55 ಪ್ರಯಾಣಿಕರನ್ನು ಬೆಂಗಳೂರಿನಲ್ಲಿ ಬಿಟ್ಟು ಹೋಗಿದ್ದ ಗೋ ಫಸ್ಟ್ ಏರ್ವೇಸ್ಗೆ ವಿಧಿಸಿರುವ ದಂಡವೆಷ್ಟು ಗೊತ್ತೆ?
ಜನವರಿ 9 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೊರಟು ಹೋಗಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆ ಮೇಲೆ ತೆಗೆದುಕೊಂಡಿರುವ ಕ್ರಮವೇನು ಗೊತ್ತೆ..? ಮುಂದೆ ಓದಿ.
ನವದೆಹಲಿ, ಜನವರಿ. 27: ಜನವರಿ 9 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಹಲವು ವಾಯು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ನಿರ್ದೇಶನಾಲಯ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜನವರಿ 9 ರಂದು ಜಿ8 116 ವಿಮಾನವು ಬೆಳಿಗ್ಗೆ 6.30 ರ ಸುಮಾರಿಗೆ ದೆಹಲಿಗೆ ಹೊರಟ್ಟಿದ್ದ 55 ಪ್ರಯಾಣಿಕರನ್ನು ಬಸ್ನಲ್ಲಿಯೇ ಬಿಟ್ಟು ಟೇಕ್ ಆಫ್ ಆಗಿತ್ತು. ಹಲವಾರು ಟ್ವಿಟರ್ ಬಳಕೆದಾರರು ಈ ಬಗ್ಗೆ ದೂರಿದ್ದರು. ಈ ಟ್ವೀಟ್ಗಳಿಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಖ್ಯಾತೆಯನ್ನು ಟ್ಯಾಗ್ ಮಾಡಲಾಗಿತ್ತು. ಬಳಿಕ ಈ ಪ್ರಯಾಣಿಕರಿಗೆ ನಾಲ್ಕು ಗಂಟೆಗಳ ನಂತರ ಅಂದರೆ ಬೆಳಗ್ಗೆ 10 ಗಂಟೆಗೆ ಹೊರಟಿದ್ದ ವಿಮಾನದಲ್ಲಿ ವಸತಿ ಕಲ್ಪಿಸಲಾಗಿತ್ತು ಎಂದು ವರದಿಯಾಗಿತ್ತು.

ಘಟನೆ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ನೋಟಿಸ್ ಕಳುಹಿಸಿ, ವಿವರಣೆಯನ್ನು ಕೋರಿತ್ತು. ವಿಮಾನದಲ್ಲಿ ಪ್ರಯಾಣಿಕರು ಹತ್ತುವುದಕ್ಕೆ ಸಂಬಂಧಿಸಿದಂತೆ ಟರ್ಮಿನಲ್ ಸಂಯೋಜಕರು, ವಾಣಿಜ್ಯ ಸಿಬ್ಬಂದಿ ಮತ್ತು ಸಿಬ್ಬಂದಿ ನಡುವೆ ಅಸಮರ್ಪಕ ಸಂವಹನ, ಸಮನ್ವಯತೆ ಕಂಡುಬಂದಿದೆ ಎಂದು ಗೋ ಫಸ್ಟ್ನ ಪ್ರತಿಕ್ರಿಯೆ ನೀಡಿದೆ ಎಂದು ಡಿಜಿಸಿಎ ತಿಳಿಸಿದೆ.
ಪ್ರಯಾಣಿಕರನ್ನು ಬಿಟ್ಟು ಹೋಗಿದ್ದು "ಅಚಾತುರ್ಯ" ಎಂದು ಗೋ ಫಸ್ಟ್ ಹೇಳಿ ಕ್ಷಮೆಯಾಚಿಸಿದೆ. ಜೊತೆಗೆ ಮುಂದಿನ ವರ್ಷದೊಳಗೆ ಭಾರತದಲ್ಲಿ ಎಲ್ಲಿಯಾದರೂ ಪ್ರಯಾಣಿಸಲು ಈ ಸಂತ್ರಸ್ತ ಪ್ರಯಾಣಿಕರಿಗೆ ಒಂದು ಉಚಿತ ಟಿಕೆಟ್ ಅನ್ನು ನೀಡಿದೆ.
ವಿಮಾನಯಾನ ಸಂಸ್ಥೆಗಳು ಕಳೆದ ವರ್ಷದಿಂದ ಹೆಚ್ಚು ಸುದ್ದಿಗೆ ಒಳಗಾಗುತ್ತಿವೆ. ಆರಂಭದಲ್ಲಿ ಹಲವಾರು ಯಾಂತ್ರಿಕ ವೈಫಲ್ಯಗಳಿಂದಾಗಿ ಬೇರೆ ಕಡೆಗಳಲ್ಲಿ ಲ್ಯಾಂಡ್ ಆಗುವುದು, ತುರ್ತು ಭೂಸ್ಪರ್ಶದಂತಹ ಘಟನೆಗಳು ವರದಿಯಾಗಿದ್ದವು. ಆದಾದ ನಂತರ ಕುಡಿದು ಪ್ರಯಾಣಿಸುವ ಪ್ರಯಾಣಿಕರನ್ನು ನಿರ್ವಹಿಸಿದ ರೀತಿ, ಮೂತ್ರ ವಿಸರ್ಜನೆಯಂತಹ ಘಟನೆಗಳು ಭಾರಿ ಚರ್ಚೆಗೆ ಒಳಗಾಗಿವೆ.

ಕುಡಿದ ಅಮಲಿನಲ್ಲಿ ಪ್ರಯಾಣಿಕರೊಬ್ಬರು ವೃದ್ಧೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಂತರ ನ್ಯೂಯಾರ್ಕ್-ದೆಹಲಿ ವಿಮಾನದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮತ್ತೊಂದು ಏರ್ ಇಂಡಿಯಾ ಪ್ಯಾರಿಸ್-ದೆಹಲಿ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರೊಬ್ಬರ ಖಾಲಿ ಸೀಟು ಮತ್ತು ಹೊದಿಕೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಮತ್ತೋರ್ವ ಪ್ರಯಾಣಿಕರು, ಮದ್ಯ ಸೇವಿಸಿ, ಶೌಚಾಲಯದಲ್ಲಿ ಧೂಮಪಾನ ಮಾಡಿದ್ದು, ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.












Click it and Unblock the Notifications