ಕ್ರಾಂತಿಕಿಡಿ ಮಂಗಲ್ ಪಾಂಡೆ ಜನ್ಮದಿನ: ಶುಭ ಹಾರೈಸಿದ ಗಣ್ಯರು
ಮಂಗಲ್ ಪಾಂಡೆ ಎಂಬ ಹೆಸರು ಭಾರತೀಯ ಸೈನಿಕರ ಪಾಲಿಗೆ, ದೇಶಭಕ್ತರ ಪಾಲಿಗೆ ಒಂದು ಸ್ಫೂರ್ತಿ ಮಂತ್ರವೇ ಸರಿ. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಮಂಗಲ್ ಪಾಂಡೆ(ಜುಲೈ 19, 1827- ಏಪ್ರಿಲ್ 8, 1857)ಯವರ 190 ನೇ ಜನ್ಮದಿನ ಇಂದು.
ಅದಕ್ಕೆಂದೇ ದೇಶದಾದ್ಯಂತ ಗಣ್ಯರು, ಕ್ರಾಂತಿಕಿಡಿ ಮಂಗಲ್ ಪಾಂಡೆಯವರ ಜನ್ಮದಿನವನ್ನು ನೆನೆಸಿಕೊಂಡಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಮೊದಲ ಹೆಜ್ಜೆಗೆ ನಾಂದಿ ಹಾಡಿದ ಮಂಗಲ್ ಪಾಂಡೆ ಅವರ ಧೈರ್ಯ, ದೇಶಭಕ್ತಿಯನ್ನು ನೆನಪಿಸಿಕೊಳ್ಳುವುದಕ್ಕೆ ಇದೊಂದು ಸುಸಂದರ್ಭ.
ಬೆಂಗಾಲ್ ನೇಟಿವ್ ಇನ್ ಫೇಂಟ್ರಿಯ 34 ನೇ ರೆಜಿಮೆಂಟ್ ನ ಸಿಪಾಯಿಯಾಗಿದ್ದ ಮಂಗಲ್ ಪಾಂಡೆ ಹುಟ್ಟಿದ್ದು, ಜುಲೈ 19, 1827 ರಲ್ಲಿ. ಈಗಿನ ಉತ್ತರ ಪ್ರದೇಶದ ಬಾಲ್ಲಿಯಾ ಜಿಲ್ಲೆಯ ನಾಗ್ವಾ ಎಂಬ ಹಳ್ಳಿಯಲ್ಲಿ ದಿವಾಕರ್ ಪಾಂಡೆ, ಅಭೈರಾಣಿ ಪಾಂಡೆ ದಂಪತಿಗಳ ಮಗನಾಗಿ ಜನಿಸಿದ ಮಂಗಲ್ ಪಾಂಡೆ, 1849 ರಲ್ಲಿ ಬೆಂಗಾಳ ಸೇನೆಯನ್ನು ಸೇರಿದರು.
ಭಗತ್ ಸಿಂಗ್ ಗೆ ಸ್ಫೂರ್ತಿಯಾಗಿದ್ದ 19 ವರ್ಷದ ಕ್ರಾಂತಿಕಾರಿ
ಮಂಗಲ್ ಪಾಂಡೆ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಸಂದರ್ಭ ಸೃಷ್ಟಿಯಾಗಿದ್ದು, 1857, ಮಾರ್ಚ್ ನಲ್ಲಿ. ಆ ಸಂದರ್ಭದಲ್ಲಿ ಬ್ರಿಟೀಶ್ ಸರ್ಕಾರ ಹೊಸದಾಗಿ ಪರಿಚಯಿಸಿದ್ದ ಎನ್ಫೀಲ್ಡ್ ಪಿ-53 ರೈಫಲ್ ಗಳ ಬುಲೆಟ್ ಕಾರ್ಟ್ರಿಜ್ ಗೆ ಹಸು ಮತ್ತು ಹಂದಿಯ ಮಾಂಸವನ್ನು ಸವರಬೇಕಿತ್ತು.
