ಕರ್ನಾಟಕದವರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ ಎಂದ ಶಿವಸೇನೆಯ ಮುಖಂಡ
ಪಣಜಿ, ಜೂನ್ 11: ಶಿವಸೇನೆಯ ಗೋವಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಜೋಶಿ ಶನಿವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ, ಸುದ್ದಿಯಾಗಿದ್ದಾರೆ. "ನಮ್ಮ ನೆರೆಯ ಕರ್ನಾಟಕದಲ್ಲಿ ಹಲವರು ರಾಷ್ಟ್ರಗೀತೆಯನ್ನು ಹಾಡಲಾರರು" ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
"ಗೋವಾದಲ್ಲಿರುವ ಜನರು ದೇಶಭಕ್ತರು. ನನಗೆ ಗೊತ್ತು, ಹಲವು ವಿದ್ಯಾರ್ಥಿಗಳು ವಂದೇ ಮಾತರಂನ ಪೂರ್ತಿಯಾಗಿ ಹಾಡಬಲ್ಲರು. ಕರ್ನಾಟಕದಲ್ಲಿ ಹಲವರಿಗೆ ನಮ್ಮ ರಾಷ್ಟ್ರಗೀತೆಯನ್ನು ಹೇಗೆ ಹಾಡಬೇಕೆಂದು ಕೂಡ ಗೊತ್ತಿಲ್ಲ. ಅವರಿಗೆ ನಮ್ಮ ರಾಷ್ಟ್ರಪಿತ ಯಾರು ಅಂತ ಸಹ ಗೊತ್ತಿಲ್ಲ" ಎಂದು ಮಾಧ್ಯಮದವರಿಗೆ ಜೋಶಿ ಹೇಳಿದ್ದಾರೆ.
[ಸೋಮವಾರದ (ಜೂ12) ಕರ್ನಾಟಕ ಬಂದ್ : ತಾಜಾ ಬೆಳವಣಿಗೆಗಳು]
ಇನ್ನು ಗೋವಾದಲ್ಲಿ ಪ್ರವೇಶ ನಿಷೇಧಿಸಿರುವ ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ರನ್ನು ಹೊಗಳಿದ ಜೋಶಿ, ಕರ್ನಾಟಕದಲ್ಲಿ ಮುತಾಲಿಕ್ ತುಂಬ ಒಳ್ಳೆ ಕೆಲಸ ಮಾಡಿದ್ದಾರೆ. ಆತ ಮಹಿಳೆಯರ ರಕ್ಷಕ ಎಂದಿದ್ದಾರೆ.

"ಈ ಹಿಂದೆ ಮಂಗಳೂರು ಪಬ್ ಮೇಲೆ ರಾಮಸೇನೆ ಕಾರ್ಯಕರ್ತರು ನಮ್ಮ ಸೋದರಿಯರಿಗೆ ಪಬ್ ಸಂಸ್ಕೃತಿ ಒಳ್ಳೆಯದಲ್ಲ ಎಂದು ಅರ್ಥ ಮಾಡಿಸಿದ್ದರು. ಸೇನೆ ಕಾರ್ಯಕರ್ತರು ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಯಿತು. ಆದರೆ ಆ ಹೆಣ್ಣುಮಕ್ಕಳ ಪೋಷಕರು ಮುತಾಲಿಕ್ ಅವರಿಗೆ ಧನ್ಯವಾದ ಹೇಳಿದರು" ಎಂದಿದ್ದಾರೆ ಜೋಶಿ.
[ಕರ್ನಾಟಕ ಬಂದ್ ಜೂನ್ 12ರಂದು ಮನೆ ಬಿಡುವ ಮುನ್ನ ಓದಿ!]
ಅಷ್ಟೇ ಅಲ್ಲ, ಹೆಣ್ಣುಮಕ್ಕಳನ್ನು ರಕ್ಷಿಸುವುದಕ್ಕೆ ಮುತಾಲಿಕ್ ಸರಿಯಾದ ಕೆಲಸ ಮಾಡಿದ್ದಾರೆ ಎಂದು ಹೊಗಳಿದ್ದರು ಎಂದು ಜೋಶಿ ಹೇಳಿದ್ದಾರೆ. ಪಬ್ ಸಂಸ್ಕೃತಿ ನಿಷೇಧಕ್ಕೆ ಶಿವ ಸೇನೆ ಒತ್ತಾಯಿಸದಿರಬಹುದು. ಆದರೆ ತಡ ರಾತ್ರಿ ನಡೆಯುವ ಇಂಥ ಕೆಲಸಗಳಿಗೆ ನಮ್ಮ ವಿರೋಧವಿದೆ ಎಂದಿದ್ದಾರೆ.

ನೀವು ರಾತ್ರಿ ಹನ್ನೆರಡಕ್ಕೆ ಹೋಗಿ ಪಬ್ ನಲ್ಲಿ ನೋಡಿ, ಹುಡುಗ-ಹುಡುಗಿಯರು ಹೊರಗೆ ಕೂತು ಕುಡಿಯುತ್ತಾ ಇರುತ್ತಾರೆ. ಪ್ರವಾಸಿಗರು ಏನು ಮಾಡಿದರೂ ನಾವು ತಲೆ ಕೆಡಿಸಿಕೊಳ್ಳಲ್ಲ. ಆದರೆ ಸ್ಥಳೀಯ ಹುಡುಗ-ಹುಡುಗಿಯರಿಗೆ ಬುದ್ಧಿ ಹೇಳಬೇಕಾದ್ದು ನಮ್ಮ ಜವಾಬ್ದಾರಿ ಎಂದು ಜೋಶಿ ಹೇಳಿದ್ದಾರೆ.
ಇನ್ನು ಮುತಾಲಿಕ್ ಅವರಿಗೆ ಗೋವಾಗೆ ಪ್ರವೇಶ ನಿಷೇಧಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೋವಾದಲ್ಲಿ ಒಳ್ಳೆ ಕೆಲಸ ಮಾಡಲು ಬಯಸಿದರೆ ಶಿವಸೇನೆಯು ಶ್ರೀರಾಮ ಸೇನೆಯನ್ನು ಬೆಂಬಲಿಸುತ್ತದೆ ಎಂದಿದ್ದಾರೆ.
ಪಿಟಿಐ ಸುದ್ದಿ












Click it and Unblock the Notifications