ಹಿಮಾಚಲ ಚುನಾವಣೆ: ರಾಹುಲ್ ಗಾಂಧಿ ಎಲ್ಲಿದ್ದಾರೆ- ಬಿಜೆಪಿ ಪ್ರಶ್ನೆ
ಸಿಮ್ಲಾ ನವೆಂಬರ್ 9: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಎಲ್ಲಾ ಪ್ರಬಲ ಪಕ್ಷಗಳು ಭರ್ಜರಿ ಪ್ರಚಾರವನ್ನು ಆರಂಭಿಸಿವೆ. ಮತದಾರರನ್ನು ಸೆಳೆಯಲು ಹಲವಾರು ಭರವಸೆಗಳ ಸುರಿ ಮಳೆಯೆ ಸುರಿಸುತ್ತಿವೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ಚುನಾವಣೆಯನ್ನು ಲೆಕ್ಕಿಸದೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ ಯಾತ್ರೆಯಲ್ಲಿ' ಭಾಗಿಯಾಗಿದ್ದಾರೆ. ಇದು ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆಯನ್ನು ಮೂಡಿಸಿದೆ.
ಇನ್ನು 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರ ಮುಗಿಯಲಿದೆ. ಆದರೆ ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೇ ಒಂದು ಭಾರಿ ಹಿಮಾಚಲಕ್ಕೆ ಪ್ರಚಾರಕ್ಕಾಗಿ ಆಗಮಿಸಿಲ್ಲ ಎನ್ನುವುದು ಕಾರ್ಯಕರ್ತರಲ್ಲಿ ಬೇಸರ ತಂದಿದೆ. 'ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ' ಈ ನಡುವೆ ಬಿಜೆಪಿ ತನ್ನ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುತ್ತಿದೆ.
ಹಿಮಾಚಲ ಪ್ರದೇಶ: ಹೆದ್ದಾರಿಯಲ್ಲಿ ಕೆಟ್ಟು ನಿಂತ ಬಸ್ ತಳ್ಳಿದ ಅನುರಾಗ್ ಠಾಕೂರ್
ತಮ್ಮ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ 62 ನೇ ದಿನಕ್ಕೆ ಕಾಲಿಟ್ಟಿದ್ದು ಕಾಂಗ್ರೆಸ್ ಉನ್ನತ ನಾಯಕ ರಾಹುಲ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಬಿಜೆಪಿ ಹೇಳಿದೆ. ಈ ಬಾರಿ ಪಕ್ಷದ ನಾಯಕರು ಹಿಮಾಚಲ ರಾಜ್ಯ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಿಲ್ಲ. ಮತ್ತೊಂದು ಸೋಲಿನ ಭಯ ಅವರಿಗೆ ಕಾಡುತ್ತಿದೆ. ಮಾತ್ರವಲ್ಲದೆ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಬಯಸುವುದಿಲ್ಲ ಎಂದು ಬಿಜೆಪಿ ಕುಟುಕಿದೆ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ
ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೇಡಿಕೆಗಳ ಹೊರತಾಗಿಯೂ, ಬೆಟ್ಟದ ರಾಜ್ಯದಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡದೆ ಕನ್ಯಾಕುಮಾರಿಯಿಂದ ಕಾಶ್ಮೀರ ಪಾದಯಾತ್ರೆಯನ್ನು ಮುಂದುವರಿಸಲು ರಾಹುಲ್ ನಿರ್ಧರಿಸಿದ್ದಾರೆ. ಒಂದು ದಿನವೂ ರಾಹುಲ್ ಪ್ರಚಾರ ಮಾಡದಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.
ಇದೇ ಸಮಯವನ್ನು ಬಳಸಿಕೊಂಡ ಬಿಜೆಪಿ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಕಾಂಗ್ರೆಸ್ ಪಕ್ಷವನ್ನು ಕೆಣಕಿದೆ. ಸೋಲಿನ ಭಯದಿಂದ ರಾಹುಲ್ ಪ್ರಚಾರದಿಂದ ದೂರ ಉಳಿದಿದ್ದಾರೆ ಮತ್ತು ಜವಾಬ್ದಾರಿ ಹೊರಲು ಬಯಸುತ್ತಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಹಿಮಾಚಲದ ಬಗ್ಗೆ ರಾಹುಲ್ಗೆ ಏಕೆ ಅಸಡ್ಡೆ- ಪ್ರಸಾದ್ ಶಿಮ್ಲಾ
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್ ಶಿಮ್ಲಾ,"ರಾಹುಲ್ ಗಾಂಧಿ ಎಲ್ಲಿದ್ದಾರೆ, ಅವರು ಎಲ್ಲಿ ಕಾಣೆಯಾಗಿದ್ದಾರೆ? ಅವರು ಯಾತ್ರೆಯಲ್ಲಿದ್ದಾರೆ ಸರಿ, ಆದರೆ ಹಿಮಾಚಲದ ಬಗ್ಗೆ ಅವರಿಗೇಕೆ ಅಸಡ್ಡೆ. ಕಾಂಗ್ರೆಸ್ನ ಸಂಪೂರ್ಣ ನಾಯಕತ್ವ ಅಂದರೆ ಪರಿಣಾಮಕಾರಿ ನಾಯಕತ್ವ. ಎಲ್ಲವನ್ನೂ ನೊಭಾಯಿಸಬೇಕು. ಆದರೆ ಅವರು ಹಿಮಾಚಲದ ಬಗ್ಗೆ ಏಕೆ ಅಸಡ್ಡೆ ಹೊಂದಿದ್ದಾರೆ" ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಬಿಜೆಪಿ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್ ವ್ಯವಸ್ಥಾಪಕರು, ಪಕ್ಷ ರಾಜ್ಯವನ್ನು ಕೈಬಿಟ್ಟಿಲ್ಲ ಎಂದು ತಿರುಗೇಟು ನೀಡಿದ್ದಾರೆ. ರಾಹುಲ್ ಅವರ ಸಹೋದರಿಯೂ ಆಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಅವರು ನೆನಪಿಸಿದ್ದಾರೆ.
