"ನಾನೇ ಮುಂದಿನ ಮುಖ್ಯಮಂತ್ರಿ" ನೆರೆಯ ರಾಜ್ಯದಲ್ಲೂ ಶುರುವಾಯ್ತು ಕೂಗು
ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣೆ ಪ್ರಾರಂಭವಾಗಿರುವ ಬೆನ್ನಲ್ಲೇ ಅಲ್ಲಿನ ಆಡಳಿತರೂಢ ಪ್ರಮುಖ ಪಕ್ಷದ ನಾಯಕರೊಬ್ಬರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಎಲ್ಲ ಪಕ್ಷಗಳು ಮಹಾರಾಷ್ಟ್ರ ಚುನಾವಣೆಗೆ ಯುದ್ಧೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಜಿತ್ ಪವಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾನೂ ಸಹ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು ಎಂದು ಅವರ ಮನದಾಸೆಯನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ ಬಣ) ಹಾಗೂ ಎನ್ಸಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಈಗಾಗಲೇ ಮೂರು ಪಕ್ಷಗಳು ಸೇರಿ ಆಡಳಿತ ನಡೆಸುತ್ತಿರುವುದರಿಂದ ಹಲವು ಗೊಂದಲಗಳು ಸೃಷ್ಟಿಯಾಗಿವೆ.

ರಾಜಕೀಯದಲ್ಲಿ ಪ್ರತಿಯೊಬ್ಬ ನಾಯಕನೂ ಸಹ ಮುಖ್ಯಮಂತ್ರಿಯಾಗಬೇಕು ಎಂದು ಇಚ್ಛಿಸುತ್ತಾರೆ. ಅದು ಸಹಜ ಪ್ರಕ್ರಿಯೆ ಸಹ. ಅದೇ ರೀತಿ ನಾನು ಸಹ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದೇನೆ. ಆದರೆ, ಅದಕ್ಕೆ ಬಹುಮತದ ಸಂಖ್ಯೆಯನ್ನು ತಲುಪುವುದು ಅತ್ಯವಶ್ಯ ಎಂದು ಹೇಳಿದ್ದಾರೆ. ಆದರೆ, ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಭಿನ್ನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುತ್ತಿವೆ. ಈ ಸಂದರ್ಭದಲ್ಲಿ ಅಜಿತ್ ಪವಾರ್ ಅವರ ಹೇಳಿಕೆ ಹೊಸ ಸಂಚಲವನವನ್ನೇ ಸೃಷ್ಟಿ ಮಾಡಿದೆ. ಮಹಾರಾಷ್ಟ್ರ ವಿಧಾನಸಭೆಯ ಸಂಖ್ಯಾ ಬಲ 288 ಇದೆ. ಮ್ಯಾಜಿಕ್ ನಂಬರ್ ಸಂಖ್ಯೆ 145. ನಾವು ಅಧಿಕಾರದ ಗದ್ದುಗೆ ಏರಬೇಕಾದರೆ, ಮ್ಯಜಿಕ್ ನಂಬರ್ ದಾಟಬೇಕಾಗಿದೆ. ಇನ್ನು ಈ ಎಲ್ಲ ನಿರ್ಧಾರವನ್ನು ಮತದಾನ ಪ್ರಭುವೇ ನಿರ್ಧರಿಸಲಿದ್ದಾನೆ ಎಂದೂ ಅಜಿತ್ ಪವಾರ್ ಅವರು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಈಗಲೇ ಚರ್ಚೆ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನಷ್ಟೇ ದಿನಾಂಕ ನಿಗದಿಯಾಗಬೇಕಿದೆ. ಸೀಟು ಹಂಚಿಕೆ ಸೇರಿದಂತೆ ಹಲವು ವಿಷಯಗಳು ಮುಂದಿನ ದಿನಗಳಲ್ಲಿ ಅಂತಿಮವಾಗಬೇಕಿದೆ. ಚುನಾವಣೆ ನಡೆದು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಲಿದೆ, ಮುಂದೆ ಯಾರಿಗೆ ಅಧಿಕಾರ ಗದ್ದುಗೆ ಸಿಗಲಿದೆ ಎನ್ನುವ ಹಲವು ವಿಷಯಗಳು ಅಂತಿಮವಾಗಬೇಕಿದೆ. ಆದರೆ, ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆದರು ಎನ್ನುವಂತೆ ಮಹಾರಾಷ್ಟ್ರದಲ್ಲಿ ನಾನು ಮುಂದಿನ ಮುಖ್ಯಮಂತ್ರಿ, ನಾನು ಮುಂದಿನ ಮುಖ್ಯಮಂತ್ರಿ ಎನ್ನುವ ಕೂಗು ಪ್ರಾರಂಭವಾಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಹೇಳಿದ್ದರೆ, ಅತ್ತ ಶಿವಸೇನೆಯ (ಏಕನಾಥ ಶಿಂಧೆ ಬಣ) ಮುಂದಿನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರೇ ಆಗಲಿದ್ದಾರೆ ಎಂದು ಹೇಳಿದೆ.

ಇತ್ತ ಬಿಜೆಪಿ ಚುನಾವಣೆ ನಡೆದು ಫಲಿತಾಂಶ ಬಂದ ಮೇಲೆ ಅದರ ಬಗ್ಗೆ ಯೋಚಿಸೋಣ ಬಿಡ್ರಿ ಅಂತಿದೆ. ಒಟ್ಟಿನಲ್ಲಿ ಚುನಾವಣೆಗೆ ಮುನ್ನವೇ ಮಹಾರಾಷ್ಟ್ರದಲ್ಲಿ ಸಿ.ಎಂ ಚರ್ಚೆ ಜೋರಾಗಿದೆ. ಇದು ಚುನಾವಣಾ ಫಲಿತಾಂಶದ ಮೇಲೆ ಇಲ್ಲ ರಾಜಕೀಯ ಲೆಕ್ಕಾಚಾರ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.












Click it and Unblock the Notifications