ಪೌರತ್ವ ಕಾಯ್ದೆ ಬಗ್ಗೆ ರಾಹುಲ್ ಗಾಂಧಿಗೆ ಎಳ್ಳಷ್ಟೂ ಜ್ಞಾನವಿಲ್ಲವೇ? ಏನಿದು ಬಿಜೆಪಿ ವ್ಯಂಗ್ಯ
ಇಂದೋರ್, ಡಿ 23: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸವಾಲೊಂದನ್ನು ಎಸೆದಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಡ್ಡಾ, "ನಾನು ರಾಹುಲ್ ಗಾಂಧಿಗೆ ಸವಾಲೊಂದನ್ನು ಹಾಕುತ್ತಿದ್ದೇನೆ. ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಹತ್ತು ಸಾಲನ್ನು ಅವರು ಹೇಳಲಿ ನೋಡೋಣ" ಎಂದಿದ್ದಾರೆ.
"ಮಸೂದೆಯ ಪ್ರಮುಖ ಹತ್ತು ಅಂಶಗಳನ್ನು ಮತ್ತು ದೇಶದ ಅಭಿವೃದ್ದಿಗೆ ಪೂರಕವಾಗುವ ಎರಡು ಅಂಶಗಳನ್ನು ರಾಹುಲ್ ಗಾಂಧಿ ಹೇಳಲಿ" ಎಂದು ನಡ್ಡಾ ವ್ಯಂಗ್ಯವಾಡಿದ್ದಾರೆ.

"ನನ್ನ ಈ ಸವಾಲಿಗೆ ಅವರು ಉತ್ತರ ನೀಡಲಿ. ಪೌರತ್ವ ತಿದ್ದುಪಡಿ ಮಸೂದೆ ಎಂದರೇನು ಎಂದು ಸರಿಯಾಗಿ ಅವರು ಹೇಳಿದರೆ, ದೇಶಕ್ಕೆ ಒಳ್ಳೆಯದಾಗುತ್ತದೆ" ಎಂದು ನಡ್ಡಾ ಹೇಳಿದ್ದಾರೆ.
"ದೇಶವನ್ನು ಮುನ್ನಡೆಸುವ ಕೆಲವು ನಾಯಕರುಗಳಿಗೆ ಕನಿಷ್ಠ ಜ್ಞಾನವಿಲ್ಲದಿರುವುದು ದೌರ್ಭಾಗ್ಯ. ಭಾರತದ ಭವ್ಯ ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿವಿಲ್ಲದವರು ಬೇಕಾಬಿಟ್ಟಿ ಹೇಳಿಕೆಯನ್ನು ನೀಡುತ್ತಿದ್ದಾರೆ" ಎಂದು ನಡ್ಡಾ, ಬೇಸರ ವ್ಯಕ್ತ ಪಡಿಸಿದ್ದಾರೆ.
"ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ವಿರೋಧ ಪಕ್ಷಗಳು ಜನರ ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಈ ಮಸೂದೆ, ದೇಶದ ಅಭಿವೃದ್ದಿಗೇ ಹೊರತು, ಯಾರನ್ನೂ ಟಾರ್ಗೆಟ್ ಮಾಡಲು ಅಲ್ಲ" ಎಂದು ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ.












Click it and Unblock the Notifications