ಶರದ್ ಯಾದವ್ ಕೈಯಿಂದ ಜೆಡಿಯು 'ಬಾಣ' ಕಸಿದ ನಿತೀಶ್ ಕುಮಾರ್
ನವದೆಹಲಿ, ನವೆಂಬರ್ 17: ಬಂಡಾಯ ಜೆಡಿಯು ನಾಯಕ ಶರದ್ ಯಾದವ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಚುನಾವಣಾ ಆಯೋಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಣವನ್ನು ನೈಜ ಜೆಡಿಯು ಎಂದು ಪರಿಗಣಿಸಿದ್ದು 'ಬಾಣ'ದ ಗುರುತನ್ನು ಬಳಸಲು ಅನುಮತಿ ನೀಡಿದೆ.
ಜೆಡಿಯು ಬಿಹಾರದಲ್ಲಿ ನೋಂದಣಿಗೊಂಡಿರುವ ರಾಜ್ಯ ಪಕ್ಷವಾಗಿದೆ. ನಿತೀಶ್ ಕುಮಾರ್ ತಮ್ಮ ಬಣಕ್ಕೆ ಹೆಚ್ಚಿನ ಶಾಸಕರು ಹಾಗೂ ಪಕ್ಷದ ನ್ಯಾಷನಲ್ ಕೌನ್ಸಿಲ್ ನ ಸದಸ್ಯರ ಬೆಂಬಲ ಇದೆ ಎಂದು ಚುನಾವಣಾ ಆಯೋಗದ ಮುಂದೆ ಸಾಕ್ಷಿ ಸಮೇತ ಸಾಬೀತು ಪಡಿಸಿದ್ದರಿಂದ ಜೆಡಿಯು ಬಿಹಾರ ಸಿಎಂ ಬಣದ ಪಾಲಾಗಿದೆ.

ಕೆಲವು ತಿಂಗಳ ಹಿಂದೆ ನಿತೀಶ್ ಕುಮಾರ್ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಕೈಜೋಡಿಸಿದ್ದರು. ಇದನ್ನು ಜೆಡಿಯು ಮಾಜಿ ರಾಷ್ಟ್ರಾಧ್ಯಕ್ಷ ಶರದ್ ಯಾದವ್ ವಿರೋಧಿಸಿದ್ದರು.
ತಮ್ಮ ಬಣದ ಜೆಡಿಯು ನೈಜ ಜೆಡಿಯು ಎಂದು ಶರದ್ ಯಾದವ್ ಪ್ರತಿಪಾದಿಸಿದ್ದರು. ಇದೀಗ ನಿತಿಸ್ ಕುಮಾರ್ ನೇತೃತ್ವದ ಜೆಡಿಯು ನಿಜವಾದ ಜೆಡಿಯು ಎಂದು ಚುನಾವಣಾ ಆಯೋಗ ಹೇಳಿದೆ.











Click it and Unblock the Notifications