ಬಿಜೆಪಿಯಿಂದ ಸುಪಾರಿ ಪಡೆದು RSS ವಿರುದ್ದ ಎಚ್ಡಿಕೆ ವಾಗ್ದಾಳಿ?
ಬೆಂಗಳೂರು, ಅ 10: ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಯ ವೇಳೆ ಮೂರು ಪಕ್ಷಗಳ ನಡುವಿನ ಆರೋಪ, ಪ್ರತ್ಯಾರೋಪ ಮುಗಿಲು ಮುಟ್ಟುತ್ತಿದೆ. ಉಪ ಚುನಾವಣೆಯ ಹೊತ್ತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುನ್ನಲೆಗೆ ತಂದಿದ್ದು ಯಾಕೆ ಎನ್ನುವ ಮಾತೂ ಚರ್ಚೆಯಲ್ಲಿದೆ.
ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿಯೇ, ಮುಸ್ಲಿಂ ಮತ ವಿಭಜನೆ ಮಾಡಲು ಕುಮಾರಸ್ವಾಮಿಯವರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಆರೋಪವನ್ನು ಮತ್ತಷ್ಟು ಕಾಂಗ್ರೆಸ್ ಮುಖಂಡರು ಪುನರುಚ್ಚಿಸುತ್ತಿದ್ದಾರೆ.
ಎರಡು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ದಿನಾಂಕ ಈಗಾಗಲೇ ಮುಗಿದಿದ್ದು, ಮೂರೂ ಪಕ್ಷಗಳು ಕೊರೊನಾ ವೈರಸ್ ಎದ್ದೋಬಿದ್ದೋ ಓಡುವಂತೆ ಭರ್ಜರಿಯಾಗಿ ತಮ್ಮ ಅಭ್ಯರ್ಥಿಗಳ ನಾಮಪತ್ರವನ್ನು ಸಲ್ಲಿಸಿವೆ.
ಅಕ್ಟೋಬರ್ ಮೂವತ್ತರಂದು ಈ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನವೆಂಬರ್ ಎರಡರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ, ಕೆಪಿಸಿಸಿ ವಕ್ತಾರರಾದಂತಹ ಎಂ.ಲಕ್ಷ್ಮಣ್ ಅವರು ಕುಮಾರಸ್ವಾಮಿ ಮತ್ತು ಈಶ್ವರಪ್ಪನವರ ವಿರುದ್ದ ಕೆಂಡಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಎಂ.ಲಕ್ಷ್ಮಣ್ ಅವರು, "ಬರೀ, ವಿರೋಧ ಪಕ್ಷಗಳನ್ನು ಹದ್ದುಬಸ್ತಿನಲ್ಲಿ ಇಡಲು ಐಟಿ ಮತ್ತು ಇಡಿ ಸಂಸ್ಥೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿಲ್ಲ, ನಮ್ಮ ನಾಯಕರ ಮೇಲೂ ದಾಳಿ ನಡೆಯುತ್ತಿದೆ ಎಂದು ಸಚಿವ ಈಶ್ವರಪ್ಪನವರು ಹೇಳುತ್ತಾರೆ. ಹಾಲೀ ಬಿಜೆಪಿಯ ಇಪ್ಪತ್ತು ಸಚಿವರು ಮತ್ತು ಪ್ರಮುಖ ನಾಯಕರ ವಿರುದ್ದ ನಾವು ಆದಾಯ ತೆರಿಗೆ ಇಲಾಖೆಗೆ ದೂರು ನೀಡುತ್ತೇವೆ, ಅವರ ಮೇಲೂ ದಾಳಿ ನಡೆಯುತ್ತದಾ, ನಿಮ್ಮ ಮಗನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿಯಿದೆಯಲ್ಲವೇ ಅದನ್ನೂ ಬಹಿರಂಗ ಪಡುಸುತ್ತೀರಾ" ಎಂದು ಲಕ್ಷ್ಮಣ್ ಅವರು ಪ್ರಶ್ನಿಸಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಾಗಾರವು ಬಿಡದಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ
"ಜೆಡಿಎಸ್ ಪಕ್ಷದ ಕಾರ್ಯಾಗಾರವು ಬಿಡದಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಡೆಯುತ್ತಿದೆ. ಇದ್ದಕ್ಕಿದ್ದಂತೇ, ಕುಮಾರಣ್ಣ ಅವರು ಆರ್ ಎಸ್ ಎಸ್ ವಿರುದ್ದ ಕಿಡಿಕಾರಲು ಆರಂಭಿಸಿದ್ದಾರೆ. ಸಂಘದಿಂದ ತರಬೇತಿ ಪಡೆದವರು ಐಎಎಸ್/ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂದು ಕುಮಾರಸ್ವಾಮಿಯವರು ಆರೋಪಿಸುತ್ತಿದ್ದಾರೆ. ಉಪ ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕಾಗಿಯೇ ಇವರು ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಉಪ ಚುನಾವಣೆ ಮುಗಿದ ಮೇಲೆ ಇವರು ಸುಮ್ಮನಾಗುತ್ತಾರೆ"ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.

