ಮಾರ್ಚ್ 18ಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ ನಿರ್ಧಾರ
ನವದೆಹಲಿ, ಮಾರ್ಚ್ 12: ಲೋಕಸಭಾ ಚುನಾವಣೆಗಾಗಿ ಪ್ರಣಾಳಿಕೆ ತಯಾರಿಸಲು ಇತ್ತೀಚೆಗೆ ಸಭೆ ಸೇರಿದ್ದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ಮುಖಂಡರು, ಮಾರ್ಚ್ 18ರಂದು ಮಹತ್ವದ ಸಭೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆ 2019ರಲ್ಲಿ ಯಾರು ಸ್ಪರ್ಧಿಸಬೇಕು? ಯಾರು ಟಿಕೆಟ್ ಪಡೆಯಲು ಅನರ್ಹರು? ಯಾರು ಪ್ರಚಾರಕರಾಗಬೇಕು? ಎಂಬೆಲ್ಲ ವಿಷಯದ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ.
ಲೋಕಸಭೆಗೆ ಮೊದಲ ಹಂತದ ಚುನಾವಣೆ ಏಪ್ರಿಲ್ 11ರಂದು ನಿಗದಿಯಾಗಿದ್ದು, ಮೊದಲ ಹಂತದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಸಭೆ ನಡೆಸಲಾಗುತ್ತಿದೆ.

ಈಗಾಗಲೇ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪ್ರಣಾಳಿಕೆ ಕುರಿತಂತೆ ಸಭೆ ನಡೆಸಲಾಗಿದೆ. ಸೋಮವಾರದಂದು ನಡೆದ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ವಕ್ತಾರರು ಭಾಗವಹಿಸಿದ್ದರು.
ಮಹಾಘಟಬಂದನ್ ನಲ್ಲಿ ಸಮರ್ಥ ನಾಯಕರಿಲ್ಲ. ಮೋದಿ ನಾಯಕತ್ವದ ಮೇಲೆ ನಿಮಗೆ ನಂಬಿಕೆ ಇದ್ದರೆ ಮತ ಹಾಕಿ ಎಂಬ ಧ್ಯೇಯದೊಂದಿಗೆ ಪ್ರಣಾಳಿಕೆ ಹೊರಬರಲಿದೆ.
75 ವರ್ಷ ದಾಟಿದವರು ಕೂಡಾ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿರ್ಧಾರ ಕೈಗೊಂಡಿರುವುದರಿಂದ ಹಿರಿಯ ಮುಖಂಡರಿಗೆ ಮತ್ತೊಮ್ಮೆ ಮಣೆ ಹಾಕುವ ಸಾಧ್ಯತೆಯಿದೆ. ಸುಷ್ಮಾ ಸ್ವರಾಜ್ ಸೇರಿದಂತೆ ಹಲವಾರು ಹಿರಿಯ ಮುಖಂಡರು ಅನಾರೋಗ್ಯದ ಕಾರಣದಿಂದ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಎಲ್ಲದರ ಬಗ್ಗೆ ಚರ್ಚಿಸಿ, ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.












Click it and Unblock the Notifications