ದೀಪಾವಳಿ; ಮಧ್ಯಪ್ರದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಧನ್ವಂತರಿ ಪೂಜೆ
ಭೋಪಾಲ್, ಅ. 19: ಮಧ್ಯಪ್ರದೇಶ ಸರ್ಕಾರವು ಹಿಂದಿ ಭಾಷೆಯಲ್ಲಿ ಎಂಬಿಬಿಎಸ್ ಪಠ್ಯಪುಸ್ತಕಗಳನ್ನು ಬಿಡುಗೊಡೆಗೊಳಿಸಿದ ಬೆನ್ನಲೇ ಈಗ ವೈದ್ಯಕೀಯ ಕಾಲೇಜುಗಳಲ್ಲಿ ಧನ್ವಂತರಿ ಪೂಜೆ ಮಾಡಲು ತಿಳಿಸಿದೆ.
ಮಧ್ಯಪ್ರದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು ದೀಪಾವಳಿ ಹಬ್ಬದ ಅಂಗವಾದ ಧಂತೇರಸ್ನಲ್ಲಿ ಧನ್ವಂತರಿ (ಆರೋಗ್ಯದ ಅಧಿಪತಿ) ದೇವರ ಪೂಜೆಯನ್ನು ಮಾಡಲಿವೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮಂಗಳವಾರ ತಿಳಿಸಿದ್ದಾರೆ.
MBBS ಪಠ್ಯಪುಸ್ತಕಗಳ ಹಿಂದಿ ಆವೃತ್ತಿಯನ್ನು ಭಾನುವಾರ ಮಧ್ಯಪ್ರದೇಶದಲ್ಲಿ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

ಮಧ್ಯಪ್ರದೇಶವನ್ನು ಆರೋಗ್ಯಕರವನ್ನಾಗಿಸುತ್ತದೆ ಧನ್ವಂತರಿ ಪೂಜೆ!
ಗಣಪತಿ ಹಬ್ಬದ ಮಾದರಿಯಲ್ಲಿ ಪ್ರತಿ ವರ್ಷ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಧಂತೇರಸ್ ಅನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಧನ್ವಂತರಿ ಪೂಜೆಯನ್ನು ಆಯೋಜಿಸುವುದರ ಹಿಂದಿನ ಉದ್ದೇಶ ಮಧ್ಯಪ್ರದೇಶವನ್ನು ಆರೋಗ್ಯಕರ ರಾಜ್ಯವನ್ನಾಗಿ ಮಾಡುವುದಾಗಿದೆ ಎಂದು ಅವರು ತಿಳಿಸಿದ್ದಾರೆ.
"ಭಗವಾನ್ ಧನ್ವಂತರಿಯನ್ನು ಆರಾಧಿಸುವ ಮೂಲಕ ನಮ್ಮ ಮತ್ತು ಇತರರ ಉತ್ತಮ ಆರೋಗ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. ಈ ವರ್ಷ ಅಕ್ಟೋಬರ್ 22 ರಂದು ಬರುವ ಧಂತೇರಸ್ ಅಂಗವಾಗಿ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಧನ್ವಂತರಿ ದೇವರನ್ನು ಪೂಜಿಸುತ್ತವೆ. ಎಲ್ಲಾ ವೈದ್ಯರು, ವಿದ್ಯಾರ್ಥಿಗಳು ಮತ್ತು ನರ್ಸ್ಗಳು ಪೂಜೆಯಲ್ಲಿ ಭಾಗವಹಿಸಿ ಎಲ್ಲರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ" ಎಂದು ಸಚಿವ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಜನರ ಬೆಂಬಲ; ಸಚಿವ
ಹಿಂದೂ ನಂಬಿಕೆಗಳ ಪ್ರಕಾರ ಧನ್ವಂತರಿ ದೇವರು ವಿಷ್ಣುವಿನ ಅವತಾರ ಎಂದು ತಿಳಿಸಿರುವ ಸಚಿವರು, ಗಣಪತಿ ಹಬ್ಬದ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ವರ್ಷವೂ ಧಂತೇರಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಚಿವ ಸಾರಂಗ್ ಹೇಳಿದ್ದಾರೆ.
ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಆರಂಭಿಸಿರುವುದಕ್ಕೆ ರಾಜ್ಯದ ಜನರು ಮತ್ತು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ನನ್ನನ್ನು ಸನ್ಮಾನಿಸಿದ್ದಾರೆ ಎಂದು ಸಚಿವರು ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.

ಮಾತೃಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತೇವೆ; ಸಚಿವ
"ಯಶಸ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಈ ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ದೇಶದ ಮೊದಲ ರಾಜ್ಯವಾಗಿ ಮಧ್ಯಪ್ರದೇಶ ಹೊರಹೊಮ್ಮಲಿದೆ. WHO ಅಧ್ಯಯನದ ಪ್ರಕಾರ, ವೈದ್ಯಕೀಯ ಕ್ಷೇತ್ರದ ಎಲ್ಲಾ ಪ್ರಮುಖ ದೇಶಗಳು ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುತ್ತವೆ ಎಂದು ಸಚಿವ ಘೋಷಿಸಿದ್ದಾರೆ.

ಹಿಂದಿಯಲ್ಲಿ MBBS ಶಿಕ್ಷಣ ನೀಡುವ ಮಹತ್ವದ ಯೋಜನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿಯಲ್ಲಿ ಬರೆಯಲಾಗಿರುವ ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್ನ ಮೂರು ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ದೇಶದಲ್ಲೇ ಮೊದಲ ಬಾರಿ ಇಂತಹ ಪುಸ್ತಕ ಬಿಡುಗಡೆಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಇದು ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿತ್ತು.
ವೈದ್ಯರು ಪ್ರಿಸ್ಕ್ರಿಪ್ಷನ್ ಸ್ಲಿಪ್ಗಳ ಮೇಲೆ Rx (ಲ್ಯಾಟಿನ್ ಪದದಿಂದ ಪಡೆದ ಚಿಹ್ನೆ) ಬದಲಿಗೆ 'ಶ್ರೀ ಹರಿ' ಎಂದು ಬರೆಯಬಹುದು. ನಂತರ ಔಷಧಿಗಳ ಪಟ್ಟಿಯನ್ನು ಹಿಂದಿಯಲ್ಲಿ ಬರೆಯಬಹುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದರು.
ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಧ್ಯಪ್ರದೇಶ ಸರ್ಕಾರದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ದೇಶದಲ್ಲಿ ಬಹಳ ದೊಡ್ಡ ಧನಾತ್ಮಕ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದ್ದರು.












Click it and Unblock the Notifications