ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ನಿಧನ
ನವದೆಹಲಿ, ಅಕ್ಟೋಬರ್ 11: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಮತ್ತು ದಿವಂಗತ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಳಿಯ ಅಲ್ತಾಫ್ ಶಾ ಅವರು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಅಲ್ತಾಫ್ ಶಾ ಅವರನ್ನು ತಿಹಾರ್ ಜೈಲಿನಿಂದ ಏಮ್ಸ್ ಗೆ ಸ್ಥಳಾಂತರಿಸಲಾಗಿತ್ತು. ಅಲ್ತಾಫ್ ಶಾ (66) ಅವರು ಮಂಗಳವಾರ ಮುಂಜಾನೆ ಕ್ಯಾನ್ಸರ್ನಿಂದ ನಿಧನರಾದರು.
ಅಲ್ತಾಫ್ ಶಾ ಅವರ ಮಗಳು ಟ್ವೀಟ್ನಲ್ಲಿ ನಮ್ಮ ತಂದೆ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿ ಕೈದಿಯಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ. ಶ್ರೀನಗರದ ಸೌರಾ ಪ್ರದೇಶದ ನಿವಾಸಿಯಾದ ಹುರಿಯತ್ ನಾಯಕನಾದ ಅಲ್ತಾಫ್ ಶಾ ಅವರನ್ನು ಜುಲೈ 25, 2017 ರಂದು ಇತರ ಆರು ಮಂದಿಯೊಂದಿಗೆ ಬಂಧಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಿದ ಆರೋಪದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಮೂತ್ರಪಿಂಡದ ಕ್ಯಾನ್ಸರ್ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ತಾಫ್ ಶಾ ಅವರನ್ನು ದೆಹಲಿಯ ಏಮ್ಸ್ಗೆ ಸ್ಥಳಾಂತರಿಸುವಂತೆ ದೆಹಲಿ ಹೈಕೋರ್ಟ್ ಅಕ್ಟೋಬರ್ 1 ರಂದು ಆದೇಶಿಸಿತ್ತು. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ (ಆರ್ಎಂಎಲ್) ಕೆಲವು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಶಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಪಿಟಿಐ ವರದಿಯ ಪ್ರಕಾರ ಅವರು ಕೊನೆಯ ಹಂತದ ಮೂತ್ರಪಿಂಡದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ತಿಳಿದುಬಂದಿದೆ.

ಮೂತ್ರಪಿಂಡದ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಆರ್ಎಂಎಲ್ನಲ್ಲಿ ಸಾಕಷ್ಟು ಸೌಲಭ್ಯವಿಲ್ಲ ಎಂದು ಪ್ರತಿಪಾದಿಸಿದ್ದ ಅವರು, ತುರ್ತು ಚಿಕಿತ್ಸೆಗಾಗಿ ತಮ್ಮನ್ನು ಏಮ್ಸ್ ಅಥವಾ ಅಪೊಲೊ ಆಸ್ಪತ್ರೆಗೆ ಸ್ಥಳಾಂತರಿಸಲು ಅವಕಾಶ ನೀಡಬೇಕೆಂದು ಅವರು ಪ್ರಾರ್ಥಿಸಿದ್ದಾಗಿ ಎಂದು ವರದಿ ತಿಳಿಸಿದೆ.












Click it and Unblock the Notifications