ಭಾರತದ ಪ್ರತೀಕಾರದ ಭೀತಿಯಲ್ಲಿ ಪಾಕ್: F16 ಫೈಟರ್ ಗಳ ಭಾರೀ ಗಸ್ತು
ನವದೆಹಲಿ, ಮೇ 11: ಹಂದ್ವಾರದಲ್ಲಿ ತನ್ನ ಯೋಧರ ಮೇಲಿನ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎನ್ನುವ ಭೀತಿಯಲ್ಲಿರುವ ಪಾಕಿಸ್ತಾನ, ಫೈಟರ್ ವಿಮಾನಗಳ ಗಸ್ತನ್ನು ತೀವ್ರಗೊಳಿಸಿದೆ.
ಅಮೆರಿಕಾದಿಂದ ಪೂರೈಕೆಯಾಗಿರುವ ಎಫ್ 16 ಮತ್ತು ಜೆಎಫ್ 17 ಯುದ್ದ ವಿಮಾನಗಳು ತಾಲೀಮಿನಲ್ಲಿ ತೊಡಗಿವೆ. ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ದಾಳಿಗೆ ಕರ್ನಲ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು.
ಪಾಕಿಸ್ತಾನ ಈಗಾಗಲೇ ವೈಮಾನಿಕ ತಾಲೀಮನ್ನು ಹೆಚ್ಚಿಸಿದ್ದು, ಈ ಬಗ್ಗೆ ಭಾರತ ಮಾಹಿತಿಯನ್ನು ಹೊಂದಿದೆ ಎಂದು, ಸರಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

"ಹಂದ್ವಾರದ ಘಟನೆಯ ನಂತರ, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಭಾರತ ದಾಳಿ ನಡೆಸಬಹುದು ಎನ್ನುವ ನಿಲುವನ್ನು ಪಾಕಿಸ್ತಾನ ಹೊಂದಿದೆ. ಗಡಿಯಲ್ಲಿ ಪಾಕ್ ವೈಮಾನಿಕ ಚಟುವಟಿಕೆಗಳು ಹೆಚ್ಚಾಗಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ"ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಿಂದ ಎದುರಾಗುವ ದಾಳಿಯನ್ನು ಅತ್ಯಂತ ಸಮರ್ಥವಾಗಿ ಹಿಮ್ಮೆಟ್ಟಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿರುವ ಪಾಕ್, ವಾಯುಪಡೆಗೆ ಗಸ್ತು ಹೆಚ್ಚಿಸಲು ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಭಾರತ ಗಡಿ ನುಸುಳುವಿಕೆಯ ವಿಚಾರದಲ್ಲಿ ಸುಳ್ಳುಸುದ್ದಿಯನ್ನು ಹಬ್ಬಿಸುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.












Click it and Unblock the Notifications