ಖಾಲಿ ಆಗುತ್ತಿದೆ ಕಾಂಗ್ರೆಸ್ ಖಜಾನೆ, ದುಂದು ವೆಚ್ಚ ಕಡಿತಕ್ಕೆ ಸೂಚನೆ
ನವದೆಹಲಿ, ಅಕ್ಟೋಬರ್ 11: ಕಳೆದ ನಾಲ್ಕುವರೆ ವರ್ಷದಿಂದ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು ಜೊತೆಗೆ ಸರಿ ಸುಮಾರು 19 ರಾಜ್ಯಗಳಲ್ಲಿ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ಖಜಾನೆಯಲ್ಲಿ ಹಣ ಖಾಲಿಯಾಗಿದೆ.
ಹೌದು, ಈ ಮುಂಚೆಯೂ ಇದನ್ನು ಒಪ್ಪಿಕೊಂಡಿದ್ದ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಗಳು ಹತ್ತಿರ ಬಂದಿರುವ ಕಾರಣ ಹಣವನ್ನು ಮಿತವಾಗಿ ಬಳಸಿ ಇರುವ ಅಲ್ಪ ಸ್ವಲ್ಪ ಹಣದಲ್ಲೇ ಚುನಾವಣೆಯನ್ನು ಎದುರಿಸಲು ಸೂಚನೆ ಹೊರಡಿಸಿದೆ.
ಮಿತವ್ಯಯ ಮಾಡಿ ಹಣ ಉಳಿಸಲು ಕೆಲವು ನಿರ್ಧಾರಗಳನ್ನು ಎಐಸಿಸಿಯು ಕೈಗೊಂಡಿದ್ದು, ಅಕ್ಟೋಬರ್ 9 ರಂದು ಇದರ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅದರಂತೆ ಕೆಲವು ನಿಯಮಗಳನ್ನು ಕಾಂಗ್ರೆಸ್ ಕಾರ್ಯದರ್ಶಿಗಳು ಸೇರಿದಂತೆ ಇನ್ನೂ ಹಲವರು ಪಾಲಿಸಲೇ ಬೇಕಿದೆ.
ಪಕ್ಷಕ್ಕೆ ದೇಣಿಗೆ ಹರಿವು ಕಡಿಮೆ ಆಗಿರುವ ಕಾರಣ ಎಐಸಿಸಿಯು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ಈ ಮುಂಚೆಯೇ ಹೇಳಿತ್ತು. ಹಾಗಾಗಿ ಖರ್ಚುಗಳನ್ನು ಕಡಿಮೆ ಮಾಡಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಕಾರ್ಯದರ್ಶಿಗಳ ಕಚೇರಿ ಸ್ಥಳಾಂತರ
ಎಐಸಿಸಿಯ ಕಾರ್ಯದರ್ಶಿಗಳ ಕಚೇರಿಗಳನ್ನು ಎಐಸಿಸಿ ಕೇಂದ್ರ ಕಚೇರಿಯಿಂದ ಅವರವರ ರಾಜ್ಯಗಳಿಗೆ ಸ್ಥಳಾಂತರಿಸಲಾಗಿದೆ. ಕಡ್ಡಾಯವಾಗಿ ಕಾರ್ಯದರ್ಶಿಗಳು ತಿಂಗಳ ಅರ್ಧ ಕಾಲ ರಾಜ್ಯಗಳಲ್ಲೇ ಕಾಲ ಕಳೆಯಬೇಕಿದೆ. ದೆಹಲಿಗೆ ಬಂದಾಗ ಬೇಕಿದ್ದರೆ ಅವರಿಗೆ ಸೂಕ್ತವಾದ ತಾತ್ಕಾಲಿಕ ಸ್ಥಳ ಒದಗಿಸಲಾಗುವುದು.

