ಚೀನಾದ ಅತಿಕ್ರಮಣ ಯತ್ನ ವಿಫಲಗೊಳಿಸಿದ ಭಾರತೀಯ ಸೈನಿಕರು
ಚೀನಾ ಸೇನೆಯಿಂದ ಉತ್ತರಾಖಾಂಡದ ಬಾರಾಹೋತಿ ಪ್ರಾಂತ್ಯದಲ್ಲಿ ಅತಿಕ್ರಮಣ ಯತ್ನ. ಭಾರತೀಯ ಸೇನೆಯಿಂದ ತೀವ್ರ ವಿರೋಧದ ನಂತರ ಹಿಂದಿರುಗಿದ ಚೀನಾ ಸೇನೆ.
ನವದೆಹಲಿ, ಜುಲೈ 31: ಭಾರತ ಹಾಗೂ ಚೀನಾ ನಡುವಿನ ಗಡಿ ಪ್ರದೇಶದಲ್ಲಿ ಭಾರತದ ಗಡಿಯೊಳಕ್ಕೆ ನುಸುಳಿ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಮುಂದಾಗಿದ್ದ ಚೀನಾ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರಾಖಾಂಡ್ ರಾಜ್ಯದ ಚಮೇಲಿ ಜಿಲ್ಲೆಯ ಬಾರಾಹೋತಿ ಪ್ರಾಂತ್ಯದಲ್ಲಿ ಜುಲೈ 26ರಂದು ಚೀನಾ ಸೇನೆಯು ಭಾರತದ ಗಡಿ ಪ್ರವೇಶಿಸಿದ್ದರು. ಸುಮಾರು ಒಂದು ಕಿ.ಮೀ.ವರೆಗೂ ಚೀನಾ ಸೈನ್ಯವು ಪಥ ಸಂಚಲನ ಮಾಡುತ್ತಾ ಬಂದಿತ್ತು.

ವಿಚಾರ ತಿಳಿದ ಭಾರತೀಯ ಸೇನೆಯು ಯೋಧರನ್ನು ಅಲ್ಲಿಗೆ ರವಾನಿಸಿತು. ಆಗ, ಭಾರತೀಯ ಸೈನಿಕರು ಹಾಗೂ ಚೀನಾ ಸೈನಿಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಮಾತಿನ ಚಕಮತಿಯು ಉಭಯ ಸೈನಿಕರ ನಡುವಿನ ತಳ್ಳಾಟಕ್ಕೂ ಕಾರಣವಾಗಿತ್ತು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಜಗಳ, ತಳ್ಳಾಟಗಳ ನಂತರ ಚೀನಾ ಸೈನಿಕರ ಆರ್ಭಟ ಕೊಂಚ ತಗ್ಗಿತು. ಭಾರತೀಯ ಸೈನಿಕರು ತೀವ್ರ ಪ್ರತಿರೋಧ ತೋರಿದ ತರುವಾಯ ಚೀನಾ ಸೈನಿಕರು ಅಲ್ಲಿಂದ ಹಿಂದಿರುಗಿದರು.
ಸಿಕ್ಕಿಂ ಗಡಿ ಭಾಗದಲ್ಲಿರುವ ಡೊಕ್ಲಾಮ್ ಪ್ರದೇಶದಲ್ಲಿ ತನ್ನ ಸೇನೆಯನ್ನು ಜಮಾ ಮಾಡುವ ಮೂಲಕ ಉದ್ಧಟತನ ಪ್ರದರ್ಶಿಸಿರುವ ಚೀನಾ, ಈಗ ಭಾರತ-ಚೀನಾ ಗಡಿಯ ಮತ್ತೊಂದು ಭಾಗದಲ್ಲಿ ಇಂಥ ಪುಂಡಾಟಿಕೆಯನ್ನು ಮೆರೆದಿದೆ.












Click it and Unblock the Notifications