ಸುಷ್ಮಾ, ವಸುಂಧರಾ ಮೇಲಿನ ಆರೋಪ: ಬಿಜೆಪಿ ಮಹತ್ವದ ನಿರ್ಧಾರ
ನವದೆಹಲಿ, ಜುಲೈ 20: ಮುಂಬರುವ ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಭಾನುವಾರ (ಜು 19) ನಡೆದ ಬಿಜೆಪಿಯ strategy ಮೀಟಿಂಗ್ ನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ವಿದೇಶಾಂಗ ವ್ಯವಹಾರ ಖಾತೆಯ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಹಾರಾಷ್ಟ್ರ ಸರಕಾರದ ಸಚಿವೆ ಪಂಕಜಾ ಮುಂಡೆ ವಿರುದ್ದ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಸಭೆಯಲ್ಲಿ ಅಂತಿಮವಾಗಿ ಒಂದು ನಿಲುವಿಗೆ ಬರಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್ ಭಾಗವಹಿಸಿದ್ದರು.
ಸಭೆಗೆ ಮುನ್ನ ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಸಿಎಂ ಶಿವರಾಜ್ ಸಿಂಗ್ ಮತ್ತು ವಸುಂಧರಾ ರಾಜೆ ಪ್ರತ್ಯೇಕವಾಗಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ನರೇಂದ್ರ ಮೋದಿ ಅಧಿವೇಶನಕ್ಕೆ ಮುನ್ನ ಕರೆದಿರುವ ಎನ್ಡಿಎ ಮೈತ್ರಿಕೂಟಗಳ ಸಭೆ ಮತ್ತು ಸಂಸದೀಯ ವ್ಯವಹಾಗಳ ಸಚಿವ ವೆಂಕಯ್ಯ ನಾಯ್ಡು ಕರೆದಿರುವ ವಿರೋಧ ಪಕ್ಷಗಳ ನಾಯಕರ ಸಭೆಗಿಂತ ಮುಂಚಿತವಾಗಿಯೇ ಅಮಿತ್ ಶಾ ಪಕ್ಷದ ಧುರೀಣರ ಜೊತೆ ಸಭೆ ನಡೆಸಿದ್ದಾರೆ.

ರಾಹುಲ್ ಗಾಂಧಿ
ಸುದೀರ್ಘ ರಜೆಯ ನಂತರ ಸಕ್ರಿಯ ರಾಜಕಾರಣದಲ್ಲಿ ಧುಮುಕಿ ಪ್ರಮುಖವಾಗಿ ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ಎಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನದಲ್ಲಿ ರಾಹುಲ್ ಕಾರ್ಯವೈಖರಿ ಬಿಜೆಪಿಗೆ ಸಂಕಟವಾಗಿ ಪರಿಣಮಿಸುವ ಸಾಧ್ಯತೆ ಇರುವುದರಿಂದ ಬಿಜೆಪಿ ಎಚ್ಚೆತ್ತು ಕೊಳ್ಳುವ ಅನಿವಾರ್ಯತೆಯಲ್ಲಿದೆ.

ಹೋದಲೆಲ್ಲಾ ಮೋದಿಯನ್ನು ಟೀಕಿಸುತ್ತಿರುವ ರಾಹುಲ್
ರಾಹುಲ್ ಗಾಂಧಿ ದೇಶದಲ್ಲಿ ಪಕ್ಷದ ವರ್ಚಸ್ಸನ್ನು ವಾಪಸ್ ತರುವ ಕಾರ್ಯದಲ್ಲಿ ನಿರತರಾಗುತ್ತಿರುವ ಜೊತೆಗೆ ಹೋದಲೆಲ್ಲಾ ಮೋದಿಯನ್ನು ಮತ್ತು ಮೋದಿ ಸರಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಭೂಸ್ವಾಧೀನ ಮಸೂದೆಯ ವಿರುದ್ದ ಕೆಂಡ ಕಾರುತ್ತಿರುವ ರಾಹುಲ್, ಮೋದಿ ಎದೆಯಳತೆಯನ್ನು 56 ಇಂಚಿನಿಂದ 5.6 ಇಂಚು ಕಮ್ಮಿ ಮಾಡುವುದಾಗಿ ಹೇಳಿದ್ದರು.

ಅಧಿವೇಶನದಲ್ಲಿ ವಿರೋಧ ಪಕ್ಷಗಳ ಅಸ್ತ್ರ
ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ಮೇಲಿನ ಐಪಿಎಲ್ ಆರೋಪ, ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ಮೇಲಿನ ವ್ಯಾಪಂ, ಛತ್ತೀಶಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಮೇಲಿನ ಅಕ್ಕಿ ಹಗರಣ, ಸ್ಮೃತಿ ಇರಾನಿ ಮೇಲಿನ ಸರ್ಟಿಫಿಕೇಟ್ ಆರೋಪ ಹೀಗೆ.. ಪ್ರಮುಖವಾಗಿ ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ನೋ ರಾಜೀನಾಮೆ
ಸುಷ್ಮಾ, ವಸುಂಧರಾ, ಶಿವರಾಜ್, ರಮಣ್ ಸಿಂಗ್, ಸ್ಮೃತಿ ಇರಾನಿ ಅಥವಾ ಪಂಕಜಾ ಮುಂಡೆಯಾಗಲಿ, ವಿರೋಧ ಪಕ್ಷದ ಯಾವುದೇ ಒತ್ತಡಕ್ಕೆ ಮಣಿಯದೇ ಯಾರ ರಾಜೀನಾಮೆಯನ್ನೂ ಬಿಜೆಪಿ ಕೇಳುವುದಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿರೋಧ ಪಕ್ಷಗಳಿಗೆ ಕೌಂಟರ್ ಅಟ್ಯಾಕ್
ಹಿಮಾಚಲ ಪ್ರದೇಶದ ಸಿಎಂ ವೀರಭದ್ರ ಸಿಂಗ್ ಅವರ ಭೂಹಗರಣ ಸೇರಿದಂತೆ, ಹಿಂದಿನ ಯುಪಿಎ ಸರಕಾರದ ನ್ಯೂನತೆಯನ್ನು ಎತ್ತಿ ತೋರಿಸಿ ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೊತೆಗೆ, ಸುಷ್ಮಾ ಆದಿಯಾಗಿ ಎಲ್ಲರ ರಕ್ಷಣೆಗೆ ನಿಲ್ಲಲು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.












Click it and Unblock the Notifications