ಪ್ರಬಲ ಕೈ ನಾಯಕರಿಂದ ಪ್ರಚಾರ
"ಚುನಾವಣೆಗಳು ಬರುತ್ತವೆ ಹೋಗುತ್ತವೆ. ಭಾರತ್ ಜೋಡೋ ಯಾತ್ರೆಯಂತಹ ಕಾರ್ಯಕ್ರಮಗಳು ಜೀವನದಲ್ಲಿ ಒಮ್ಮೆ ಮಾತ್ರ. ನೀವು ಅಡಿಪಾಯ ಹಾಕುವಲ್ಲಿ ನಿರತರಾಗಿರುವಾಗ ನೀವು ಇದ್ದಕ್ಕಿದ್ದಂತೆ ಹೋಗಿ ಕಪ್ಪು ಬಣ್ಣ ಬಡಿಯುವ ಕೆಲಸಗಳನ್ನು ಮಾಡಬೇಡಿ. ಈ ಹಂತದಲ್ಲಿ ರಾಹುಲ್ ಹಿಮಾಚಲದಲ್ಲಿ ಪ್ರಚಾರ ಮಾಡುವುದು ಫಿನಿಶಿಂಗ್ ಕೋಟ್ ಆಫ್ ಪೇಂಟ್ಗಿಂತ ಹೆಚ್ಚೇನೂ ಅಲ್ಲ "ಎಂದು ಕಾಂಗ್ರೆಸ್ ವ್ಯವಸ್ಥಾಪಕರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರಂತಹ ಹಿರಿಯ ನಾಯಕರು ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊನೆಯ ಎರಡು ದಿನಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಾಯಕರು ಗಮನಸೆಳೆದಿದ್ದಾರೆ.
48 ಗಂಟೆಗಳಲ್ಲಿ ಹಿಮಾಚಲ ಪ್ರಚಾರ ಅಂತ್ಯ
ಇದು ಹಿಮಾಚಲವನ್ನು ನಿಭಾಯಿಸುವ "ಸಾಮೂಹಿಕ ನಾಯಕತ್ವ" ಎಂದು ಅವರು ಪ್ರತಿಪಾದಿಸುತ್ತಾರೆ. ಪಕ್ಷ ರಾಹುಲ್ ಮೇಲೆ ಕೇಂದ್ರೀಕರಿಸಲು ಬಯಸುವುದಿಲ್ಲ. "ಚುನಾವಣೆಯಲ್ಲಿ ಹೋರಾಡುವ ಏಕೈಕ ವ್ಯಕ್ತಿ ರಾಹುಲ್ ಗಾಂಧಿ ಮಾತ್ರ ಅಲ್ಲ? ಅವರು ಪಕ್ಷಕ್ಕೆ ಸೈದ್ಧಾಂತಿಕ ನಿರ್ದೇಶನವನ್ನು ನೀಡುತ್ತಿದ್ದಾರೆ ಮತ್ತು ಅವರನ್ನು ಮತ್ತೆ ಜನರೊಂದಿಗೆ ಸಂಪರ್ಕಿಸುತ್ತಿದ್ದಾರೆ. ಕನಿಷ್ಠ 4-5 ರಾಜ್ಯಗಳಲ್ಲಿ ರಾಜ್ಯವಾರು ಯಾತ್ರೆಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಕಾಂಗ್ರೆಸ್ ವ್ಯವಸ್ಥಾಪಕರು ಹೇಳಿದರು.
ಬೆಟ್ಟದ ತುದಿಯಲ್ಲಿರುವ ರಾಜ್ಯವಾದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯು ಇದೇ ನವೆಂಬರ್ 12ರಂದು ನಡೆಯಲಿದೆ. 68 ಸ್ಥಾನಗಳ ವಿಧಾನಸಭೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹಾಗೂ ನಾಯಕರ ರ್ಯಾಲಿ ನಡೆಯುತ್ತಿದೆ.