2015ರಲ್ಲಿ ನಮ್ಮಗಲಿದ ಗಣ್ಯರು, ರಾಜಕಾರಣಿಗಳು
ಬೆಂಗಳೂರು, ಡಿ. 28: ವರ್ಷಾಂತ್ಯ ಪಾರ್ಟಿ, ರಜೆ ಮಜಾ, ಹೊಸ ವರ್ಷದ ರೆಸಲ್ಯೂಷನ್, ಟೂರ್ ಪ್ಲ್ಯಾನಿಂಗ್ ನಲ್ಲಿ ಮುಳುಗಿರುವ ಹೊತ್ತಲ್ಲೇ ಈ ವರ್ಷ ಕೆಲವು ಗಣ್ಯರು, ರಾಜಕಾರಣಿಗಳು, ಸಿನಿಮಾ ಮಂದಿಗಳನ್ನು ಭಾರತ ಕಳೆದುಕೊಂಡಿದೆ. ಈ ಪೈಕಿ ಮಹಾನ್ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ನಿತ್ಯ ಸ್ಮರಣೀಯರು.
ವರ್ಷಾಂತ್ಯ ಕ್ಯಾಲೆಂಡರ್ ಪುಟವನ್ನು ಹಿಂದಕ್ಕೆ ತಿರುವಿದ್ದಂತೆಲ್ಲ ಅಗಲಿದ ಜೀವಗಳ ನೆನಪು ಕಾಡುತ್ತದೆ. ನಟಿ ಸಾಧನಾ ಶಿವದಾಸಾನಿ, ಸಯೀದ್ ಜಫ್ರಿ, ಮೋಹನ್ ಭಂಡಾರಿ, ಡಿ ರಾಮನಾಯ್ಡು, ನಿರ್ದೇಶಕ ಸಿದ್ದಲಿಂಗಯ್ಯ, ನಟಿ ಆರತಿ ಅಗರವಾಲ್, ಸಂಗೀತಗಾರ ಎಂಎಸ್ ವಿಶ್ವನಾಥನ್, ನಟಿ ಮನೋರಮಾ, ಕರ್ನಾಟಕ ಮೂಲದ ಮುಖ್ಯ ನ್ಯಾಯಮೂರ್ತಿ ವಿಎಸ್ ಮಳಿಮಠ್, ಮುಂಬೈನ ಕಲಾವಿದೆ ಹೇಮಾ ಉಪಾಧ್ಯಾಯ್ ದುರಂತ ಸಾವು ಹೀಗೆ ಪಟ್ಟಿ ಬೆಳೆಯುತ್ತದೆ.[ಚಿತ್ರರಂಗದಿಂದ ಕಣ್ಮರೆಯಾದ ಸೆಲೆಬ್ರಿಟಿಗಳು]
ಸುಭಾಷ್ ಘ್ಹಿಸಿಂಗ್, ಗೋರ್ಖಾ ಚಳವಳಿ ನಾಯಕ
ಗೋರ್ಖಾ ರಾಷ್ಟ್ರೀಯ ಮುಕ್ತಿ ಮೋರ್ಚಾ ಸ್ಥಾಪಕ ಸುಭಾಶ್ ಘ್ಹಿಸಿಂಗ್ ಅವರು ದೆಹಲಿಯಲ್ಲಿ ಜನವರಿ 30ರಂದು ನಿಧನರಾದರು. ಗೋರ್ಖಾ ರೈಫಲ್ಸ್ ಯೋಧ, ಶಿಕ್ಷಕರಾಗಿದ್ದ ಇವರು 1986 ರಿಂದ 1988 ಅವಧಿಯಲ್ಲಿ ಅನೇಕ ಸಾವು ನೋವಿಗೆ ಕಾರಣರಾದರು. ಪಶ್ಚಿಮ ಬಂಗಾಲದ ರಾಜಕೀಯ ಇತಿಹಾಸದಲ್ಲಿ ಪ್ರಮುಖವಾದ ನಾಯಕರಾಗಿದ್ದ ಇವರು ಪ್ರತ್ಯೇಕ ಗೋರ್ಖಾಲ್ಯಾಂಡ್ ಗಾಗಿ ಆಗ್ರಹಿಸುತ್ತಾ ಬಂದಿದ್ದರು.
