ಕಾವೇರಿ ಮೇಲ್ಮನವಿ ಅರ್ಜಿ ಸಲ್ಲಿಕೆಯೇ ಸರಿಯಲ್ಲ ಎಂದಿದ್ದು ಏಕೆ?
ಕರ್ನಾಟಕ ಹಾಗೂ ತಮಿಳುನಾಡು ಸಲ್ಲಿಸಿರುವ ಅರ್ಜಿಯೇ ಸರಿಯಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದ್ದು ಏಕೆ? ಇದರ ಪರಿಣಾಮವೇನು? ಇಷ್ಟು ವರ್ಷಗಳಿಂದ ನಡೆದ ಕಾನೂನು ಹೋರಾಟಕ್ಕೆ ಬೆಲೆ ಇಲ್ಲವೇ
ನವದೆಹಲಿ, ಅಕ್ಟೋಬರ್ 19: ಕಾವೇರಿ ಐ ತೀರ್ಪು ಪ್ರಶ್ನಿಸಿ ನಾಲ್ಕು ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಬುಧವಾರ ನಡೆಯಲಿದೆ. ಆದರೆ, ಕರ್ನಾಟಕ ಹಾಗೂ ತಮಿಳುನಾಡು ಸಲ್ಲಿಸಿರುವ ಅರ್ಜಿಯೇ ಸರಿಯಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದ್ದು ಏಕೆ? ಇದರ ಪರಿಣಾಮವೇನು? ಇಷ್ಟು ವರ್ಷಗಳಿಂದ ನಡೆದ ಕಾನೂನು ಹೋರಾಟಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ.
2007ರ ಫೆಬ್ರವರಿ 5ರಂದು ಕಾವೇರಿ ನ್ಯಾಯಾಧಿಕರಣ ನೀಡಿರುವ ತೀರ್ಪು ತಪ್ಪಾಗಿದೆ ಎಂದು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ವಾದಿಸಿವೆ. ಆದರೆ, ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಪ್ರಶ್ನಿಸುವಂತಿಲ್ಲ. ಅಂತಾರಾಜ್ಯ ನಡುವಿನ ಜಲ ವಿವಾದವನ್ನು ಕೇಂದ್ರ ಸರ್ಕಾರ ಬಗೆಹರಿಸಬಹುದು ಎಂದು ಎಜಿ ಮುಕುಲ್ ರೋಹ್ಟಗಿ ಹೇಳಿದ್ದಾರೆ.
ಕಾನೂನಿನ ಉಲ್ಲೇಖ: ಕಾವೇರಿ ನ್ಯಾಯಾಧಿಕರಣ ಪ್ರಶ್ನಿಸಿ ತಮಿಳುನಾಡು ಹಾಗೂ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳು ವಿಚಾರಣೆ ಯೋಗ್ಯವಲ್ಲ ಎಂದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದ್ದಾರೆ. ಸಂವಿಧಾನದ ಆರ್ಟಿಕಲ್ 32, 131, 136 ಹಾಗೂ 262 ಉಲ್ಲೇಖಿಸಿ ವಾದ ಮಂಡಿಸಿದ್ದಾರೆ.

ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಅನ್ವಯ ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸುವಂತಿಲ್ಲ. ಇದು ಸಂವಿಧಾನಕ್ಕೆ ಸಂಬಂಧಪಟ್ಟ ವಿಷಯ ಎಂದು ಕೇಂದ್ರ ಸರ್ಕಾರ ವಾದದ ಹಾದಿಯನ್ನು ಬೇರೆಡೆಗೆ ಕರೆದೊಯ್ದಿದೆ.
ಕಾವೇರಿ ನದಿಯ ಪ್ರಮಾಣ 740 ಟಿಎಂಸಿ ಅಡಿಯಲ್ಲಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ, ತಮಿಳುನಾಡಿಗೆ 419 ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ, ಪುದುಚೇರಿಗೆ 7 ಟಿಎಂಸಿ ಅಡಿ ನೀರು ಜತೆಗೆ 14 ಟಿಎಂಸಿ ಅಡಿ ಪರಿಸರ ಸಂರಕ್ಷಣೆಗೆ ಬಳಕೆ ಮಾಡಿಕೊಳ್ಳಿ ಎಂದು ನ್ಯಾಯಾಧೀಕರಣ ತೀರ್ಪು ನೀಡಿತ್ತು.
ಸುಪ್ರೀಂಕೋರ್ಟ್ ನ್ಯಾ ದೀಪಕ್ ಮಿಶ್ರಾ, ಅಮಿತವ್ ರಾಯ್ ಹಾಗೂ ಖಾನ್ವಿಲ್ಕರ್ ಅವರಿರುವ ತ್ರಿಸದಸ್ಯ ಪೀಠ ಬುಧವಾರದಂದು ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವೇ ಇಲ್ಲವೇ ಎಂಬುದರ ಬಗ್ಗೆ ಇನ್ನೊಂದು ವಾರಗಳ ಕಾಲ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈ ನಡುವೆ ಮುಂದಿನ ಆದೇಶದ ತನಕ ತಮಿಳುನಾಡಿಗೆ ಪ್ರತಿದಿನ 2,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ನ್ಯಾಯಪೀಠ ನಿರ್ದೇಶಿಸಿದೆ. ಈ ಆದೇಶಕ್ಕೆ ತಲೆಬಾಗಿರುವ ಕರ್ನಾಟಕ ಸರ್ಕಾರ ನೀರು ಬಿಡುವುದಾಗಿ ಹೇಳಿದೆ. ದ್ವಿಸದಸ್ಯ ಪೀಠ ನೀಡಿದ ಆದೇಶದಂತೆ ಅಕ್ಟೋಬರ್ 18ರ ತನಕ ಪ್ರತಿನಿತ್ಯ 2,000 ಕ್ಯೂಸೆಕ್ಸ್ ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.












Click it and Unblock the Notifications