ಇದ್ದಕ್ಕಿದಂತೆಯೇ ಕುಮಾರಸ್ವಾಮಿಯವರು ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ
"ಅಲ್ಪಸಂಖ್ಯಾತರ ಕಾರ್ಯಾಗಾರದಲ್ಲಿ ಇದ್ದಕ್ಕಿದಂತೆಯೇ ಕುಮಾರಸ್ವಾಮಿಯವರು ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸಲು ಆರಂಭಿಸುತ್ತಾರೆ. ಸಿಂಧಗಿ ಮತ್ತು ಹಾನಗಲ್ ನಲ್ಲಿ ಹತ್ತು ಪ್ರೆಸ್ ಮೀಟ್ ಮಾಡಿದ್ದಾರೆ. ಇದರ ಉದ್ದೇಶ ಇಷ್ಟೇ, ಬಿಜೆಪಿಯಿಂದ ಸುಪಾರಿ ಪಡೆದುಕೊಂಡು, ಎರಡು ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಲ್ಪಸಂಖ್ಯಾತ ಮತಗಳನ್ನು ಡಿವೈಡ್ ಮಾಡುವ ಉದ್ದೇಶ ಕುಮಾರಸ್ವಾಮಿಯವರದ್ದಾಗಿದೆ"ಎನ್ನುವ ಗುರುತರ ಆರೋಪವನ್ನು ಲಕ್ಷ್ಮಣ್ ಮಾಡಿದ್ದಾರೆ.

ಸಿದ್ದರಾಮಯ್ಯನವರೂ ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿದ್ದಾರೆ
"ಕುಮಾರಸ್ವಾಮಿಯವರದ್ದು ಕಾಂಗ್ರೆಸ್ ಅನ್ನು ಸೋಲಿಸಬೇಕು, ಬಿಜೆಪಿಯನ್ನು ಗೆಲ್ಲಿಸಬೇಕು ಎನ್ನುವ ಸಿಂಗಲ್ ಪಾಯಿಂಟ್ ಅಜೆಂಡಾ. ಸಿದ್ದರಾಮಯ್ಯನವರೂ ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿದ್ದಾರೆ, ನಿಜವಾಗಿಯೂ ಆ ಸಮುದಾಯದ ಬಗ್ಗೆ ನಿಮಗೆ ಕಾಳಜಿಯಿದ್ದರೆ, ಹಳೇ ಮೈಸೂರು ಭಾಗದಲ್ಲಿ ಅವರಿಗೆ ಟಿಕೆಟ್ ನೀಡಿ. ಯಾಕೆ ಅಲ್ಲಿ ಮುಸ್ಲಿಂ ಅಭ್ಯರ್ಥಿಗಳು ಇಲ್ಲವೇ"ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದ್ದಾರೆ.












Click it and Unblock the Notifications