ಡಾ. ಎಪಿಜೆ ಅಬ್ದುಲ್ ಕಲಾಂ
ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಜನಸಾಮಾನ್ಯರ ರಾಷ್ಟ್ರಪತಿಯಾಗಿ ಜನಪ್ರಿಯಗೊಂಡವರು. ಜುಲೈ 27ರಂದು ಶಿಲ್ಲಾಂಗ್ ನ ಐಐಎಂನಲ್ಲಿ ಉಪನ್ಯಾಸ ನೀಡಲು ತೆರಳಿದ್ದಾಗ ಅಸ್ವಸ್ಥಗೊಂಡು ಅಸುನೀಗಿದರು. ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಕಲಾಂ ಅವರು ದೇಶಕಂಡ ಅಪ್ರತಿಮ ವಿಜ್ಞಾನಿ, ಶಿಕ್ಷಕ. ಕ್ಷಿಪಣಿ ಜನಕ ಎನಿಸಿಕೊಂಡಿದ್ದ ಕಲಾಂ ಅವರು ದೇಶದ 11ನೇ ರಾಷ್ಟ್ರಪತಿಯಾಗಿ 2002ರಿಂದ 2007ರ ತನಕ ಕಾರ್ಯನಿರ್ವಹಿಸಿದ್ದರು.
ಭಾರತದ ಪ್ರಥಮ ಮಹಿಳೆ ಸುರ್ವಾ ಮುಖರ್ಜಿ
ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಪ್ರಥಮ ಮಹಿಳೆ ಸುರ್ವಾ ಮುಖರ್ಜಿ ಅವರು ಆಗಸ್ಟ್ 18ರಂದು ದೆಹಲಿಯಲ್ಲಿ ನಿಧನರಾದರು.
ಶುಭ್ರಾ ಅವರು ರಾಷ್ಟ್ರಪತಿ ಭವನಕ್ಕೆ ಮೊದಲ ಬಾರಿಗೆ ತೆರಳುವ ಸಂದರ್ಭದಲ್ಲಿ ಜೋಪಾನ ಮಾಡಿದ್ದು ಅವರ ತಾಂಪುರ-ಹಾರ್ಮೋನಿಯಂ ಪೆಟ್ಟಿಗೆಯನ್ನು ಮಾತ್ರ. ಪ್ರತಿ ನಿತ್ಯ ಪ್ರಣಬ್ ಮುಖರ್ಜಿ ಅವರು ಸ್ನಾನವಾದ ಮೇಲೆ ಪತ್ನಿಯ ಬಳಿ ತೆರಳಿ ಆಕೆಯ ಹಣೆಯನ್ನು ಮುಟ್ಟಿ ಕೆಲ ಮಂತ್ರಪಠಿಸುತ್ತಾರೆ. 55ಕ್ಕೂ ಅಧಿಕ ವರ್ಷಗಳಿಂದ ಪ್ರತಿನಿತ್ಯ ಈ ಕ್ರಮವನ್ನು ಅನುಸರಿಸಿ ಪ್ರಣಬ್ ಅವರು ಪ್ರಾರ್ಥಿಸುತ್ತಿದ್ದರು.
ನಟಿ ಮನೋರಮಾ ನಿಧನ
ಗೋಪಿಶಾಂತಾ ಹೆಸರಿನ ಕಲಾವಿದೆ ಮನೋರಮಾ ಅವರು 1,500 ಚಿತ್ರಗಳು 5 ಸಾವಿರಕ್ಕೂ ಅಧಿಕ ರಂಗ ಪ್ರದರ್ಶನಗಳನ್ನು ನೀಡಿ ಗಿನ್ನಿಸ್ ದಾಖಲೆ ಬರೆದ ಬಹುಭಾಷಾ ನಟಿ. ಕನ್ನಡದಲ್ಲಿ ದೇವರಗುಡಿ, ಪ್ರೇಮಾನುಬಂಧ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅಕ್ಟೋಬರ್ 10, 2015ರಂದು ಕೊನೆಯುಸಿರೆಳೆದರು.
ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್(87) ಅವರು ವಿಧಿವಶರಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮಂಗಳವಾರ (ಜುಲೈ 14)ರಂದು ಮೃತಪಟ್ಟರು.
ಮುಖ್ಯ ನ್ಯಾಯಮೂರ್ತಿ ವಿ.ಎಸ್ ಮಳಿಮಠ
ಕರ್ನಾಟಕ ಮತ್ತು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ತವ್ಯ ಸಲ್ಲಿಸಿದ್ದ ವಿ.ಎಸ್.ಮಳಿಮಠ (86) ಅವರು ಬುಧವಾರ (ಡಿಸೆಂಬರ್ 23) ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕರ್ನಾಟಕದಲ್ಲಿ ಕಾನೂನು ಪದವಿ ಪಡೆದಿದ್ದ ಮಳಿಮಠ ಅವರು 1952ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ 'ಅಂತರರಾಷ್ಟ್ರೀಯ ಸಾರ್ವಜನಿಕ ಕಾನೂನು' ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದರು. 1952ರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ಆರಂಭಿಸಿ, ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದರು. ಸಿಎಟಿ ಅಧ್ಯಕ್ಷ, ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು.
ತೆಲುಗು ನಟಿ ಆರತಿ ಅಗರ್ವಾಲ್
ದಕ್ಷಿಣ ಭಾರತದ ಖ್ಯಾತ ನಟಿ ಆರತಿ ಅಗರ್ವಾಲ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅಮೆರಿಕದಲ್ಲಿ ಜೂನ್ 6ರ ಶನಿವಾರ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ನಿರ್ದೇಶಕ ಸಿದ್ದಲಿಂಗಯ್ಯ
ಎಚ್ ಎನ್ 1 ಕಾಯಿಲೆಯಿಂದ ಬಳಲುತ್ತಿದ್ದ ಬಂಗಾರದ ಮನುಷ್ಯ ಖ್ಯಾತಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರು ಮಾರ್ಚ್ 12ರಂದು ನಿಧನರಾದರು. ಇವರ ನಿರ್ದೇಶನದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಹೊಸ ದಾರಿ ಹಾಕಿಕೊಟ್ಟಿತು. ಇವರ ಪುತ್ರ ನಟ ಮುರಳಿ (ವಿಧಿವಶರಾಗಿದ್ದಾರೆ), ಮೊಮ್ಮಗ ಅರ್ಥವ ಕೂಡಾ ಸಿನಿರಂಗದಲ್ಲಿದ್ದಾರೆ.
ಡಿ ರಾಮನಾಯ್ಡು
ಗಿನ್ನಿಸ್ ದಾಖಲೆ ನಿರ್ಮಿಸಿದ ಚಲನಚಿತ್ರ ನಿರ್ಮಾಪಕ ದಗ್ಗುಬಾತಿ ರಾಮನಾಯ್ಡು ಅವರು ಫೆಬ್ರವರಿ 18ರಂದು ಹೈದರಾಬಾದಿನಲ್ಲಿ ನಿಧನರಾದರು
ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ್
ಕ್ಯಾನ್ಸರ್ ಪೀಡಿತರಾಗಿದ್ದ ಗಾಯಕ, ಸಂಗೀತಗಾರ ಆದೇಶ್ ಶ್ರೀವಾಸ್ತವ್ (49) ಸೆಪ್ಟೆಂಬರ್ 05ರಂದು ಕೋಕಿಲಾಬೇನ್ ಧಿರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.