ಈ ಸಂದರ್ಭದಲ್ಲಿ ಕಾಟ್ರಿಜ್ ನ ಹಿಂಭಾಗವನ್ನು ಕಚ್ಚಬೇಕಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸೇನೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಸೈನಿಕರು ಉದ್ರಿಕ್ತರಾಗಿದ್ದರು. ಏಕೆಂದರೆ ಹಸು ಹಿಂದುಗಳಿಗೆ ಪೂಜನೀಯ. ಹಂದಿ ಎಂದರೆ ಮುಸ್ಲಿಮರಿಗೆ ವರ್ಜ್ಯ. ಎರಡು ಮತಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇಂಥ ಕೆಲಸ ಸಾಧ್ಯವಿಲ್ಲ ಎಂದು ಸಿಪಾಯಿಗಳು ವಿರೋಧಿಸಿದ್ದರು.
ಬ್ರಿಟೀಶರ ಬಿಗುಮುಷ್ಟಿಯಿಂದ ಸ್ವಾತಂತ್ರ್ಯ ಪಡೆವ ಹುಮ್ಮಸ್ಸಿನಲ್ಲಿದ್ದ ಬಿಸಿರಕ್ತಕ್ಕೆ ನೆಪವೊಂದು ಬೇಕಿತ್ತು. ಇದೇ ವಿಷಯವನ್ನಿಟ್ಟುಕೊಂಡು ಮಂಗಲ್ ಪಾಂಡೆ, 1857, ಮಾರ್ಚ್ 29 ರಂದು ಬ್ರಿಟಿಶ್ ಅಧಿಕಾರಿ ಮೇಜರ್ ಹ್ಯೂಸನ್ ಮತ್ತು ಲೆಫ್ಟಿನಂಟ್ ಭಾಘ್ ಮೇಲೆ ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನೂ ನೆಲಕ್ಕುರುಳಿಸಿದ್ದರು. ನಂತರ ಬ್ರಿಟೀಶ್ ಸೇನೆ ಮಂಗಲ್ ಪಾಂಡೆಯವರನ್ನು ಬಂಧಿಸಿತ್ತು.
ಈ ಸಂದರ್ಭದಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವುದಕ್ಕೆ ಹೊರಟ ಪಾಂಡೆ ಪ್ರಯತ್ನವೂ ವಿಫಲವಾಗಿತ್ತು. ಗಾಯಗೊಂಡಿದ್ದ ಪಾಂಡೆಯವರನ್ನುಬ್ರಿಟೀಶ್ ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ 8 (1857)ರಂದು ಬ್ಯಾರಕ್ಪುರ(ಕೋಲ್ಕತ್ತ)ದಲ್ಲಿ ಗಲ್ಲಿಗೇರಿಸಲಾಯಿತು.
ರಾಮ್ ಪ್ರಸಾದ್ ಬಿಸ್ಮಿಲ್ ಜನ್ಮದಿನ ಯಾಕೆ ನೆನಪಾಗಲಿಲ್ಲ?
ಪಾಂಡೆಯವರನ್ನು ಅಂದು ಗಲ್ಲಿಗೇರಿಸಲು ಬ್ಯಾರಕ್ಪುರದಲ್ಲಿ ಯಾರೊಬ್ಬರೂ ಒಪ್ಪದೆ, ಕೋಲ್ಕತ್ತಾದಿಂದ ನಾಲ್ವರು ನೇಣುಹಾಕುವವರನ್ನು ಕರೆಯಿಸಲಾಯ್ತು ಎಂಬುದು ಪಾಂಡೆ ಅವರ ಕುರಿತು ಬ್ಯಾರಕ್ಪುರದ ಜನತೆಗೆ ಎಷ್ಟು ಅಭಿಮಾನವಿತ್ತು ಎಂಬುದಕ್ಕೆ ಸಾಕ್ಷಿ. ಸ್ವಾತಂತ್ರ್ಯ ಹೋರಾಟದ ಸಾಧ್ಯತೆಗಳನ್ನು ಪರಿಚಯಿಸಿದ, ಬ್ರಿಟೀಶ್ ಸರ್ಕಾರಕ್ಕೆ ನಡುಕ ಹುಟ್ಟಿಸಿದ ಮಂಗಲ್ ಪಾಂಡೆಯವರ ಜನ್ಮದಿನಕ್ಕೆ ಹಲವು ಮಹನೀಯರು ಶುಭಹಾರೈಸಿ, ಅವರ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.
