Himachal Pradesh Election Result 2022; ಕುತೂಹಲ ಕೆರಳಿಸಿದ ಕಾಂಗ್ರೆಸ್ ಮುನ್ನಡೆ, ಭಯ ಶುರುವಾಗಿದ್ದೇಕೆ?
ಶಿಮ್ಲಾ, ಡಿಸೆಂಬರ್, 08: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ 2022 ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಸಮೀಕ್ಷೆ ವರದಿಗಳ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಲಿದೆ ಹಾಗೂ ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಮಧ್ಯಾಹ್ನ 1:15ರ ಸುಮಾರಿಗೆ ಮ್ಯಾಜಿಕ್ ನಂಬರ್ನಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಹಾಗೆಯೇ ಹಿಮಾಚಲ ಪ್ರದೇಶದಲ್ಲಿ ಘನಾನುಘಟಿ ಬಿಜೆಪಿ ನಾಯಕರಿಗೆ ಭಾರಿ ಹಿನ್ನಡೆ ಆಗುತ್ತಲೇ ಇದೆ. ಇದನ್ನೆಲ್ಲ ಗಮನಿಸುತ್ತಿದ್ದರೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸತ್ಯವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಒಮ್ಮೆ ಕಮಲ, ಇನ್ನೊಮ್ಮೆ ಕಾಂಗ್ರೆಸ್ ಮುನ್ನಡೆ, ಈ ರೀತಿಯಾಗಿ ಹಾವು, ಏಣಿಯ ಆಟ ಮುಂದುವರೆದಿದೆ. ಇದರ ಮಧ್ಯೆಯೇ ರೆಸಾರ್ಟ್ ರಾಜಕಾರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ನಿಖರ ಫಲಿತಾಂಶ ಹೊರಬೀಳುವ ಮುನ್ನವೇ ಹೊಸ ಶಾಸಕರನ್ನು ಬಿಜೆಪಿ ತನ್ನ ಕಡೆಗೆ ಸೆಳೆದುಕೊಂಡು ಸರ್ಕಾರ ರಚಿಸುವ ಪ್ರಯತ್ನಕ್ಕೆ ಮುಂದಾಗಬಹುದು ಎಂಬ ಭಯ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ಆದ್ದರಿಂದ ಗೆದ್ದ ಅಭ್ಯರ್ಥಿಗಳನ್ನು ಕೂಡಲೇ ಒಗ್ಗೂಡಿಸಿ ರಾಜಸ್ಥಾನಕ್ಕೆ ಸ್ಥಳಾಂತರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ರೂಪಿಸಿದ ಯೋಜನೆ ಏನು?
ಸಂಪೂರ್ಣ ಫಲಿತಾಂಶ ಪ್ರಕಟವಾಗುವವರೆಗೂ ಕಾದು ಕುಳಿತರೆ ಗೆಲುವು ಸಾಧಿಸಿದ ಶಾಸಕರು ನಮ್ಮಿಂದ ಕೈತಪ್ಪಿ ಹೋಗಬಹುದು ಎಂಬ ಭೀತಿ ಕಾಂಗ್ರೆಸ್ ಪಕ್ಷಕ್ಕೆ ಶುರುವಾಗಿದೆ. ಛತ್ತೀಸ್ಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರ ಮುಂದಾಳತ್ವದಲ್ಲಿ ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾ ವಾದ್ರಾರಿಂದ ಪರಿಸ್ಥಿತಿ ಅವಲೋಕನ
ಗೆಲುವು ಖಚಿತವಾಗುತ್ತಿದ್ದಂತೆಯೇ ಶಾಸಕರನ್ನು ಬಸ್ಗಳಲ್ಲಿ ರಾಜಸ್ಥಾನಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಅವರು ಕೂಡ ಶಿಮ್ಲಾಕ್ಕೆ ಗುರುವಾರ ತೆರಳುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಹೊರಬಿದ್ದಿತ್ತು.
ಗದ್ದುಗೆ ಏರಲು ಕಾಂಗ್ರೆಸ್ ಪ್ಲಾನ್
ಹಿಮಾಚಲದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಇರುವುದರಿಂದ, ಸಂಪ್ರದಾಯದಂತೆ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ನಿರೀಕ್ಷೆಯೂ ಇದೆ. ಆದರೆ ಫಲಿತಾಂಶದ ಪ್ರಾರಂಭಿಕ ಸುತ್ತುಗಳನ್ನು ನೋಡಿದರೆ, ಕಾಂಗ್ರೆಸ್ ಹಾದಿ ಸುಗಮವಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿತ್ತು. ಆಡಳಿತ ವಿರೋಧಿ ಅಲೆ ತಮಗೆ ವರದಾನವಾಗಲಿದೆ ಎಂಬ ವಿಶ್ವಾಸದ ಜೊತೆಗೆ, ಬೆಲೆ ಏರಿಕೆ, ನಿರುದ್ಯೋಗ, ಹಳೆ ಪಿಂಚಣಿ ವ್ಯವಸ್ಥೆ ಸೇರಿದಂತೆ ರಾಜ್ಯದಲ್ಲಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತಮಗೆ ಅಧಿಕಾರ ನೀಡುವಂತೆ ಮತದಾರರ ಬಳಿ ಹೋಗಿತ್ತು.
ರೆಸಾರ್ಟ್ ರಾಜಕಾರಣ ಶುರುವಾಯ್ತ?
ಪ್ರಸ್ತುತ ಛತ್ತೀಸಗಡ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ತನ್ನ ಸ್ವಂತ ಬಲದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಇದೀಗ ಹಿಮಾಚಲ ಪ್ರದೇಶದಲ್ಲಿನ ಗೆಲುವು ಪಕ್ಷದ ಪುನಶ್ಚೇತನಕ್ಕೆ ಮುಖ್ಯವಾಗಿದೆ. ಏನಾದರೂ ಅತಂತ್ರ ಫಲಿತಾಂಶ ಎದುರಾದರೆ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕುವುದು ಖಚಿತವಾಗಿದೆ. ಬಿಜೆಪಿ ತಮ್ನ ಶಾಸಕರನ್ನೂ ಸೆಳೆದುಕೊಳ್ಳಲಿದೆ ಎಂಬ ಆತಂಕ ಕಾಂಗ್ರೆಸ್ನಲ್ಲಿ ಶುರುವಾಗಿದೆ. ಆದ್ದರಿಂದ ಅಂತಿಮ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ಹಿಮಾಚಲದಲ್ಲಿ ರೆಸಾರ್ಟ್ ರಾಜಕಾರಣ ಶುರುವಾಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.