ಪ್ರಧಾನಿ ಮೋದಿ ಭೇಟಿ ಬಳಿಕ ಚುರ್ಮುರಿ ಅಂಗಡಿ ಮಾಲೀಕನಿಗೆ ಕೊಲೆ ಬೆದರಿಕೆ
ಪಶ್ಚಿಮ ಬಂಗಾಳ, ಮೇ 25: ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಬೀದಿ ಬದಿಯ ಪುಟ್ಟ ಅಂಗಡಿಯೊಂದಕ್ಕೆ ಭೇಟಿ ನೀಡಿ ಝಲ್ಮುರಿ (ಚುರ್ಮುರಿ) ಸವಿದಿದ್ದರು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈ ಅಂಗಡಿಯ ಮಾಲೀಕನಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಕ್ರಮ್ ಕುಮಾರ್ ಸಾವೊ ಎಂಬುವವರ ಪುಟ್ಟ ಅಂಗಡಿಗೆ ಪ್ರಧಾನಿ ಮೋದಿ ಭೇಟಿ ನೀಡಿ ಝಲ್ಮುರಿ ಖರೀದಿಸಿದ ನಂತರ ಇದು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಈ ಭೇಟಿಯ ಬೆನ್ನಲ್ಲೇ ಸಾವೋ ಅವರಿಗೆ ಅಪರಿಚಿತರಿಂದ ಕೊಲೆ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರಲಾರಂಭಿಸಿವೆ. ಈ ಸಂಬಂಧ ಸ್ವತಃ ಬಿಕ್ರಮ್ ಅವರೇ ಝಾರ್ಗ್ರಾಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಝಲ್ಮುರಿ ಅಂಗಡಿಗೆ ಬಿಗಿ ಭದ್ರತೆ
ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಬಿಕ್ರಮ್ ಕುಮಾರ್ ಸಾವೊ ಅವರು ತಮಗೆ ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಗಳಿಂದ ಜೀವಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬರುತ್ತಿದ್ದು, ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಪಶ್ಚಿಮ ಬಂಗಾಳದ ಝಾರ್ಗ್ರಾಮ್ ಪಟ್ಟಣದಲ್ಲಿರುವ ಈ ಝಲ್ಮುರಿ ಅಂಗಡಿಗೆ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದ ಎಂದು ತಿಳಿದುಬಂದಿದೆ.
ಝಾರ್ಗ್ರಾಮ್ ಪಟ್ಟಣದ ರಾಜ್ ಕಾಲೇಜ್ ಮೋರ್ ಬಳಿಯಿರುವ ಈ ಅಂಗಡಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿ ಚುರ್ಮುರಿ ಖರೀದಿಸಿದ್ದರಿಂದ ಈ ಸ್ಥಳವು ಎಲ್ಲರ ಗಮನ ಸೆಳೆದಿದೆ. ಏಪ್ರಿಲ್ 19ರಂದು ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಅಂಗಡಿಗೆ ಭೇಟಿ ನೀಡಿದ್ದರು.
ಬಿಕ್ರಮ್ ಕುಮಾರ್ ಹೇಳಿದ್ದೇನು?
ಇನ್ನು ಶನಿವಾರ (ಮೇ 23 2026) ಮಾಧ್ಯಮದವರೊಂದಿಗೆ ಮಾತನಾಡಿದ ಬಿಕ್ರಮ್ ಕುಮಾರ್ ಸಾವೊ ಅವರು, 'ಸತತವಾಗಿ ಬೆದರಿಕೆಗಳು ಬರುತ್ತಿರುವುದರಿಂದ ನಾನು ಭಯಭೀತನಾಗಿದ್ದೆ. ನನ್ನ ಕುಟುಂಬದವರು ಕೂಡ ಗಾಬರಿಯಾಗಿದ್ದರು. ಹೀಗಾಗಿ ನಾನು ಕೆಲವು ದಿನಗಳ ಕಾಲ ಅಂಗಡಿಯನ್ನು ಮುಚ್ಚಿದ್ದೆ,' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ದೂರನ್ನು ಗಂಭೀರವಾಗಿ ಪರಿಗಣಿಸಿರುವ ಝಾರ್ಗ್ರಾಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಕರೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಪತ್ತೆಹಚ್ಚಲು ತಜ್ಞರ ನೆರವು ಪಡೆಯಲಾಗುತ್ತಿದೆ. ಇದೀಗ ಸದ್ಯ ಅಂಗಡಿಯ ಹೊರಭಾಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾಲೀಕ ಬಿಕ್ರಮ್ ಕುಮಾರ್ ಸಾವೊ ಅವರಿಗೂ ವೈಯಕ್ತಿಕ ಭದ್ರತೆಯನ್ನು ಒದಗಿಸಲಾಗಿದೆ.












Click it and Unblock the Notifications