ಮೂರು ರಾಜ್ಯಗಳು 'ಕೈ' ಹಿಡಿಯದಿದ್ದರೆ ಕಾಂಗ್ರೆಸ್ ಕಥೆ ಏನಾಗುತ್ತಿತ್ತು?
ನವದೆಹಲಿ, ಮೇ 24: ದೇಶದ ಅತಿ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಗೆ ಮೂರು ರಾಜ್ಯಗಳಲ್ಲಿ ಸೀಟುಗಳು ಬರದಿದ್ದರೆ ಹೀನಾಯ ಸ್ಥಿತಿ ತಲುಪುತ್ತಿತ್ತು.
ಕೇರಳ, ಪಂಜಾಬ್ ಹಾಗೂ ತಮಿಳುನಾಡಿನಲ್ಲಿ ಮತದಾರರುಕಾಂಗ್ರೆಸ್ ಜೊತೆ ನಿಲ್ಲದಿದ್ದರೆ ಒಟ್ಟು ಕಾಂಗ್ರೆಸ್ ಸೀಟುಗಳ ಸಂಖ್ಯೆ 20ರ ಆಸುಪಾಸಿನಲ್ಲಿರುತ್ತಿತ್ತು.ಈಗ ಒಟ್ಟು 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ.
ಅದರಲ್ಲಿ31 ಸೀಟುಗಳು ತಮಿಳುನಾಡು ಕೇರಳ ಹಾಗೂ ಪಂಜಾಬ್ನಿಂದ ಬಂದಿರುವುದು ವಿಶೇಷವಾಗಿದೆ. ಉಳಿದ 33 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಗಳಿಸಿರುವುದು ಕೇವಲ 19 ಸೀಟುಗಳು, ಕೇರಳ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿಯ ಸೀಟುಗಳನ್ನೇ ಪಡೆಯಲಿಲ್ಲ.

ಇನ್ನೊಂದು ವಿಪರ್ಯಾಸವೆಂದರೆ 17 ರಾಜ್ಯಗಳಲ್ಲಿ ಕಾಂಗ್ರೆಸ್ ಖಾತೆ ತೆರಿಯಲಿಲ್ಲ. ಅರ್ಥಾತ್ ಈ ರಾಜ್ಯಗಳು ಬಿಜೆಪಿಯ ಭಾಷೆಯಲ್ಲಿ ಕಾಂಗ್ರೆಸ್ ಮುಕ್ತವಾಗಿದೆ ಎನ್ನಬಹುದು.
ಕಾಂಗ್ರೆಸ್ ಕೈಹಿಡಿದಿರುವ ಮೂರು ರಾಜ್ಯಗಳನ್ನು ಪರಿಗಣಿಸಿದರೆ ಅಲ್ಲೆಲ್ಲೂ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನ ಮೂಲ ಕಾರಣದಿಂದ ಸೀಟು ಗಳಿಸಿರುವ ಲಕ್ಷಣವೂ ಕಾಣಿಸುವುದಿಲ್ಲ, ಕೇರಳದಲ್ಲಿ ಎಡರಂಗದ ಎಡವಟ್ಟುಗಳಿಂದ 15 ಸೀಟುಗಳನ್ನು ಪಡೆಯುವಂತಾಯಿತು. ತಮಿಳುನಾಡಿನಲ್ಲಿ ಡಿಎಂಕೆ ಬೆಂಬಲದಿಂದ 8 ಸೀಟುಗಳು ವರದಾನದ ರೂಪದಲ್ಲಿ ದೊರೆತವು.
ಇನ್ನು ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರೇಂದರ್ ಸಿಂಗ್ ವೈಯಕ್ತಿಕ ಚರಿಷ್ಮಾದಿಂದ ಕಾಂಗ್ರೆಸ್ ಎಂಟು ಸೀಟುಗಳನ್ನು ಉಳಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು.
ಈ ಮೂರೂ ರಾಜ್ಯಗಳ ಅಂಕಿ ಸಂಖ್ಯೆ ಸೇರಿಸಿದರೂ ಕಾಂಗ್ರೆಸ್ನ ಒಟ್ಟು 50 ಸೀಟುಗಳು ಬಿಜೆಪಿಯ ಉತ್ತರ ಪ್ರದೇಶದ ಒಟ್ಟು ಸೀಟುಗಳಿಗೂ ಸಮನಾಗದಿರುವುದು ರಾಹುಲ್ ಗಾಂಧಿ ತಂಡದ ರಾಜಕೀಯ ದುರಂತವಾಗಿದೆ.
ಈಮೂರೂ ರಾಜ್ಯಗಳು ಕೈಹಿಡಿಯದಿದ್ದರೆ ಕಾಂಗ್ರೆಸ್ ಸ್ಥಿತಿಯೂ 2014ರ ಫಲಿತಾಂಶಕ್ಕಿಂತ ಇನ್ನಷ್ಟು ಕೆಟ್ಟದಾಗಿರುತ್ತಿತ್ತು. ಅಂದಹಾಗೆ 16ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ 27 ಜನರು ಸೋತಿರುವುದು ಗಮನಾರ್ಹ ಅಂಶವಾಗಿದೆ.












Click it and Unblock the Notifications