Weather Forecast: ಚಳಿಯ ನಡುವೆಯೂ ಈ ಭಾಗಗಳಲ್ಲಿ ಮುಂದಿನ ಒಂದು ವಾರ ಭಾರೀ ಮಳೆ ಮುನ್ಸೂಚನೆ
Weather Forecast: ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟದಿಂದ ಸುನಾಮಿಯಂತಹ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಇನ್ನು ಇದೀಗ ಚಳಿಗಾಲ ಆರಂಭವಾಗಿದ್ದು, ಇದರ ನಡುವೆಯೇ ಕೆಲವೆಡೆ ಮಳೆರಾಯ ಆರ್ಭಟವನ್ನು ಮುಂದುವರೆಸಿದ್ದಾರೆ. ಹಾಗೆಯೇ ಮುಂದಿನ ಹಲವು ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ನಡುವೆ ಹಲವೆಡೆ ರಣಭೀಕರ ಚಳಿ ಹಿನ್ನೆಲೆ ಜನರು ಬೆಳಗ್ಗೆ 10 ಗಂಟೆಯಾದರೂ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ವಾಯುವ್ಯ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ.

ನವದೆಹಲಿಯ ಹವಾಮಾನ ವಿವರ: ಭಾರತೀಯ ಹವಾಮಾನ ಇಲಾಖೆ ಪ್ರಕಾರ, ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಹದಗೆಡುತ್ತಲೇ ಇದೆ. ಹಾಗೆಯೇ ಮುಂದಿನ ದಿನಗಳಲ್ಲಿಯೂ ಇಲ್ಲಿ ವಾಯುಮಾಲಿನ ಪ್ರಮಾಣದಲ್ಲು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ.
ನವದೆಹಲಿಯಲ್ಲಿ ಗುರುವಾರ ದಟ್ಟವಾಗಿ ಮಂಜು ಕವಿದ ವಾತಾವರಣ ನಿರ್ಮಾಣವಾಗಿತ್ತು. ಜೊತೆಗೆ ವಾಯುಮಾಲಿನ್ಯದ ಪ್ರಮಾಣವೂ ಕೂಡ ಹೆಚ್ಚಾಗಿ ಹೊಗೆಯಂತಹ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಈಗಾಗಲೇ ಇಲ್ಲಿನ ತಾಪಮಾನದಲ್ಲಿ ಕುಸಿತವಾಗಿದ್ದು, ಗರಿಷ್ಠ ತಾಪಮಾನ 26-28 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದರೆ, ಕನಿಷ್ಠ ತಾಪಮಾನ 11-17 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಕುಸಿತವಾಗಲಿದೆ ಎಂದು ತಿಳಿಸಿದೆ.
ದಟ್ಟವಾದ ಮಂಜು ಕವಿಯುವ ಮನ್ಸೂಚನೆ ಹಿನ್ನೆಲೆ ಮಂಜಾಗ್ರತಾ ಕ್ರಮವಾಗಿ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಪಶ್ಚಿಮ ರಾಜಸ್ಥಾನಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ ಮತ್ತು ಜಾರ್ಖಂಡ್ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ನವೆಂಬರ್ 18ರಿಂದ 20 ರವರೆಗೂ ನವದೆಹಲಿಯ ಕನಿಷ್ಠ ತಾಪಮಾನವು 15°C ಗಿಂತ ಕಡಿಮೆಯಾಗಬಹುದು ಎಂದು ತಿಳಿಸಿದೆ.
ಎಲ್ಲೆಲ್ಲಿ ಮಳೆ?: ದಕ್ಷಿಣ ಭಾರತದ ಹವಾಮಾನವನ್ನು ನೋಡುವುದಾದರೆ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಇರಲಿದ್ದು, ಇದರ ಪರಿಣಾಮ ದಕ್ಷಿಣ ಭಾದತರದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು, ಕೇರಳ, ದಕ್ಷಿಣ ತೆಲಂಗಾಣ, ಕರ್ನಾಟಕ, ಲಕ್ಷದ್ವೀಪ ಮತ್ತು ಕರಾವಳಿ ಆಂಧ್ರಪ್ರದೇಶದ ಹಲವೆಡೆ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.












Click it and Unblock the Notifications