ಸಂಗೀತಗಾರ ರವೀಂದ್ರ ಜೈನ್
ಬಾಲಿವುಡ್ ಸಂಗೀತಗಾರ ರವೀಂದ್ರ ಜೈನ್ (71) ಅವರು ಅಕ್ಟೋಬರ್ 9ರಂದು ಬಹುಅಂಗಾಂಗ ವೈಫಲ್ಯ ಉಂಟಾಗಿ ಮುಂಬೈನಲ್ಲಿ ನಿಧನರಾದರು. ಅಂಧತ್ವದಿಂದ ಹೊರ ಬಂದು ಉತ್ತಮ ಸಂಗೀತದ ಮೂಲಕ ಜನಮನ್ನಣೆ ಗಳಿಸಿದರು. ರಮಾನಂದ ಸಾಗರ್ ಅವರ ರಾಮಾಯಣ ಟಿವಿ ಧಾರಾವಾಹಿಗೆ ಸಂಗೀತ ನೀಡಿ ಮನೆ ಮಾತಾದರು.
ಕ್ರಿಕೆಟ್ ಆಡಳಿತಗಾರ ಜಗ್ಮೋಹನ್ ದಾಲ್ಮಿಯಾ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿದ್ದ ಜಗ್ಮೋಹನ್ ದಾಲ್ಮಿಯಾ ಅವರು ಸೆಪ್ಟೆಂಬರ್ 21ರಂದು ತೀವ್ರವಾದ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದರು.
75 ವರ್ಷ ವಯಸ್ಸಾಗಿದ್ದ ಅವರನ್ನು ಕೋಲ್ಕತ್ತಾದ ಬಿಎಂ ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ 2001ರಿಂದ 2005 ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದರು. ಮಾರ್ಚ್ 2014ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಅಧ್ಯಕ್ಷರಾದ ಮೊದಲ ಭಾರತೀಯ ಎನಿಸಿದರು.
ಖ್ಯಾತ ವ್ಯಂಗಚಿತ್ರಗಾರ ಲಕ್ಷ್ಮಣ್
ಮೈಸೂರು ಮೂಲದ ಖ್ಯಾತ ವ್ಯಂಗಚಿತ್ರಗಾರ ಲಕ್ಷ್ಮಣ್ ಅವರು ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಜನವರಿ 26, 2015ರಂದು ನಿಧನರಾದರು. ಕಾದಂಬರಿಗಾರ ಆರ್ ಕೆ ನಾರಾಯಣ್ ಅವರ ಸೋದರರಾದ ಲಕ್ಷ್ಮಣ್ ಅವರ 'ಕಾಮನ್ ಮ್ಯಾನ್' ಕಾರ್ಟೂನ್ ಅತ್ಯಂತ ಜನಪ್ರಿಯತೆ ಪಡೆದುಕೊಂಡಿತ್ತು.[ಲಕ್ಷ್ಮಣ್ ನೆನಪಿನಲ್ಲಿ ಟ್ವೀಟ್ಸ್]
ನಟ ಸಯೀದ್ ಜಫ್ರಿ
ಹಿಂದಿ ಚಿತ್ರರಂಗದ ಹಿರಿಯ ನಟ ಸಯೀದ್ ಜಫ್ರಿ ಅವರು ನವೆಂಬರ್ 16ರಂದು ನಿಧನರಾದರು. ಇಂಡೋ ಬ್ರಿಟಿಷ್ ನಟ ಸಯೀದ್ ಅವರು ದಿಲ್ ಕಿಶನ್ ಕನ್ಹಯ್ಯ, ದೀವಾನಾ ಮಸ್ತಾನಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್
ವಿಶ್ವಹಿಂದೂಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರು ನವೆಂಬರ್ 17ರಂದು ನಿಧನರಾದರು. ಬಾಬ್ರಿ ಮಸೀದಿ ಧ್ವಂಸ ಆರೋಪ ಹೊತ್ತಿದ್ದ 89ವರ್ಷ ವಯಸ್ಸಿನ ಸಿಂಘಾಲ್ ಅವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಕನಸು ಹೊತ್ತಿದ್ದವರು.