ಹೇಗಿದ್ದ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಗಾಗಿ ಹೋದರು!
ನಾಲ್ಕು ಗೋಡೆಗಳ ಮಧ್ಯೆ ಕುಳಿತು, ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದ್ದ ಅಪ್ಪ-ಮಗನ ನಡುವಿನ ಸಮಸ್ಯೆಗೆ ರಾಜಕೀಯ ಬಣ್ಣ ಅಂಟಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಉತ್ತರಪ್ರದೇಶದ ಯಾದವ ಕುಟುಂಬದ ವಿದ್ಯಮಾನಗಳೇ ಸಾಕ್ಷಿ.
ಒಂದು ಕಾಲದಲ್ಲಿ ತೃತೀಯ ರಂಗದ ವಿಚಾರಕ್ಕೆ ಬಂದಾಗ, ಪ್ರಧಾನಮಂತ್ರಿ ಅಭ್ಯರ್ಥಿ ಹೆಸರಿನೊಂದಿಗೆ ಗುರುತಿಸಲಾಗುತ್ತಿದ್ದ, ದೇಶದ ಸೀಸನ್ ಪೊಲಿಟಿಸಿಯನ್ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯ ಜೀವನ ಸಂಧ್ಯಾ ಕಾಲದತ್ತ ಸಾಗುತ್ತಿದೆ.
ರಾಮಮನೋಹರ ಲೋಹಿಯಾ ಮತ್ತು ರಾಜಾ ನಾರಾಯಣ್ ಗರಡಿಯಲ್ಲಿ ಪಳಗಿದ್ದ ಮುಲಾಯಂ ಸಿಂಗ್ ಯಾದವ್, 1967ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಉತ್ತರಪ್ರದೇಶ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲಿಂದ ನಾಲ್ಕೂವರೆ ದಶಕಗಳ ಕಾಲ ಉತ್ತರಪ್ರದೇಶ ಮತ್ತು ದೇಶದ ರಾಜಕಾರಣದಲ್ಲಿ ಪ್ರಭಲ ನಾಯಕನಾಗಿ, ಪಕ್ಷದೊಳೆಗೆ 'ನೇತಾಜಿ' ಎಂದೇ ಕರೆಯಲ್ಪಡುತ್ತಿದ್ದ ಮುಲಾಯಂ ಈಗ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ.
ಯಾದವರ ಜೊತೆ ಮುಸ್ಲಿಮರ ಮತಗಳಿಸಲು 'ಮೌಲಾನ' ಸಿಂಗ್ ಎನ್ನುವ ಮುಖವಾಡವನ್ನೂ ತೊಟ್ಟಿದ್ದ ಮುಲಾಯಂ, ತಮ್ಮ ಅಧಿಕಾರದ ಅವಧಿಯಲ್ಲಿ ಮಗ,ತಮ್ಮ, ಅವರು, ಇವರು ಸೇರಿ, ಕುಟುಂಬದ ಇಪ್ಪತ್ತಕ್ಕೂ ಹೆಚ್ಚು ಸದಸ್ಯರನ್ನು ಆಯಕಟ್ಟಿನ ಹುದ್ದೆಗೆ ನೇಮಿಸಿದ್ದರು. ಆದರೆ, ಇಂದು ಪಕ್ಷದಲ್ಲಿ ಮೂಲೆಗುಂಪಾಗಿರುವ ಮುಲಾಯಂ ಅವರನ್ನು ಮತ್ತೆ ಮೇಲೆಕೆತ್ತುವ ಕೆಲಸಕ್ಕೆ ಕುಟುಂಬದಲ್ಲಿ ಯಾರೂ ಮುಂದಾಗುತ್ತಿಲ್ಲ.
ನೆಹರೂ- ಗಾಂಧಿ ಪರಿವಾರದ ನಂತರ ಕುಟುಂಬ ಸಾಮ್ರಾಜ್ಯಶಾಹಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದ ರಾಜಕಾರಣಿಗಳಲ್ಲಿ ಮುಲಾಯಂ ಸಿಂಗ್ ಹೆಸರು ಮಂಚೂಣಿಯಲ್ಲಿ ಬರುವಂತದ್ದು. ಆದರೆ, ಯಾರನ್ನು ರಾಜಕೀಯದ ಏಣಿಯೇರಲು ಮುಲಾಯಂ ತಮ್ಮ ಬೆವರು ಸುರಿಸಿದ್ದರೋ, ಅವರೇ ಇಂದು ಮುಲಾಯಂ ಅವರನ್ನು ಕೆಳಕ್ಕೆ ತಳ್ಳಿದ್ದಾರೆ. ಅಪ್ಪ-ಮಗನ ನಡುವೆ 'ಯಾದವೀ ಕಲಹ'

