ನಡೆಯದ ಮೋದಿ ಚರಿಷ್ಮ, ಬಿಜೆಪಿಗೆ ತೀವ್ರ ಮುಖಭಂಗ
ಡೆಹ್ರಾಡೂನ್, ಜು 26 (ಪಿಟಿಐ) : ಲೋಕಸಭೆಯ ಚುನಾವಣೆಯ ವೇಳೆ ದೇಶಾದ್ಯಂತ ವ್ಯಾಪಕವಾಗಿ ಬೀಸಿದ್ದ 'ಮೋದಿ ಹವಾ' ಉತ್ತರಾಖಂಡದ ವಿಧಾನಸಭಾ ಉಪ ಚುನಾವಣೆಯಲ್ಲಿ ಬೀಸಲಿಲ್ಲ. ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಉತ್ತರಾಖಂಡದ ಮೂರು ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಎಲ್ಲಾ ಮೂರು ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. (ಕೇದಾರನಾಥ ಕ್ಷೇತ್ರದಲ್ಲಿ SBIಗೆ ಸಿಕ್ತು 1.9 ಕೋಟಿ ರೂ)
ಇದರಲ್ಲಿ ಗಮನಿಸ ಬೇಕಾದ ಅಂಶವೇನಂದರೆ ಈ ಮೂರು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿದ್ದವು. ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಉಪಚುನಾವಣೆಯಲ್ಲಿನ ವಿಜೇತ ಅಭ್ಯರ್ಥಿಯಲ್ಲೊಬ್ಬರು.
ಎಪ್ಪತ್ತು ಶಾಸಕರು ಇರುವ ರಾಜ್ಯದ ವಿಧಾನಸಭೆಯಲ್ಲಿ ಈಗ ಕಾಂಗ್ರೆಸ್ ತನ್ನ ಬಲವನ್ನು 32 ರಿಂದ 35ಕ್ಕೆ ಏರಿಸಿಕೊಂಡಿದೆ. 2012ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಕೊರತೆ ಉಂಟಾಗಿದ್ದಾಗ ಪಿಡಿಎಫ್, ಬಿಎಸ್ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲ ಪಡೆದು ಕಾಂಗ್ರೆಸ್ ಗದ್ದುಗೇರಿತ್ತು.
(ಫೋಟೋ: ಪಿಟಿಐ)

ಸಿಎಂ ರಾವತ್ ಜಯಭೇರಿ
ಮುಖ್ಯಮಂತ್ರಿ ರಾವತ್ ಅವರು ದಾರ್ಚುಲ ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ ಡಿ ಜೋಷಿಯವರನ್ನು 20,604 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮೋಯಿವಾಲ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು
ದೋಯಿವಾಲ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಹೀರಾ ಸಿಂಗ್ ಬಿಶತ್ ಅವರು ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು 6,515 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರ ಬಿಜೆಪಿಯ ಹಿಡಿತದಲ್ಲಿತ್ತು.

ಬಿಜೆಪಿ ಹಿಡಿತದಲ್ಲಿದ್ದ ಮತ್ತೊಂದು ಕ್ಷೇತ್ರ
ಇನ್ನು ಸೋಮೇಶ್ವರ ಕ್ಷೇತ್ರದಲ್ಲಿ ರೇಖಾ ಆರ್ಯ ತಮ್ಮ ಪ್ರತಿಸ್ಪರ್ಧಿ ಮೋಹನ್ ರಾಮ್ ಆರ್ಯ ಅವರ ವಿರುದ್ದ 9,905 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಕ್ಷೇತ್ರವನ್ನೂ ಕಾಂಗ್ರೆಸ್ ಬಿಜೆಪಿಯಿಂದ ಕಸಿದು ಕೊಂಡಿದೆ.
|
ಕಾಂಗ್ರೆಸ್ ಫುಲ್ ಖುಷ್
ಕಾಂಗ್ರೆಸ್ಸಿಗೆ ಮರುಭೂಮಿಯಲ್ಲಿ ನೀರು ಸಿಕ್ಕಂತಾಗಿದೆ ಉತ್ತರಾಖಂಡದ ಉಪಚುನಾವಣೆಯ ಫಲಿತಾಂಶ. ಬಿಜೆಪಿ ಯಾವ ಕಾರಣಕ್ಕಾಗಿ ದೆಹಲಿ ವಿಧಾನಸಭಾ ಚುನಾವಣೆಯನ್ನು ಮುಂದೂಡುತ್ತಿದೆ ಎಂದು ಈಗ ಅರಿವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮೇಕನ್ ಟ್ವೀಟ್ ಸಂದೇಶದ ಮೂಲಕ ಲೇವಡಿ ಮಾಡಿದ್ದಾರೆ.

ಜಲಪ್ರಳಯ ಉಂಟಾಗಿದ್ದ ಸಿಎಂ ತಲೆದಂಡವಾಗಿತ್ತು
ಉತ್ತರಾಖಂಡದ ಚಾರ್ ಧಾಮ್ ಕ್ಷೇತ್ರಗಳಲ್ಲಿ ಜಲಪ್ರಳಯ ಉಂಟಾಗಿದ್ದಾಗ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಕಾರಣಕ್ಕಾಗಿ ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ವಿಜಯ್ ಬಹುಗುಣ ಅವರ ರಾಜೀನಾಮೆಯನ್ನು ಹೈಕಮಾಂಡ್ ಪಡೆದಿತ್ತು.

ಸಿಎಂ ಆಗಿ ಹರೀಶ್ ರಾವತ್
ಅವರ ಜಾಗಕ್ಕೆ ಸೋನಿಯಾ ಗಾಂಧಿ ಹರೀಶ್ ರಾವತ್ ಅವರನ್ನು ಫೆಬ್ರವರಿ 1, 2014ರಂದು ನೇಮಿಸಿದ್ದರು. ಹೈಕಮಾಂಡ್ ತನ್ನ ಮೇಲಿಟ್ಟಿದ್ದ ವಿಶ್ವಾಸಕ್ಕೆ ಸಿಎಂ ರಾವತ್ ಭರ್ಜರಿ ಉಡುಗೊರೆಯನ್ನು ಉಪಚುನಾವಣೆಯ ಫಲಿತಾಂಶದ ಮೂಲಕ ತಿರುಗಿ ನೀಡಿದ್ದಾರೆ.











Click it and Unblock the Notifications