ಅಬೋಟಾಬಾದ್ ನೆನಪಿದೆಯಾ? ಪಾಕ್ಗೆ ಭಾರತದ ತಿರುಗೇಟು
ವಿಶ್ವಸಂಸ್ಥೆ, ನವೆಂಬರ್ 25: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟೆರಸ್ ಅವರಿಗೆ 'ಸುಳ್ಳುಗಳ ಕಂತೆ'ಯನ್ನೇ ನೀಡಿರುವ ಪಾಕಿಸ್ತಾನಕ್ಕೆ ಅಲ್ ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲ್ಯಾಡನ್ ಹಲವು ವರ್ಷಗಳ ಕಾಲ ಅಡಗಿಕುಳಿತು ಹತ್ಯೆಗೀಡಾದ ಅಬೋಟಾಬಾದ್ ಅನ್ನು ನೆನಪಿಸುವ ಮೂಲಕ ಕಠಿಣ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿಯು ನೀಡಿರುವ ಸುಳ್ಳಿನ ಕಂತೆಯು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ರಾಯಭಾರಿ ಟಿ.ಎಸ್. ತ್ರಿಮೂರ್ತಿ ಹೇಳಿದ್ದಾರೆ.
'ದಾಖಲೆಗಳ ಸೃಷ್ಟಿ ಮತ್ತು ಸುಳ್ಳು ವ್ಯಾಖ್ಯಾನಗಳನ್ನು ಉತ್ಪತ್ತಿ ಮಾಡುವುದು ಪಾಕಿಸ್ತಾನಕ್ಕೆ ಹೊಸತಲ್ಲ. ಅದು ವಿಶ್ವಸಂಸ್ಥೆಯು ಉಲ್ಲೇಖಿಸಿರುವ ಜಗತ್ತಿನ ಅತ್ಯಂತ ದೊಡ್ಡ ಸಂಖ್ಯೆಯ ಭಯೋತ್ಪಾದಕರು ಮತ್ತು ಸಂಘಟನೆಗಳಿಗೆ ಆತಿಥ್ಯ ವಹಿಸಿದೆ. ಅಬೋಟಾಬಾಟ್ ಅನ್ನು ನೆನಪಿಸಿಕೊಳ್ಳಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ತನ್ನ ನೆಲೆಯಲ್ಲಿ ಭಾರತವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ ಸರ್ಕಾರದ ಕಡತಗಳನ್ನು ಇಸ್ಲಾಮಾಬಾದಿನ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್ ಅವರು ಗುಟೆರಸ್ ಜತೆಗಿನ ಭೇಟಿ ವೇಳೆ ಹಸ್ತಾಂತರಿಸಿದ್ದರು. ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಗ್ಲಾ ಅವರು ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ ಪ್ರಮುಖ ದೇಶಗಳ ಹಿರಿಯ ರಾಯಭಾರಿಗಳಿಗೆ ಸೋಮವಾರ ಮಾಹಿತಿ ನೀಡಿದ್ದಾರೆ.












Click it and Unblock the Notifications