ಮುಲಾಯಂ ಸಿಂಗ್ ನೇತೃತ್ವದಲ್ಲಿ ಅಭೂತಪೂರ್ವ ಜಯಗಳಿಸಿತ್ತು
2012ರಲ್ಲಿ ನಡೆದ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಜಯಗಳಿಸಿತ್ತು. 224 ಕ್ಷೇತ್ರಗಳಲ್ಲಿ ಎಸ್ಪಿ ಜಯಭೇರಿ ಬಾರಿಸುವ ಮೂಲಕ ಸ್ಪಷ್ಟ ಜನಾದೇಶವನ್ನು ಪಡೆದಿತ್ತು. ಹಲವು, ಅಡೆತಡೆ ವಿರೋಧಗಳ ನಡುವೆ, ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಮುಲಾಯಂ ಘೋಷಿಸಿದರು. ಮುಲಾಯಂ ಅವರ ಪುತ್ರ ವ್ಯಾಮೋಹಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿ, ನಂತರ ಶಮನವಾಗಿತ್ತು.

ಅಖಿಲೇಶ್ ಮತ್ತು ಮುಲಾಯಂ ಬಣ ಎಂದು ಸ್ಪಷ್ಟವಾಗಿ ಇಬ್ಬಾಗ
2017ರ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಗೆ ಇನ್ನೇನು ಏಳು ತಿಂಗಳು ಇದೆ ಎನ್ನುವಾಗ, ಮುಲಾಯಂ ಕುಟುಂಬದ ಆಂತರಿಕೆ ಬೇಗುದಿ ಸ್ಪೋಟಗೊಂಡಿತು. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಹೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ಅವರನ್ನು ಮುಲಾಯಂ ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದರು. ತಂದೆ ಮತ್ತು ಮಗನ ನಡುವಿನ ವಿರಸ ಇನ್ನೊಂದು ಮಜಲಿಗೆ ಹೋಗಲು ಇದು ಕಾರಣವಾಯಿತು. ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿನ ಗೊಂದಲದಿಂದಾಗಿ, ಅಖಿಲೇಶ್ ಮತ್ತು ಮುಲಾಯಂ ಬಣ ಎಂದು ಸ್ಪಷ್ಟವಾಗಿ ಇಬ್ಬಾಗವಾಯಿತು.

ನಾನು ಈ ಪಕ್ಷ ಕಟ್ಟಲು ಪಟ್ಟ ಶ್ರಮ ಅಷ್ಟಿಷ್ಟಲ್ಲ
ನಾನು ಈ ಪಕ್ಷ ಕಟ್ಟಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನಾನು ಕಷ್ಟಪಟ್ಟು ದುಡಿದ ಫಲವನ್ನು ಅವರು ತಿನ್ನಬೇಕಾ ಎಂದು ರಾಮ್ ಗೋಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್ ಇಬ್ಬರನ್ನೂ ಪಕ್ಷದಿಂದ ಕಿತ್ತು ಹಾಕಿದ ನಿರ್ಧಾರವನ್ನು ಮುಲಾಯಂ ಸಮರ್ಥಿಸಿಕೊಂಡಿದ್ದರು. ನಮ್ಮ ಪಾಲಿಗೆ ಪಕ್ಷ ತುಂಬಾ ಮುಖ್ಯವಾದುದು, ನಮ್ಮ ಪರಮೋಚ್ಛ ಉದ್ದೇಶ ಏನಿದ್ದರೂ ಪಕ್ಷವನ್ನು ಉಳಿಸಿಕೊಳ್ಳುವುದು, ಮಗನೇ ಇರಲಿ ಸಹೋದರನೇ ಇರಲಿ.. ಭಿನ್ನಮತವನ್ನು ನಾನು ಸಹಿಸುವುದಿಲ್ಲ ಎಂದು ಮುಲಾಯಂ ಎಚ್ಚರಿಕೆ ನೀಡಿದ್ದರು.

ಅಪ್ಪ-ಮಗನ ನಡುವೆ 'ಯಾದವೀ ಕಲಹ'
ಇದರ ಬೆನ್ನಲ್ಲೇ, ಅಖಿಲೇಶ್ ಯಾದವ್ , ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಕರೆದು, ತಂದೆ ಮುಲಾಯಂ ಯಾದವ್ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಿ, ಅವರನ್ನು ಪಕ್ಷದ ಮುಖ್ಯ ಪೋಷಕರನ್ನಾಗಿ ನೇಮಿಸಿದರು. ಕಾರ್ಯಕಾರಿಣಿ ಅಸಂವಿಧಾನಿಕ ಎಂದು ಮುಲಾಯಂ, ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಆದರೆ, ಮುಲಾಯಂ ಸಿಂಗ್ ನಿರ್ಧಾರ ತಪ್ಪು ಎಂದು ಚುನಾವಣಾ ಆಯೋಗ ಫರ್ಮಾನು ಹೊರಡಿಸಿತು. ಅದರಿಂದ, ಅಖಿಲೇಶ್ ಯಾದವ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿದರು, ಮುಲಾಯಂ ಪೇಚಿಗೀಡಾದರು.

