ಸರ್ಜಿಕಲ್ ಸ್ಟ್ರೈಕ್; ಸರ್ವಪಕ್ಷಗಳ ತುರ್ತು ಸಭೆ ಕರೆದ ಕೇಂದ್ರ ಸರಕಾರ
ನವದೆಹಲಿ, ಫೆ 26: ಭಾರತೀಯ ವಾಯುಪಡೆಗಳು ಮಂಗಳವಾರ ನಸುಕಿನಲ್ಲಿ, ಪಾಕ್ ಉಗ್ರ ತಾಣದ ಮೇಲೆ ನಡೆಸಿದ ಏರ್ ಸ್ಟ್ರೈಕ್ ನಂತರ, ಕೇಂದ್ರ ಸರಕಾರ ತುರ್ತು ಸರ್ವಪಕ್ಷಗಳ ಸಭೆಯನ್ನು ಕರೆದಿದೆ.
ವಿದೇಶಾಂಗ ವ್ಯವಹಾರ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಈ ಸಭೆಯನ್ನು ಕರೆದಿದ್ದು, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿವರಣೆ ನೀಡುವ ಸಾಧ್ಯತೆಯಿದೆ. ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾದ ನಂತರ, ಸರ್ವಪಕ್ಷಗಳ ಸಭೆಯನ್ನು ಕರೆಯಲು ನಿರ್ಧರಿಸಲಾಯಿತು. ಮಂಗಳವಾರ (ಫೆ 26) ಸಂಜೆ ಐದು ಗಂತೆಗೆ ಸಭೆ ಆರಂಭವಾಗಲಿದೆ.
ಏರ್ ಸ್ಟ್ರೈಕ್ ನಡೆದ ಕೆಲವೇ ಗಂಟೆಗಳಲ್ಲಿ ವಿದೇಶಾಂಗ ಖಾತೆಯ ಸಚಿವಾಲಯ, ಭಾರತದಲ್ಲಿರುವ ಅಮೆರಿಕ, ಬ್ರಿಟನ್ ಮತ್ತು ಚೀನಾ ರಾಯಭಾರಿಗಳಿಗೆ ದಾಳಿಯ ಬಗ್ಗೆ ವಿವರಣೆಯನ್ನು ನೀಡಿದೆ. ನಮ್ಮ ಟಾರ್ಗೆಟ್ ಉಗ್ರರೇ ಹೊರತು ನಾಗರೀಕರಲ್ಲ ಎನ್ನುವ ಮಾತನ್ನು ಭಾರತ ಹೇಳಿದ್ದು, ರಾಜತಾಂತ್ರಿಕವಾಗಿ ಇದೊಂದು ಜಾಣ್ಮೆಯ ನಡೆ ಎಂದು ಹೇಳಲಾಗಿದೆ.

ವಿದೇಶಾಂಗ ಇಲಾಖೆಯ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ, ಮಾಧ್ಯಮಗಳಿಗೆ ದಾಳಿಯ ಬಗ್ಗೆ ವಿವರಣೆಯನ್ನು ನೀಡಿದ್ದರು. ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ, ಭಾರತೀಯ ವಾಯುಸೇನೆಯನ್ನು ಅಭಿನಂದಿಸಿದ್ದರು.
ಸಿಆರ್ ಪಿಎಫ್ ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಯ ನಂತರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಬೆತ್ತಲೆಗೊಳಿಸುವ ಕೆಲಸವನ್ನು ಭಾರತ ಮಾಡುತ್ತಿದೆ ಮತ್ತು ಅದರಲ್ಲಿ ಬಹುತೇಕ ಯಶಸ್ವಿಯಾಗಿದೆ ಕೂಡಾ..
ಸುಷ್ಮಾ ಸ್ವರಾಜ್ ಕರೆದಿರುವ ಸರ್ವಪಕ್ಷಗಳ ಸಭೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ, ಯಾವಯಾವ ಮುಖಂಡರು ಭಾಗವಹಿಸಲಿದ್ದಾರೆ ಎನ್ನುವುದು ಖಾತ್ರಿಯಾಗಿಲ್ಲ.












Click it and Unblock the Notifications