ಗ್ರಾಮೀಣ ಭಾಗದ ಜನರ ಉದ್ಯೋಗ ಭರವಸೆ ಕಳೆದುಹೋಗುವ ಭಯ: ಅಗ್ನಿಪಥ್ ಪ್ರತಿಭಟನೆ ಬಗ್ಗೆ ಜೆಡಿಯು ಅನಿಸಿಕೆ

ನವದೆಹಲಿ, ಜೂನ್ 19: ಕೇಂದ್ರ ಸರಕಾರ ಸೇನಾ ನೇಮಕಾತಿಗೆಂದು ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧ ಭುಗಿಲೆದ್ದಿದ್ದ ಆಕ್ರೋಶ ನಾಲ್ಕೈದು ದಿನಗಳಾದರೂ ಪ್ರತಿಭಟನೆ ರೂಪದಲ್ಲಿ ಮುಂದುವರಿಯುತ್ತಿದೆ. ಯೋಜನೆ ಬಗ್ಗೆ ಪರ ವಿರೋಧದ ಮಿಶ್ರ ಪ್ರತಿಕ್ರಿಯೆಗಳಿವೆ. ಕೆಲ ವಿಪಕ್ಷ ನಾಯಕರು ಈ ಯೋಜನೆಯನ್ನು ಪ್ರಶಂಸಿಸಿದರೆ, ಎನ್‌ಡಿಎಗೆ ಸೇರಿದ ಕೆಲ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರಕಾರದ ಕೆಲ ಕ್ರಮಗಳನ್ನು ಮುಲಾಜಿಲ್ಲದೇ ವಿರೋಧಿಸುವ ಜೆಡಿಯು ಈಗ ಅಗ್ನಿಪಥ್ ವಿರುದ್ಧ ನಿಲುವು ತಳೆದಿದೆ.

17.5 ವರ್ಷದಿಂದ 21 ವರ್ಷದ ವಯೋಮಾನದ ನವಯುವಕರನ್ನು ಅಗ್ನಿವೀರರಾಗಿ ಮೂರು ಸೇನೆಗಳಿಗೆ ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರ ಘೋಷಣೆ ಮಾಡಿದಾಗಿನಿಂದಲೂ ಜೆಡಿಯು ತನ್ನ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಅಗ್ನಿವೀರರಾಗಿ ನೇಮಕರಾದವರಲ್ಲಿ ಶೇ. 24 ಮಂದಿಗೆ ಮಾತ್ರ ಸೇನೆಯಲ್ಲಿ ಮುಂದುವರಿಯಲು ಅವಕಾಶ ಇದ್ದು, ಉಳಿದವರು ನಾಲ್ಕು ವರ್ಷಗಳ ಬಳಿಕ ಯಾವುದೇ ಭವಿಷ್ಯದ ಬೆಂಬಲದ ಆಧಾರ ಇಲ್ಲದೇ ಕೆಲಸ ಕಳೆದುಕೊಳ್ಳುತ್ತಾರೆ ಎಂಬುದು ಈ ಯೋಜನೆ ವಿರುದ್ಧ ಎದ್ದಿರುವ ಬಲವಾದ ಆಕ್ಷೇಪಗಳಲ್ಲಿ ಒಂದು.

ಜೆಡಿಯು ಪಕ್ಷ ಕೂಡ ಇಂಥದ್ದೇ ಆಕ್ಷೇಪಗಳ ಬಗ್ಗೆ ಧ್ವನಿ ಎತ್ತಿದೆ. ಇಡೀ ಯೋಜನೆಯನ್ನೇ ಪಕ್ಷ ವಿರೋಧಿಸುತ್ತಾ? ಯೋಜನೆಯನ್ನೇ ಸಂಪೂರ್ಣವಾಗಿ ಕೈಬಿಡಬೇಕೆಂದು ಒತ್ತಾಯಿಸುತ್ತಿದೆಯಾ? ಸಂಯುಕ್ತ ಜನತಾ ದಳದ ನಿಲುವು ಏನೆಂದು ಆ ಪಕ್ಷದ ರಾಷ್ಟ್ರೀಯ ವಕ್ತಾರ ಕೆ ಸಿ ತ್ಯಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಯೋಜನೆ ಕೈಬಿಡಬೇಕೆ?

