ಮೇವು ತಿಂದ ಲಾಲೂ ಪ್ರಸಾದ್ ಯಾದವ್ ದೋಷಿ
ರಾಂಚಿ, ಡಿಸೆಂಬರ್ 23: 900 ಕೋಟಿ ರೂ.ಗಳ ಮೇವು ಹಗರಣದ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ದೋಷಿ ಎಂದು ಜಾರ್ಖಂಡ್ ನ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಜೈಲಿನಲ್ಲಿ ಲಾಲು ರಾಜ್ಯಶಾಸ್ತ್ರ ಮೇಷ್ಟ್ರು!
ಜಾರ್ಖಂಡ್ ನ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ತೀರ್ಪು ನೀಡಿ ಶನಿವಾರ ಆದೇಶ ಹೊರಡಿಸಿದರು. ಜನವರಿ 3ರಂದು ಶಿಕ್ಷೆ ಪ್ರಕಟವಾಗಲಿದೆ.
ಲಾಲೂ ಸೇರಿ 22 ಆರೋಪಿಗಳ ಪೈಕಿ 7 ಜನರಿಗೆ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ. ಒಟ್ಟು 6 ಪ್ರಕರಣಗಳಲ್ಲಿ ಎರಡು ಪ್ರಕರಣಕ್ಕೆ ತೀರ್ಪು ಪ್ರಕಟಿಸಿದ್ದು, ಇನ್ನುಳಿದ 4 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಲಾಲೂ ಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇದರಿಂದ ಲಾಲೂ ಪ್ರಸಾದ್ ಅವರು ಈ ಬಾರಿಯ ಹೊಸ ವರ್ಷವನ್ನು ಜೈಲಿನಲ್ಲಿಯೇ ಕಳೆಯಬೇಕಾಗಿದೆ.
ಇದೇ ಪ್ರಕರಣದಲ್ಲಿ ಲಾಲು ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಅದರಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಸುಪ್ರೀಂ ಕೋರ್ಟ್ ನೀಡಿದ ಜಾಮೀನಿನ ಮೇಲೆ ಹೊರಬಂದಿದ್ದರು. 1996ರಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ವಿಚಾರಣೆ ಡಿಸೆಂಬರ್ 13, 2017ಕ್ಕೆ ಅಂತ್ಯವಾಗಿತ್ತು.
ಪಶುಗಳಿಗೆ ಮೇವು ಪೂರೈಸುವುದಾಗಿ ಸುಳ್ಳು ಬಿಲ್ಲು ಸೃಷ್ಟಿಸಿ ಅಕ್ರಮವಾಗಿ ದೇವಗಡ್ ಖಜಾನೆಯಿದ 89 ಲಕ್ಷ ರು ಪಡೆದ ಆರೋಪ ಎದುರುಸುತ್ತಿದ್ದರು.
1994-1996 ರಲ್ಲಿ ಬಿಹಾರದಲ್ಲಿ ನಡೆದ ಈ ಹಗರಣದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವ ಉದ್ದೇಶದಿಂದ ಡಿಯೋದರ್(ಈಗ ಜಾರ್ಖಾಂಡ್ ರಾಜ್ಯದಲ್ಲಿದೆ) ಎಂಬ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ ಈ ಹಣವನ್ನು ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳದೆ ಬಿಹಾರದ ಆಗಿನ ಮುಖ್ಯಮಂತ್ರಿಯಾಗಿದ್ದ ಲಾಲೂ ಯಾದವ್ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು.