ ಮಸೂದೆ 2021
* ಕಾಫಿ ಪ್ರಚಾರ ಮತ್ತು ಅಭಿವೃದ್ಧಿ ಮಸೂದೆ 2022
* ಉದ್ಯಮ ಮತ್ತು ಸೇವೆ ಸಮುಚ್ಚಯ ಅಭಿವೃದ್ಧಿ ಮಸೂದೆ 2022
* ಬಹು ರಾಜ್ಯ ಸಹಕಾರ ಸಂಸ್ಥೆ ತಿದ್ದುಪಡಿ ಮಸೂದೆ 2022
* ಸರಕುಗಳ ನೊಂದಣಿ ಮತ್ತು ರಕ್ಷಣೆಯ ಭೌಗೋಳಿಕ ಸೂಚಕಗಳ ತಿದ್ದುಪಡಿ ಮಸೂದೆ 2022
* ಉಗ್ರಾಣ ಅಭಿವೃದ್ಧಿ ಮತ್ತು ನಿಬಂಧನೆ ತಿದ್ದುಪಡಿ ಮಸೂದೆ 2022
* ಸ್ಪರ್ಧೆ ತಿದ್ದುಪಡಿ ಮಸೂದೆ 2022
* ದಿವಾಳಿ ಸಂಹಿತೆ ತಿದ್ದುಪಡಿ ಮಸೂದೆ 2022
* ಪುರಾತನ ವಸ್ತು ಮತ್ತು ಪುರಾತತ್ವ ಸ್ಥಳ ಮತ್ತು ಅವಶೇಷ, ತಿದ್ದುಪಡಿ ಮಸೂದೆ 2022
* ಕಲಾಕ್ಷೇತ್ರ ಫೌಂಡೇಶನ್ ತಿದ್ದುಪಡಿ ಮಸೂದೆ 2022
* ಕಂಟೋನ್ಮೆಂಟ್ ಮಸೂದೆ 2022
* ಓಲ್ಡ್ ಗ್ರ್ಯಾಂಟ್ ಮಸೂದೆ 2022
* ಅರಣ್ಯ ಸಂರಕ್ಷಣೆ ತಿದ್ದುಪಡಿ ಮಸೂದೆ 2022
* ರಾಷ್ಟ್ರೀಯ ದಂತ ಆಯೋಗ ಮಸೂದೆ 2022
* ರಾಷ್ಟ್ರೀಯ ನರ್ಸಿಂಗ್ ಮತ್ತು ಮಿಡ್ವೈಫ್ ಕಮಿಷನ್ ಮಸೂದೆ 2022
* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ತಿದ್ದುಪಡಿ ಮಸೂದೆ 2022
* ಕೇಂದ್ರೀಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2022 (ರಾಷ್ಟ್ರೀಯ ರೈಲು ಸಾರಿಗೆ ಶಿಕ್ಷಣಸಂಸ್ಥೆಯನ್ನು ಗತಿ ಶಕ್ತಿ ವಿಶ್ವವಿದ್ಯಾಲಯವಾಗಿ ಬದಲಾಯಿಸಲು)
* ಕೇಂದ್ರೀಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2022 (ತೆಲಂಗಾಣದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲು)
* ಪ್ರೆಸ್ ಮತ್ತು ನಿಯತಕಾಲಿಕೆಗಳ ನೊಂದಣಿ ಮಸೂದೆ 2022
* ಗಣಿ ಮತ್ತ ಖನಿಜ ಅಭಿವೃದ್ಧಿ ಮತ್ತು ನಿಬಂಧನೆ ತಿದ್ದುಪಡಿ ಮಸೂದೆ 2022
* ಶಕ್ತಿ ಸಂರಕ್ಷಣೆ ತಿದ್ದುಪಡಿ ಮಸೂದೆ 2022
* ಛಚ್ತೀಸ್ಗಡ ಎಸ್ಟಿಯವರ ಸಂವಿಧಾನ ಶ್ರೇಣಿ ತಿದ್ದುಪಡಿ ಮಸೂದೆ 2022
* ತಮಿಳುನಾಡಿನ ಎಸ್ಟಿಯವರ ಸಂವಿಧಾನ ಶ್ರೇಣಿ ತಿದ್ದುಪಡಿ ಮಸೂದೆ 2022
* ವ್ಯಕ್ತಿಗಳ ಕಳ್ಳಸಾಗಾಣಿಕೆ ಮಸೂದೆ 2022
* ಕೌಟುಂಬಿಕ ನ್ಯಾಯಾಲಯಗಳ ತಿದ್ದುಪಡಿ ಮಸೂದೆ 2022

