ಚಿರತೆ ಅಂಗ ಸಾಗಣೆಗೆ ಕರ್ನಾಟಕವೇ ರಹದಾರಿ
ಬೆಂಗಳೂರು, ನ. 10: ದೇಶದಲ್ಲಿಯೇ ಮಧ್ಯ ಭಾರತವು ಚಿರತೆ ಮೇಲೆ ಹೆಚ್ಚು ದಾಳಿ ನಡೆಯುತ್ತಿದೆ. ಅವುಗಳ ಅಂಗಗಳು ಕರ್ನಾಟಕದ ಮೂಲಕ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಗಣೆಯಾಗುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ.
ಈ ಕುರಿತು National Centre for Biological Sciences, Nature Conservation Foundation (NCF) ಮತ್ತು ಇತರ ಸಂಸ್ಥೆಗಳು ಅಂತಾರಾಷ್ಟ್ರೀಯ ಪತ್ರಿಕೆ Conservation Biologyಯಲ್ಲಿ ಸಂಶೋಧನಾ ಕೃತಿ ಪ್ರಕಟಿಸಿವೆ. ಚಿರತೆ ಅಂಗಗಳ ಅಕ್ರಮ ಸಾಗಾಟ ಅಂದಾಜಿಸಿದ್ದಕ್ಕಿಂತ ಅತಿಯಾಗಿದೆ. ಹುಲಿ ಅಂಗಗಳ ಸಾಗಾಟಕ್ಕಿಂತ ಚಿರತೆ ಅಂಗಗಳ ಸಾಗಣೆಯೇ ಹೆಚ್ಚಾಗಿದೆ. ಆಗ್ನೇಯ ಏಷ್ಯಾದ ಪ್ರಾಣಿಗಳ ಅಕ್ರಮ ಮಾರುಕಟ್ಟೆಯಲ್ಲಿ ಇವಕ್ಕೆ ಸಾಕಷ್ಟು ಬೇಡಿಕೆ ಇದೆ. ಚಿರತೆಯ ಅಂಗಗಳನ್ನು ಲಿಯದ್ದು ಎಂದು ಸುಲಭವಾಗಿ ನಂಬಿಸಲು ಸಾಧ್ಯ. ಆದ್ದರಿಂದ ಚಿರತೆಗಳ ಸಂತತಿ ಅಪಾಯಕ್ಕೆ ಸಿಲುಕಿದೆ.
1994 ರಿಂದ 2003ರ ಮಧ್ಯೆ 3,968 ಚಿರತೆಯ ಅಂಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ವಶಪಡಿಸಿಕೊಂಡವುಗಳಲ್ಲಿ ಹುಲಿಯ ಅಂಗಗಳಿಗಿಂತ ಚಿರತೆಯದ್ದು ನಾಲ್ಕು ಪಟ್ಟು ಹೆಚ್ಚಿನದು ಹಾಗೂ ಅವುಗಳಲ್ಲಿ ಗಂಡು ಚಿರತೆಯದ್ದು ಹೆಚ್ಚಿನ ಭಾಗ ಎಂಬುದು ವಿಶೇಷ. ಆದ್ದರಿಂದ ಕಳ್ಳ ಸಾಗಣೆ ಸಂದರ್ಭ ಗಂಡು ಚಿರತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.