ವಿಮಾನ ಬಳಸುವಂತಿಲ್ಲ ರೈಲ್ವೆಯೇ ಬಳಸಿ
ಎಐಸಿಸಿ ಕಾರ್ಯರ್ಶಿಗಳ ವಿಮಾನ ಟಿಕೆಟ್ ದರ ಮರುಪಾವತಿ ಮೇಲೆ ನಿಯಂತ್ರಣ ಹೇರಿರುವ ಎಐಸಿಸಿ 1400 ಕಿ.ಮೀ ರೈಲಿನ ದರವನ್ನು ನೀಡುವುದಾಗಿ ಹೇಳಿದೆ. ಅಕಸ್ಮಾತ್ ರೈಲಿನ ದರಕ್ಕಿಂತಲೂ ವಿಮಾಣ ದರ ಕಡಿಮೆ ಆಗುವುದಿದ್ದರೆ ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬೇಕು ಇಲ್ಲದಿದ್ದರೆ ರೈಲಿನಲ್ಲೇ ಪ್ರಯಾಣಿಸಬೇಕು ಎಂದು ಏಐಸಿಸಿ ಹೇಳಿದೆ.
|
ಸಂಸದರಿಗೆ ಪ್ರಯಾಣ ಭತ್ಯೆ ನೀಡುವುದಿಲ್ಲ
ಮುಖ್ಯ ಕಾರ್ಯದರ್ಶಿಗಳು ಅಥವಾ ಉಸ್ತುವಾರಿಗಳಾಗಿ ಕಾರ್ಯ ಮಾಡುತ್ತಿರುವ ಪಕ್ಷದ ಸಂಸದರು ತಮ್ಮ ಪ್ರಯಾಣ ಭತ್ಯೆಗಾಗಿ ಅರ್ಜಿ ಹಾಕುವುದನ್ನು ಬಿಟ್ಟುಬಿಡಬೇಕು ಎಂದು ಎಐಸಿಸಿ ಸೂಚಿಸಿದೆ. ತಮ್ಮ ಸಂಬಳದಲ್ಲೇ ಪ್ರಯಾಣ ಭತ್ಯೆ ಭರಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.

ಕ್ಯಾಂಟಿನ್ ಖರ್ಚು ಸೇರಿ ಹಲವು ಕಡಿತ
ಕ್ಯಾಂಟಿನ್ ಖರ್ಚು, ಇಂಧನ, ಸುದ್ದಿ ಪತ್ರಿಕೆ, ವಿದ್ಯುತ್ ಇನ್ನಿತರೆ ವಸ್ತುಗಳ ಮೇಲಿನ ಖರ್ಚುಗಳನ್ನು ಕಡಿಮೆ ಮಾಡಲು ಎಐಸಿಸಿ ಸಿಬ್ಬಂದಿಗೆ ಸೂಚಿಸಿದ್ದು ಇದು ಎಲ್ಲ ರಾಜ್ಯಗಳ ಎಐಸಿಸಿ ಕಚೇರಿಗಳಿಗೂ ಅನ್ವಯಿಸುತ್ತದೆ ಎಂದು ಎಐಸಿಸಿ ಹೇಳಿದೆ.

ವಿದ್ಯುತ್, ಇಂಧನ ಬಳಕೆಗೂ ಕಡಿವಾಣ
ಎಐಸಿಸಿ ವತಿಯಿಂದ ನೀಡಲಾಗಿರುವ ವಾಹನಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಬೇಕು, ಕಚೇರಿಯಲ್ಲಿ ಯಾರೂ ಇಲ್ಲದಾಗ ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಬೇಕು. ಮುಖ್ಯವಾಗಿ ಕಾರ್ಯದರ್ಶಿಗಳು ಅಥವಾ ತತ್ಸಾಮನ ಹುದ್ದೆಯವರು ಖರ್ಚು ಕಡಿಮೆ ಮಾಡುವ ಸೂಚನೆಗಳನ್ನು ಜಾರಿಗೆ ತರಲು ಸಿಬ್ಬಂದಿಗಳಿಗೆ ಸೂಚಿಸಬೇಕು ಎಂದು ಎಐಸಿಸಿ ಹೊರಡಿಸಿರುವ ಸೂಚನೆಯಲ್ಲಿ ಹೇಳಿದೆ.












Click it and Unblock the Notifications