ಯೋಜನೆ ಕೈಬಿಡಬೇಕೆ?

"ಪ್ರತಿಭಟಿಸುತ್ತಿರುವ ಯುವಕರ ಜೊತೆ ಸಂವಹನ ನಡೆಸುವ ತುರ್ತು ಅಗತ್ಯ ಇದೆ. ಯುವಕರ ಪ್ರತಿನಿಧಿಗಳು, ನಿವೃತ್ತ ಸೇನಾಧಿಕಾರಿಗಳು ಮತ್ತು ಸರಕಾರದ ಪ್ರತಿನಿಧಿಗಳು ಒಟ್ಟಿಗೆ ಕೂತು ಅಗ್ನಿಪಥ್ ಯೋಜನೆಯನ್ನು ವಿಮರ್ಶಿಸಬೇಕು. ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ನಾವು ಕೇಳುತ್ತಿಲ್ಲ. ಯುವಕರ ಆಕ್ರೋಶ ಇಷ್ಟು ದೊಡ್ಡ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮರುಪರಿಶೀಲಿಸಬೇಕೆಂಬುದು ನಮ್ಮ ಮನವಿ" ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ಹೇಳಿದ್ದಾರೆ.

 ಗ್ರಾಮೀಣ ಯುವಕರಿಗೆ ಅವಕಾಶ ಕೈತಪ್ಪುತ್ತಾ?

ಗ್ರಾಮೀಣ ಯುವಕರಿಗೆ ಅವಕಾಶ ಕೈತಪ್ಪುತ್ತಾ?

"ಉತ್ತರಪ್ರದೇಶ, ಬಿಹಾರ, ಉತ್ತರಾಖಂಡ, ಹಿಮಾಚಲಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಸೇನಾ ಪಡೆ ಉದ್ಯೋಗಗಳು ದೊಡ್ಡ ಆಕರ್ಷಣೆಯಾಗಿವೆ. ಈ ಉದ್ಯೋಗಗಳು ಗ್ರಾಮೀಣ ಆರ್ಥಿಕತೆಗೆ ಬಹಳ ಮುಖ್ಯ ಪಾತ್ರ ವಹಿಸಿವೆ. ನಮ್ಮ ಯೋಧರಿಗೆ ಸಂಬಳ ಕಡಿಮೆಯಾದರೂ ಅದರಲ್ಲೇ ಉಳಿತಾಯ ಮಾಡಿ ಹೆಚ್ಚಿನ ಹಣವನ್ನು ಅವರು ಮನೆಗೆ ಕಳುಹಿಸುತ್ತಾರೆ.

"ಹೀಗಾಗಿ, ರಕ್ಷಣಾ ಪಡೆಗಳಲ್ಲಿನ ಉದ್ಯೋಗವು ಒಂದು ರೀತಿಯಲ್ಲಿ ಅತಿದೊಡ್ಡ ಬಡತನ ನಿವಾರಣೆ ಯೋಜನೆಯಾಗಿದೆ. ಜೊತೆಗೆ ಈ ಯುವಕರಿಗೆ ತಮ್ಮ ದೇಶ ಸೇವೆ ಮಾಡುವ ಅವಕಾಶವೂ ಸಿಗುತ್ತದೆ. ನಾನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರನ್ನಿಂಗ್ ಪ್ರಾಕ್ಟಿಸ್ ಮಾಡುವ ಯುವಕರನ್ನು ಆಗಾಗ ಕಾಣುತ್ತಿರುತ್ತೇನೆ. ಅಗ್ನಿಪಥ್ ಯೋಜನೆಯ ಅಲ್ಪಾವಧಿ ಉದ್ಯೋಗದ ಅಂಶವು ಉದ್ಯೋಗಾಕಾಂಕ್ಷಿಗಳ ಭಾವನೆಗಳಿಗೆ ಘಾಸಿ ಮಾಡಿರುವುದಂತೂ ಹೌದು. ಈ ಬಗ್ಗೆ ಸಂವೇದನಾತ್ಮಕವಾಗಿ ವಿಚಾರ ಗ್ರಹಿಸುವ ಅವಶ್ಯಕತೆ ಇದೆ" ಎಂದು ಜೆಡಿಯು ರಾಷ್ಟ್ರೀಯ ವಕ್ತಾರರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಂದರ್ಶನದಲ್ಲಿ ಸಲಹೆ ನೀಡಿದ್ದಾರೆ.

 ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರದ ಕ್ರಮ ಏನು?

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರದ ಕ್ರಮ ಏನು?

"ಉದ್ಯೋಗಸೃಷ್ಟಿಗೆ ಎನ್‌ಡಿಎ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿರುವುದು ಹೌದು. ಆದರೆ, ಗಾಂಧೀಜಿ ಪರಿಕಲ್ಪನೆಯ ಗುಡಿ ಕೈಗಾರಿಕೆಗಳತ್ತ ನಾವು ಗಮನ ಕೊಡಬೇಕೆನಿಸುತ್ತದೆ. ಗುಡಿ ಕೈಗಾರಿಕೆಗಳ ಜೊತೆ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳೂ ಇರಲಿ.

"ಗ್ರಾಮಗಳು ಸ್ವಾವಲಂಬನೆಯಿಂದ ಇದ್ದಿದ್ದರೆ ಅಲ್ಲಿನ ಜನರು ಬೇರೆಡೆಗೆ ವಲಸೆ ಹೋಗುವ ಪ್ರಮೇಯ ಬರುತ್ತಿರಲಿಲ್ಲ. ಕೃಷಿ ಸಂಬಂಧಿತ ಕೈಗಾರಿಕೆಗಳಿಗೆ ಬಿಹಾರದಲ್ಲಿ ವಿಪುಲ ಸಾಧ್ಯತೆಗಳಿವೆ. ಹಾಗೆಯೇ, ಬೇರೆ ರಾಜ್ಯಗಳೂ ಅಲ್ಲಿನ ಸಾಂಪ್ರದಾಯಿಕ ಕಸುಬುಗಳ ಉತ್ಪನ್ನಗಳ ಸೃಷ್ಟಿಗೆ ಗಮನ ಕೊಡಬಹುದು. ಗ್ರಾಮಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಉದ್ಯೋಗ ಸೃಷ್ಟಿಸಲು ನಾವು ವಿಫಲರಾಗಿರುವುದು ಇವತ್ತು ಯುವಕರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ," ಎಂದು ಕೆಸಿ ತ್ಯಾಗಿ ಅಭಿಪ್ರಾಯಪಟ್ಟಿದ್ದಾರೆ.

 ಅಗ್ನಿಪಥ್‌ನಿಂದ ಎನ್‌ಡಿಎಗೆ ಹೊಡೆತ ಬೀಳುತ್ತಾ?

ಅಗ್ನಿಪಥ್‌ನಿಂದ ಎನ್‌ಡಿಎಗೆ ಹೊಡೆತ ಬೀಳುತ್ತಾ?

"ಅಗ್ನಿಪಥ್ ಯೋಜನೆಯಿಂದಾಗಿ ಎನ್‌ಡಿಎಗೆ ಯುವಕರ ಬೆಂಬಲ ಕೈತಪ್ಪಿಹೋಗುತ್ತೆ ಎಂದು ನನಗೆ ಅನಿಸುವುದಿಲ್ಲ. ಯುವಕರ ಆಕ್ರೋಶ ತಣಿಸಲು ಪ್ರಧಾನಿ ನರೇಂದ್ರ ಮೋದಿ ಗಂಭೀರ ಹೆಜ್ಜೆಗಳನ್ನು ಇಟ್ಟಿದ್ದಾರೆ. ಭೂಸ್ವಾಧೀನ ಮಸೂದೆ ಹಿಂಪಡೆದದ್ದು, ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದದ್ದು ನಮ್ಮ ಕಣ್ಮುಂದೆ ಇದೆ. ಈಗಲೂ ಅವರು ಯುವಕರ ಆತಂಕಗಳನ್ನು ಗಮನಿಸಿ ಒಂದು ಪರಿಹಾರ ಹುಡುಕುತ್ತಾರೆ ಎಂಬ ಆಶಯ ನನ್ನದು" ಎಂದು ಜೆಡಿಯು ವಕ್ತಾರರು ಹೇಳಿದ್ದಾರೆ.

 ಬಿಜೆಪಿ ಜೊತೆ ಭಿನ್ನಾಭಿಪ್ರಾಯವೇ ಹೆಚ್ಚು?

ಬಿಜೆಪಿ ಜೊತೆ ಭಿನ್ನಾಭಿಪ್ರಾಯವೇ ಹೆಚ್ಚು?

ಎನ್‌ಡಿಎ ಸರಕಾರದ ಭಾಗವಾಗಿರುವ ಜೆಡಿಯು ಈ ಹಿಂದೆ ಹಲವು ಬಾರಿ ಸರಕಾರದ ಕ್ರಮಗಳನ್ನು ವಿರೋಧಿಸಿದ್ದಿದೆ. ಬಿಜೆಪಿ ಜೊತೆ ಜೆಡಿಯು ಸಹಮತ ಹೊಂದಿರುವುದಕ್ಕಿಂತ ಭಿನ್ನಾಭಿಪ್ರಾಯವೇ ಹೆಚ್ಚು ಹೊಂದಿದೆಯಾ ಎಂಬ ಪ್ರಶ್ನೆಗೆ ಜೆಡಿಯು ರಾಷ್ಟ್ರೀಯ ವಕ್ತಾರ ಕೆ.ಸಿ. ತ್ಯಾಗಿ ಹೇಳಿದ್ದು ಇದು:

"ಬಿಜೆಪಿ ಜೊತೆ ನಮಗಿರುವುದು ಭಿನ್ನಾಭಿಪ್ರಾಯಗಳಲ್ಲ. ಪ್ರಮುಖ ನೀತಿ ವಿಚಾರಗಳಲ್ಲಿ ನಮ್ಮ ದೃಷ್ಟಿಕೋನದ ವಿಚಾರಗಳನ್ನು ಮುಂದಿಡುತ್ತಿದ್ದೇವೆ ಅಷ್ಟೇ. ವಾಜಪೇಯಿ ಆಡಳಿತದ ವೇಳೆಯಲ್ಲೂ ನಮಗೆ ಅಭಿಪ್ರಾಯಭೇದ ಇತ್ತು. ಸಮಾನ ನಾಗರಿಕ ಸಂಹಿತೆಯಂಥ ವಿವಾದಾತ್ಮಕ ವಿಚಾರಗಳಿಂದ ಬಿಜೆಪಿ ಹಿಂದಕ್ಕೆ ಸರಿಯುವಂತೆ ಮಾಡಿದೆವು. ಎನ್‌ಆರ್‌ಸಿ ವಿಚಾರದಲ್ಲಿ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯವಿದೆ. ಜನಸಂಖ್ಯಾ ನಿಯಂತ್ರಣದಲ್ಲೂ ನಮ್ಮದು ಬೇರೆ ನಿಲುವು. ಜನಸಂಖ್ಯೆ ಏರಿಕೆ ದರ ಕುಸಿಯುತ್ತಿದೆ ಎಂದು ಕೇಂದ್ರ ಸಚಿವರು ಸಂಸತ್‌ನಲ್ಲಿ ಹೇಳುತ್ತಾರೆ. ಹಾಗಿದ್ದಾಗ, ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಬಿಹಾರದ ಬಿಜೆಪಿ ಯಾಕೆ ಒತ್ತಾಯಿಸುತ್ತದೆ? ಯಾವ ಜನಸಂಖ್ಯಾ ನಿಯಂತ್ರಣ ಕಾನೂನಿನ ಅಗತ್ಯ ಇಲ್ಲ ಎಂದು ಸಿಎಂ ನಿತೀಶ್ ಕುಮಾರ್ ತಳೆದಿರುವ ನಿಲುವು ಸರಿಯಾಗಿದಯೇ ಇದೆ," ಎಂದಿದ್ದಾರೆ.

ಮಾಹಿತಿ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+