ವಿಜಯೋತ್ಸವಕ್ಕೆ ಕರೆ ನೀಡಿದ್ದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಮುಖಭಂಗ
ಮತಗಟ್ಟೆ ಸಮೀಕ್ಷೆ ಆಧರಿಸಿ ವಿಜಯೋತ್ಸವಕ್ಕೆ ಕರೆನೀಡಿದ್ದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಫಲಿತಾಂಶದಿಂದ ಮುಖಭಂಗ.
ನವದೆಹಲಿ, ಮಾ 11: ಮತಗಟ್ಟೆ ಸಮೀಕ್ಷೆ ಆಧರಿಸಿ ವಿಜಯೋತ್ಸವಕ್ಕೆ ಕರೆನೀಡಿದ್ದ ಆಮ್ ಆದ್ಮಿ ಪಕ್ಷಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಭಾರೀ ಮುಖಭಂಗಕ್ಕೆ ಒಳಗಾಗುವಂತೆ ಮಾಡಿದೆ.
ಫಲಿತಾಂಶ ಪ್ರಕಟವಾಗುವ ಮಾರ್ಚ್ 11ರಂದು ಬೆಳಿಗ್ಗೆ 12 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಎಪಿ ಕಚೇರಿಯಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು ಶಿವಾಜಿನಗರದಲ್ಲಿ ಅಂತ್ಯವಾಗಲಿದೆ.
ರ್ಯಾಲಿಗೆ ಬರುವವರು ಹೆಲ್ಮೆಟ್ ಮತ್ತು ಡ್ರೈವಿಂಗ್ ಲೈಸನ್ಸ್ ಕಡ್ಡಾಯವಾಗಿ ತರಬೇಕು ಎಂದು ಎಎಪಿಯು ಮತಗಟ್ಟೆ ಸಮೀಕ್ಷೆ ಆಧರಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.

ಮತಗಟ್ಟೆ ಸಮೀಕ್ಷೆಯಲ್ಲಿ ಟುಡೇಸ್ ಚಾಣಕ್ಯ, ಸಿವೋಟರ್, ನ್ಯೂಸ್ 18, ಇಂಡಿಯಾ ಟುಡೇ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ 50 ರಿಂದ 55 ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿತ್ತು.
ಆದರೆ, ಇತ್ತೀಚಿನ ವರದಿಯ ಪ್ರಕಾರ ಪಂಜಾಬ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಆಮ್ ಆದ್ಮಿ ಪಕ್ಷ 23ಸ್ಥಾನದಲ್ಲಿ (ಗೆಲುವು/ಮುನ್ನಡೆ) ಮಾತ್ರ ಮುಂದಿದೆ. ಆ ಮೂಲಕ ಪಂಜಾಬ್ ನಲ್ಲಿ ಅಧಿಕಾರಕ್ಕೇರುವ ಆಮ್ ಆದ್ಮಿ ಪಕ್ಷದ ಕನಸು ನುಚ್ಚು ನೂರಾಗಿದೆ.
ಇನ್ನು ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಎರಡರಿಂದ ಏಳು ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎಂದು ಸಿವೋಟರ್, ಎಬಿಪಿ ನ್ಯೂಸ್ ಮತ್ತು ನ್ಯೂಸ್ ಎಕ್ಸ್ ಪ್ರಾಜೆಕ್ಟ್ ಮಾಡಿದ್ದವು.
ಆದರೆ, ಗೋವಾದಲ್ಲಿ ಕಾಂಗ್ರೆಸ್, ಬಿಜೆಪಿ, ಎಂಜಿಪಿ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ತಾಜಾ ಮಾಹಿತಿಯ ಪ್ರಕಾರ ಕಾಂಗ್ರೆಸ್ 17, ಬಿಜೆಪಿ 15, ಎಂಜಿಪಿ ಮತ್ತು ಇತರರು 8 ಕ್ಷೇತ್ರದಲ್ಲಿ ಮುಂದಿದ್ದರೆ, ಆಮ್ ಆದ್ಮಿ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಪಂಜಾಬ್ ಮತ್ತು ಗೋವಾದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಲು ಒಪ್ಪಿಕೊಂಡಿದ್ದಾರೆ.












Click it and Unblock the Notifications