ಸುಣ್ಣ-ಬಣ್ಣ ಬಳಿದು, ಹಿಗ್ಗಿಸಿ ತೋರಿಸಲಾಗಿದೆ ಭಾರತದ ಪ್ರಗತಿ ದರ ಎಂದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ
ಭಾರತದ ಆರ್ಥಿಕ ಪ್ರಗತಿ ಬಗ್ಗೆ ಕಳೆದ ಒಂದು ದಶಕದಿಂದ ಇರುವ ವಾಸ್ತವವೇ ಬೇರೆ. ಆದರೆ ಅಂಕಿಯಲ್ಲಿ ತೋರುತ್ತಿರುವುದೇ ಬೇರೆ ಎಂದು ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು ಎಂಬ ಕಿರೀಟ ಇತ್ತೀಚಿನ ತನಕ ಇದೆ. ಆದರೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರ ಅಧ್ಯಯನ ಬೇರೆಯದೇ ವಿಚಾರ ತೆರೆದಿಡುತ್ತದೆ.
ಆ ವರದಿಯ ಪ್ರಕಾರ: 2011 ಮತ್ತು 2017ರ ಮಧ್ಯೆ ವಾಸ್ತವಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿಯನ್ನು ಬಿಂಬಿಸಲಾಗಿದೆ. 7 ಪರ್ಸೆಂಟ್ ನಲ್ಲಿ ಪ್ರತಿ ವರ್ಷದ ಪ್ರಗತಿ ದರ ಇದೆ ಎನ್ನಲಾಗಿದ್ದರೂ ಅದು ವಾಸ್ತವದಲ್ಲಿ 4.5 ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಿದ್ದಿರಬಹುದು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಭಿವೃದ್ಧಿ ಕೇಂದ್ರದ ಸಂಶೋಧನಾ ಅಧ್ಯಯನದಲ್ಲಿ ಹೇಳಲಾಗಿದೆ.
ಈ ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಸರಕಾರ 2012ರಲ್ಲಿ ಜಿಡಿಪಿಯನ್ನು ಅಳೆಯುವ ಮಾನದಂಡ ಬದಲಾಯಿಸಿದ ಮೇಲೆ ಈ ರೀತಿ ಅತಿಯಾದ ಅಂದಾಜು ಶುರುವಾಯಿತು. ಅತಿ ಮುಖ್ಯವಾದ ಬದಲಾವಣೆ ಏನೆಂದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನೀಡುವ ದತ್ತಾಂಶಗಳ ಮೂಲಕ ಅಳೆಯಲು ಆರಂಭಿಸಲಾಯಿತು. ಅದಕ್ಕೂ ಮುನ್ನ ಗಾತ್ರದ ಆಧಾರದಲ್ಲಿ ಒದಗಿಸುವ ದತ್ತಾಂಶ ಪರಿಗಣಿಸಲಾಗುತ್ತಿತ್ತು.

ತೈಲ ದರ ಇಳಿಕೆಯ ಅವಧಿಯಲ್ಲಿ ದರ ಬದಲಾವಣೆಗೆ ಜಿಡಿಪಿ ಅಂದಾಜು ಇನ್ನಷ್ಟು ಸೂಕ್ಷ್ಮವಾಯಿತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇನ್ ಪುಟ್ ಮೌಲ್ಯವನ್ನು ಇನ್ ಪುಟ್ ದರದೊಂದಿಗೆ ಇಳಿಸುವುದನ್ನು ಬಿಟ್ಟು ಈ ಹೊಸ ಪದ್ಧತಿ ಅಡಿಯಲ್ಲಿ ಔಟ್ ಪುಟ್ ದರದೊಂದಿಗೆ ಈ ಮೌಲ್ಯವನ್ನು ಇಳಿಕೆ ಮಾಡಲಾಯಿತು. ಇದರಿಂದ ಉತ್ಪಾದನೆ ಪ್ರಗತಿಯು ಹೆಚ್ಚು ದಾಖಲಾಯಿತು.
ಸದ್ಯ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಈ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಸಾಂಖ್ಯಿಕ ಸಚಿವಾಲಯದ ವಕ್ತಾರರು ಕೂಡ ಈ ಬಗ್ಗೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಚಿನ ಅಧ್ಯಯನವು ಭಾರತದ ಆರ್ಥಿಕ ಅಂಕಿ-ಅಂಶಗಳ ಬಗ್ಗೆ ಹೆಚ್ಚು ಅನುಮಾನ ಮೂಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾವಧಿಯಲ್ಲಿ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ದರ ತೋರಿಸಿರುವುದನ್ನು ಹಲವು ಟೀಕಾಕಾರರು ಪ್ರಶ್ನಿಸಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿನ ಸಮಸ್ಯೆ ಬಗ್ಗೆ ಈ ವರ್ಷದ ಆರಂಭದಲ್ಲಿ ವಿವಾದ ಎಬ್ಬಿಸಿತ್ತು. ಇಬ್ಬರು ಸಾಂಖ್ಯಿಕ ಅಧಿಕಾರಿಗಳು ಈ ದತ್ತಾಂಶ ಹೊರಬಿದ್ದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಜಕಾರಣಿಗಳು ಸಂಖ್ಯೆಯನ್ನು ತಿದ್ದುವ ಪ್ರಯತ್ನ ಮಾಡಿ, ಪ್ರಭಾವಿಸಲು ಯತ್ನಿಸುತ್ತಿದ್ದಾರಾ ಎಂದು ಜಗತ್ತಿನಾದ್ಯಂತದ 108 ಆರ್ಥಿಕ ತಜ್ಞರು ಪ್ರಶ್ನೆ ಮಾಡಿದ್ದರು. ದತ್ತಾಂಶವನ್ನು ಸರಿಯಾಗಿ ದಾಖಲಿಸುವ ಮೂಲಕ ಭಾರತವು ತನ್ನ ವರ್ಚಸ್ಸಿಗೆ ಆಗಿರುವ ಧಕ್ಕೆಯನ್ನು ಸರಿ ಮಾಡಿಕೊಳ್ಳಬೇಕು. ಜಿಡಿಪಿ, ಉದ್ಯೋಗ ಸೃಷ್ಟಿ, ಸರಕಾರಿ ಲೆಕ್ಕಗಳು ಎಲ್ಲವೂ ಸರಿಹೋಗಬೇಕು. ಇದೇ ವೇಳೆ ಜಿಡಿಪಿಯನ್ನು ಅಳೆಯುವ ಮಾಪನವೇ ಸರಿಯಾಗಬೇಕು. ಇದಕ್ಕೆ ಸ್ವತಂತ್ರ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ಅರವಿಂದ್ ಅಭಿಪ್ರಾಯ ಪಟ್ಟಿದ್ದಾರೆ.
ಈ ವರ್ಷದ ಮೊದಲ ಮೂರು ತಿಂಗಳ ಬಗೆಗಿನ ತೀರಾ ಈಚಿನ ಮಾಹಿತಿ ಪ್ರಕಾರ, ಭಾರತದ ಪ್ರಗತಿಯು ಐದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.












Click it and Unblock the Notifications