ಮುಲಾಯಂ, ಶಿವಪಾಲ್ ಮತ್ತು ಅಖಿಲೇಶ್ ಒಂದಾದರು
ಇದಾದ ಸ್ವಲ್ಪದಿನಗಳ ನಂತರ ಅವರಿವರ ಮಧ್ಯಸ್ಥಿಕೆಯಿಂದ ಅಪ್ಪ ಮುಲಾಯಂ, ಚಿಕ್ಕಪ್ಪ ಶಿವಪಾಲ್ ಮತ್ತು ಮಗ ಅಖಿಲೇಶ್ ಯಾದವ್ ಒಂದಾದರು. ಆದರೆ, ಇದು ತೋರಿಕೆಯ ಒಗ್ಗಟ್ಟು ಎಂದು ಅರ್ಥ ಮಾಡಿಕೊಳ್ಳಲು ಹೆಚ್ಚು ದಿನ ಬೇಕಾಗಿರಲಿಲ್ಲ. ದಿನದಿಂದ ದಿನಕ್ಕೆ ತನ್ನ ಪ್ರಾಭಲ್ಯವನ್ನು ಗಟ್ಟಿಮಾಡಿಕೊಂಡು ಸಾಗಿದ ಅಖಿಲೇಶ್, ಪಕ್ಷಕ್ಕೆ ಸಂಬಂಧಪಟ್ಟ ಮಹತ್ವದ ನಿರ್ಧಾರಕ್ಕೂ ತಂದೆಯ ಸಲಹೆಯನ್ನು ಪಡೆಯದೇ ಸಾಗಲಾರಂಭಿಸಿದರು.

ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ ಪಕ್ಷ
ಲೋಕಸಭಾ ಉಪಚುನಾವಣೆಯ ವೇಳೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಒಂದು ಕಾಲದಲ್ಲಿ ತಮ್ಮ ವಿರೋಧಿಯಾಗಿದ್ದ ಬಹುಜನ ಸಮಾಜಪಕ್ಷದ ಜೊತೆಗೆ ಹೊಂದಾಣಿಕೆ ಮಾಡುವ ವಿಚಾರದಲ್ಲೂ ಅಖಿಲೇಶ್ ನಿರ್ಧಾರವೇ ಅಂತಿಮವಾಗಿತ್ತು. ಚಿಕ್ಕಪ್ಪ ಶಿವಪಾಲ್ ಯಾದವ್ ಸ್ಥಾಪಿಸಿದ ನೂತನ 'ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ' ಪಕ್ಷದಲ್ಲಿ ಮುಲಾಯಂ ಗುರುತಿಸಿಕೊಳ್ಳಲು ಆರಂಭಿಸಿದರೂ, ಆ ಪಕ್ಷದ ಚಕ್ರ ಮುಂದಿನ ಗೇರಿಗೆ ಹೋಗಲೇ ಇಲ್ಲ.

ನಾನು ಸತ್ತ ಬಳಿಕ ಜನ ನನ್ನನ್ನು ನೆನೆಯಬಹುದು
ತಮಗೆ ಯಾರೂ ಮರ್ಯಾದೆ ನೀಡುತ್ತಿಲ್ಲ, ನಾನು ಸತ್ತ ಬಳಿಕ ಜನ ನನ್ನನ್ನು ನೆನೆಯಬಹುದು. ಈ ದೇಶದಲ್ಲಿ ಸತ್ತ ಬಳಿಕ ಜನರು ಗೌರವ ನೀಡುತ್ತಾರೆ ಎಂದು ರಾಮ ಮನೋಹರ್ ಲೋಹಿಯಾ ಹೇಳಿದ್ದು ನೆನೆಪಾಗುತ್ತಿದೆ ಎಂದು ಮುಲಾಯಂ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು. ಉತ್ತರಪ್ರದೇಶದ ರಾಜಕೀಯದಲ್ಲಿ ರಾಜನಂತೆ ಮೆರೆದಿದ್ದ ಮತ್ತು ಕುಟುಂಬ ರಾಜಕಾರಣವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದ ಮುಲಾಯಂ ಸಿಂಗ್ ಯಾದವ್ ಅವರು ಈಗ, ಕುಟುಂಬದಿಂದಲೇ ಮೂಲೆಗುಂಪಾಗಿರುವುದು ಪ್ರಸಕ್ತ ರಾಜಕೀಯಕ್ಕೆ ಹಿಡಿದ ಕನ್ನಡಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications