ಕಲ್ಲಿದ್ದಲು ಹಗರಣ: ರಂಜಿತ್ ಸಿನ್ಹಾ ಅವರ ವಿರುದ್ಧ ತನಿಖೆಗೆ ಅಸ್ತು!
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ.
ನವದೆಹಲಿ, ಜನವರಿ 23: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ.
ಕಲ್ಲಿದ್ದಲು ಹಗರಣದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪವನ್ನು ರಂಜಿತ್ ಸಿನ್ಹಾ ಎದುರಿಸುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಗೆ ಈಡಾಗಿ ಮುಜುಗರಕ್ಕೆ ಒಳಗಾಗಿದ್ದರು.
ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅಧಿಕಾರ ದುರುಪಯೋಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.. ಆದ್ದರಿಂದ ಈ ಕುರಿತಂತೆ ತನಿಖೆ ನಡೆಸುವಂತೆ ಎಂದು ಜಸ್ಟಿಸ್ ಎಂ.ಬಿ. ಲೋಕುರ್ ಅವರಿದ್ದ ವಿಶೇಷ ನ್ಯಾಯಪೀಠ ಆದೇಶಿಸಿದೆ.

ಸಿನ್ಹಾ ಅವರ ಪಾತ್ರದ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ(SIT)ನ್ನು ರಚಿಸಬೇಕು. ತನಿಖೆಯ ವೇಳೆ ಕೇಂದ್ರ ಜಾಗೃತ ಆಯೋಗ(ಸಿವಿಸಿ)ವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
1974ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿ ಸೇರ್ಪಡೆಗೊಂಡ ರಂಜಿತ್ ಸಿನ್ಹಾ ಐಟಿಬಿಪಿ, ರೈಲ್ವೆ ಬೋರ್ಡ್ ಸೇರಿದಂತೆ ದೇಶದ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಸಾರ್ವಜನಿಕ ವಲಯದ ಬ್ಯಾಂಕಿನ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಸೆನ್ಸಾರ್ ಬೋರ್ಡ್ ನ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಆರೋಪಿಯಾಗಿದ್ದ ಮೇವು ಹಗರಣದ ತನಿಖೆ ನಡೆಸಿದ್ದ ಸಿನ್ಹಾ ಅವರು ಕೊನೆಗೆ ಲಾಲೂ ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ತನಿಖೆಯನ್ನು ದಿಕ್ಕು ತಪ್ಪಿಸಿದರೆಂಬ ಆರೋಪವನ್ನು ಹೊರಬೇಕಾಯಿತು. ಸುಮಾರು 38 ವರ್ಷಗಳ ಕರ್ತವ್ಯ ಪಾಲನೆ ನಂತರ ಸಿನ್ಹಾ ನಿವೃತ್ತಿ ಹೊಂದಿದ್ದರು. ಆದರೆ, ಸಿನ್ಹಾ ಅವರು ಸಿಬಿಐ ಮುಖ್ಯಸ್ಥರಾಗಿದ್ದಾಗ ತನ್ನ ನಿವಾಸದಲ್ಲಿ ಕಲ್ಲಿದ್ದಲು ಹಗರಣದಲ್ಲಿ ಸಿಲುಕಿರುವ ಪ್ರಮುಖ ಆರೋಪಿಗಳನ್ನು ಭೇಟಿಯಾಗಿದ್ದು ಬಹಿರಂಗವಾದ ಬಳಿಕ ಸಿನ್ಹಾಗೆ ಸಮಸ್ಯೆಗಳು ಶುರುವಾಯಿತು.











Click it and Unblock the Notifications