ವಿದ್ಯಾರ್ಥಿಗಳಿಗೆ ಮೋದಿ, ಸಚಿನ್, ಆನಂದ್ ಕಿವಿಮಾತು
ನವದೆಹಲಿ, ಫೆ. 28: ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹಾಗೂ ಚೆಸ್ ಚತುರ ವಿಶ್ವನಾಥ್ ಆನಂದ್ ಅವರು ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಪ್ರಸಾರವಾದ 17ನೇ ಆವೃತ್ತಿಯ ಮನದ ಮಾತಿನಲ್ಲಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಕಿವಿಮಾತುಗಳಿವೆ.
ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಕ್ಸಾಅಮಿನೇಷನ್ (ಸಿಬಿಎಸ್ ಇ) 12ನೇ ಬೋರ್ಡ್ ಪರೀಕ್ಷೆ ಮಾರ್ಚ್ 1 ರಿಂದ ಏಪ್ರಿಲ್ 24 ರತನಕ ಹಾಗೂ ಮಾರ್ಚ್ 1 ರಿಂದ 10ನೇ ತರಗತಿ ಪರೀಕ್ಷೆಗಳು ಆರಂಭವಾಗಿ ಮಾರ್ಚ್ 28ರಂದು ಕೊನೆಗೊಳ್ಳಲಿದೆ.
ಇಲ್ಲಿ ತನಕ ಮೋದಿ ಅವರು ಮಾದಕ ವ್ಯಸನಿಗಳು, ರೈತರ ಸಮಸ್ಯೆ, ಭ್ರಷ್ಟಾಚಾರ, ಗಂಡು-ಹೆಣ್ಣು ಅನುಪಾತ, ಖಾದಿ, ರಸ್ತೆ ಅಪಘಾತ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಚಿನ್ ತೆಂಡೂಲ್ಕರ್ : ಸಾಧಿಸಬಹುದಾದ ಗುರಿಯನ್ನು ಇಟ್ಟುಕೊಂಡು ಅದರತ್ತ ಹೆಜ್ಜೆ ಇರಿಸಿ. ನಾನು ಕ್ರಿಕೆಟ್ ಆಡುವಾಗ ಜನರಲ್ಲಿ ನನ್ನ ಆಟದ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುತಿತ್ತು. ಆತ್ಮವಿಶ್ವಾಸದಿಂದ ಎಲ್ಲವನ್ನು ಎದುರಿಸುವುದನ್ನು ಕಲಿತುಕೊಳ್ಳಿ ಎಂದು ಸಚಿನ್ ಹೇಳಿದರು.
ನೀವು ನಿಮ್ಮ ಗುರಿಯತ್ತ ಸಾಗುತ್ತಿರುವ ಬಗ್ಗೆ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಲು ಕಾಲಕಾಲಕ್ಕೆ ಇಂಥ ಪರೀಕ್ಷೆಗಳು ಅಗತ್ಯ. ಸಚಿನ್ ಅವರ ಸಲಹೆ ನಿಮಗೆ ಬಲ ನೀಡಲಿ ಎಂದು ಪ್ರಧಾನಿ ಮೋದಿ ಹೇಳಿದರು.

ವಿಶ್ವನಾಥನ್ ಆನಂದ್: ತಾಳ್ಮೆಯಿಂದಿರಿ, ಒಳ್ಳೆ ಊಟ, ಒಳ್ಳೆ ನಿದ್ದೆ ಮಾಡಿ. ತಲೆಗೆ ಜಾಸ್ತಿ ಕೆಲಸ ಕೊಡಬೇಡಿ. ಕೊನೆ ಕ್ಷಣದಲ್ಲಿ ಒತ್ತಡ ಹೇರಿದರೆ ಕಲಿತ ಪಾಠವೆಲ್ಲ ಮರೆತು ಹೋಗುವ ಸಾಧ್ಯತೆ ಇರುತ್ತದೆ. ಪ್ರತಿದಿನ ಓದುವ ಅಭ್ಯಾಸ ಇರಿಸಿಕೊಂಡರೆ ಯಾವುದು ಸಮಸ್ಯೆ ಎನಿಸುವುದಿಲ್ಲ. ನಾನು ಚೆಸ್ ಪಂದ್ಯಗಳಿಗೆ ಇದೇ ರೀತಿ ಅಭ್ಯಾಸ ಮಾಡಿಕೊಳ್ಳುತ್ತೇನೆ.












Click it and Unblock the Notifications