ಪ್ರಧಾನಿ ಗೈರಿಗೆ ವಿಪಕ್ಷಗಳ ಕಿಡಿ
ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನಾದಿನವಾದ ಭಾನುವಾರದಂದು ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಒಟ್ಟು 35 ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ಪೀಕರ್ ಕರೆದಿದ್ದ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿರಲಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ನೇತೃತ್ವ ವಹಿಸಿದ್ದರು. ನರೇಂದ್ರ ಮೋದಿ ಗೈರಾಗಿರುವ ವಿಚಾರದ ಬಗ್ಗೆ ವಿಪಕ್ಷಗಳು ತಗಾದೆ ತೆಗೆದಿವೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ವಿಪಕ್ಷಗಳ ಈ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ. ೨೦೧೪ಕ್ಕೆ ಮುನ್ನ ಕಾಂಗ್ರೆಸ್ ಅಧಿಕಾರ ಇದ್ದಾಗ ನಡೆಸಲಾಗುತ್ತಿದ್ದ ಸರ್ವಪಕ್ಷ ಸಭೆಗಳಲ್ಲಿ ಪ್ರಧಾನಿಯಾದವರು ಯಾವತ್ತೂ ಪಾಲ್ಗೊಂಡಿದ್ದಿರಲಿಲ್ಲ ಎಂದು ಹೇಳಿದ್ದಾರೆ.

ಸಂಸತ್ನ ಮೌಲ್ಯ ಕುಂದಿಸುವ ಪ್ರಯತ್ನ
'ಅಸಂಸದೀಯ ಅಭಿವ್ಯಕ್ತಿ' ಎಂಬ ಕಿರುಹೊತ್ತಗೆಯಲ್ಲಿ ಅಸಂಸದೀಯ ಪದಗಳ ಪಟ್ಟಿ ಮೊನ್ನೆಮೊನ್ನೆ ಬಿಡುಗಡೆ ಮಾಡಲಾಯಿತು. ಅದರಲ್ಲಿ ಸಂಸತ್ ಕಲಾಪದ ವೇಳೆ ಯಾವೆಲ್ಲಾ ಪದಗಳು ಅಸಂಸದೀಯ ಎಂಬುದನ್ನು ಪಟ್ಟಿ ಮಾಡಲಾಗಿದೆ. ಕೇಂದ್ರ ಸರಕಾರ ವಿಪಕ್ಷಗಳ ಬಾಯಿ ಮುಚ್ಚಿಸಲು ಈ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದಾರೆ.
ಆದರೆ ವಿಪಕ್ಷಗಳ ಈ ಆಕ್ಷೇಪಕ್ಕೂ ಪ್ರಲ್ಹಾದ್ ಜೋಷಿ ತಿರುಗೇಟು ನೀಡಿದ್ದಾರೆ. "1954ರಿಂದಲೂ ಲೋಕಸಭಾ ಕಾರ್ಯಾಲಯದಿಂದ ಅಸಂಸದೀಯ ಪದಗಳ ಪಟ್ಟಿ ಪ್ರಕಟವಾಗುತ್ತಲೇ ಇದೆ. ಅದೇ ಸಂಪ್ರದಾಯ ಮುಂದುವರಿದಿದೆ. ಮೇಲಾಗಿ, ಅಸಂಸದೀಯ ಅಭಿವ್ಯಕ್ತಿಯಲ್ಲಿ ಪಟ್ಟಿಯಾಗಿರುವ ಪದಗಳನ್ನು ನಿಷೇಧ ಮಾಡಲಾಗಿಲ್ಲ. ವಿಪಕ್ಷಗಳು ಸುಮ್ಮನೆ ಆರೋಪ ಮಾಡುತ್ತವೆ" ಎಂದು ಪ್ರಲ್ಹಾದ್ ಜೋಷಿ ಹೇಳಿದ್ದಾರೆ.

ಬಿಸಿ ಚರ್ಚೆಗೆ ವೇದಿಕೆಯಾಗುತ್ತೆ ಈ ಅಧಿವೇಶನ
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಜೊತೆಗೆ ಹಲವು ಮಸೂದೆಗಳ ಮೇಲೆ ಬಿಸಿ ಬಿಸಿ ಚರ್ಚೆಗಳು ನಡೆಯಲಿವೆ. ಹಾಗೆಯೇ, ಆರ್ಥಿಕ ಸಮಸ್ಯೆ, ಹಣದುಬ್ಬರ, ಅಗ್ನಿಪಥ್ ಯೋಜನೆ, ನಿರುದ್ಯೋಗ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ವಿಪಕ್ಷಗಳು ಸರಕಾರವನ್ನು ಹಣಿಯಲು ಸಿದ್ಧವಾಗಿವೆ.
ವಿಪಕ್ಷ ನಾಯಕರನ್ನು ಗುರಿಯಾಗಿಸಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿರುವ ಅರೋಪ ಇದೆ. ಈ ವಿಚಾರವನ್ನೂ ವಿಪಕ್ಷಗಳು ತಮ್ಮ ದಾಳಿಗೆ ಪ್ರಮುಖ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications