ತ್ರಿವಳಿ ತಲಾಖ್ ಬಗ್ಗೆ ಮೋದಿ, ಚುನಾವಣೆಗಿಂತ ಮಾನವೀಯತೆ ಮುಖ್ಯ
ಅಹಮದಾಬಾದ್, ಡಿಸೆಂಬರ್ 06: ಗುಜರಾತಿನಲ್ಲಿ ಚುನಾವಣಾ ಪ್ರಚಾರ ನಿರತ ಪ್ರಧಾನಿ ಮೋದಿ ಅವರು ತ್ರಿವಳಿ ತಲಾಖ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತ್ರಿವಳಿ ತಲಾಖ್ ಬಗ್ಗೆ ಚರ್ಚೆ ತಣ್ಣಗಾಗುವುದಿಲ್ಲ, ಎಲ್ಲವೂ ಚುನಾವಣೆ ಜತೆ ತಗುಲಿ ಹಾಕುವುದು ಸರಿಯಲ್ಲ. ಇದು ಮಹಿಳೆಯರ ಹಕ್ಕಿಗೆ ಸಂಬಂಧಿಸಿದ್ದು, ಚುನಾವಣೆಗಿಂತ ಮಾನವೀಯತೆ ಮುಖ್ಯ ಎಂದು ಧನ್ಧುಕದಲ್ಲಿ ಮೋದಿ ಅವರು ಹೇಳಿದರು.

ತ್ರಿವಳಿ ತಲಾಖ್ ಪ್ರಕರಣ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯಲ್ಲಿರುವಾಗ ಎಲ್ಲಾ ಮಾಧ್ಯಮಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು, ಮೋದಿ ಅವರು ತಲಾಖ್ ಬಗ್ಗೆ ಮಾತನಾಡುವುದಿಲ್ಲ, ಉತ್ತರಪ್ರದೇಶದ ಚುನಾವಣೆ ಮುಂದಿಟ್ಟುಕೊಂಡು ಮೋದಿ ಹೇಳಿಕೆ ನೀಡುವುದಿಲ್ಲ ಎಂದಿದ್ದರು. ಅನೇಕ ಮಂದಿ ಕೂಡಾ ಈ ಬಗ್ಗೆ ಮಾತನಾಡಬೇಡಿ, ಇದರಿಂದ ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದರು.
ಅಯೋಧ್ಯಾ ರಾಮಮಂದಿರ -ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಪಿಲ್ ಸಿಬಲ್ ಅವರು ಮುಸ್ಲಿಮರ(ಸುನ್ನಿ) ಪರ ವಾದಿಸುತ್ತಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಮುಂದಿನ ಚುನಾವಣೆ (2019ರ ಲೋಕಸಭೆ) ತನಕ ಈ ಪ್ರಕರಣ ಇತ್ಯರ್ಥವಾಗುವುದು ಬೇಡ ಎಂದು ಅವರು ವಾದದ ದಿಕ್ಕನ್ನು ಬದಲಿಸುವುದು ಎಷ್ಟು ಸರಿ? ಲೋಕಸಭೆ ಚುನಾವಣೆಗೆ ಹೇಗೆ ಇದನ್ನು ಜೋಡಿಸುತ್ತಾರೆ? ಎಂದು ಮೋದಿ ಪ್ರಶ್ನಿಸಿದರು.












Click it and Unblock the Notifications