Recommended Video
|
ಮಂಗಲ್ ಪಾಂಡೆ ಸಂಸ್ಮರಣೆ
ಕ್ರಾಂತಿವೀರ ಮಂಗಲ್ ಪಾಂಡೆ ಅವರ ಜನ್ಮದಿನದಂದು, ಅವರ ಕೆಚ್ಚೆದೆಯ ಹೋರಾಟ ನೆನಪಿಸಿಕೊಳ್ಳೋಣ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.
|
ಸ್ವಾತಂತ್ರ್ಯದ ಕಿಡಿ ಹಚ್ಚಿದ ನಾಯಕ
ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹಚ್ಚಿದ ಮಹಾನ್ ಕ್ರಾಂತಿಕಾರಿ ಸೈನಿಕ ಮಂಗಲ್ ಪಾಂಡೆ ಅವರನ್ನು ಅವರ ಜನ್ಮದಿನದಂದು ಸ್ಮರಿಸೋಣ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಬುವಾನಿವಾಲಾ ಅವರು ಟ್ವೀಟ್ ಮಾಡಿದ್ದಾರೆ.
|
ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೀರೋ
ದೇಶದ ವೀರ ಸ್ವಾತಂತ್ರ್ಯ ಹೋರಾಟಗಾರ, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಮಂಗಲ್ ಪಾಂಡೆ ಅವರನ್ನು ಅವರ ಜನ್ಮದಿನದಂದು ನೆನಪಿಸಿಕೊಳ್ಳೋಣ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
|
ಭಾರತೀಯ ರಾಷ್ಟ್ರೀಯತೆಯ ಹೋರಾಟಕ್ಕೆ ಪಾಂಡೆಯವರ ಕೊಡುಗೆ
ಭಾರತೀಯ ರಾಷ್ಟ್ರೀಯತೆಯ ಹೋರಾಟಕ್ಕೆ ಮಂಗಲ್ ಪಾಂಡೆಯವರ ಅಮೋಘ ಕೊಡುಗೆ ಅವಿಸ್ಮರಣೀಯ. ಅಂಥ ಮಹಾನ್ ಹೋರಾಟಗಾರನ ಜನ್ಮದಿನದಂದು ಅವರನ್ನು ಸ್ಮರಿಸೋಣ ಎಂದು ಮಧ್ಯಪ್ರದೇಶ ಮುಖ್ಯಮಂಗತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.
|
ಮುಂದಿನ ಪೀಳಿಗೆಯೂ ನೆನಪಿಸಿಕೊಳ್ಳಲಿ
ನಿಮ್ಮಮಕ್ಕಳಿಗೆ ಮಂಗಲ್ ಪಾಂಡೆ ಅವರಂಥ ಮಹನೀಯರ, ಸ್ಫೂರ್ತಿಸೆಲೆಗಳ ಕತೆ ಹೇಳಿ. ಮುಂದಿನ ತಲೆಮಾರು ಸಹ ಇಂಥ ದಂತಕತೆಗಳನ್ನು ಸ್ಮರಿಸಲಿ. ಜನ್ಮದಿನದಂದು ಮಂಗಲ್ ಪಾಂಡೆ ಅವರಿಗೆ ನೂರು ನೂರು ನಮನ ಎಂದು ಅರ್ಚನಾ ಪ್ರತಿಷ್ಠ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮಹಾನ್ ಸ್ವಾತಂತ್ರ್ಯ ಹೋರಾಟಗಾರ
ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೀರೋ ಮಂಗಲ್ ಪಾಂಡೆಯವರನ್ನು ಅವರ ಜಯಂತಿಯಂದು ನೆನಪಿಸಿಕೊಳ್ಳೋಣ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಟ್ವೀಟ್ ಮಾಡಿದ್ದಾರೆ.