Budget 2024; ರೈಲ್ವೆ ಇಲಾಖೆ ವೆಚ್ಚ ಶೇ 25ರಷ್ಟು ಏರಿಕೆ
ನವದೆಹಲಿ, ಜನವರಿ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ರೈಲ್ವೆ ಬಜೆಟ್ ಅನ್ನು ಸಹ ಸಾಮಾನ್ಯ ಬಜೆಟ್ ಜೊತೆಗೆ ಸೇರಿಸಿ ಅನುದಾನ ಹಂಚಿಕೆ ಮಾಡಲಾಗುತ್ತದೆ.
ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ಈ ಬಾರಿಯ ಬಜೆಟ್ನಲ್ಲಿ ಜನಪ್ರಿಯ ಘೋಷಣೆಗಳ ನಿರೀಕ್ಷೆ ಇದೆ. ಅದರಲ್ಲೂ ವಂದೇ ಭಾರತ್ ರೈಲುಗಳು ಸೇರಿ ಪ್ರಮುಖ ಘೋಷಣೆಗಳನ್ನು ಇಲಾಖೆಯಲ್ಲಿ ಮಾಡುವ ನಿರೀಕ್ಷೆ ಇದೆ.

ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆಯ ವೆಚ್ಚ ಶೇ 25ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ತಜ್ಞರ ಮಾಹಿತಿಯಂತೆ ರೈಲ್ವೆ ಇಲಾಖೆಗೆ 3 ಲಕ್ಷ ಕೋಟಿ ಅನುದಾನ ಹಂಚಿಕೆಯಾಗಬಹುದು. ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಕೈಗೊಳ್ಳುವ ಕ್ರಮಗಳ ಪರಿಣಾಮ ವೆಚ್ಚವೂ ಅಧಿಕವಾಗಲಿದೆ.
ಭವಿಷ್ಯದ ಯೋಜನೆಗಳು; ವಂದೇ ಭಾರತ್, ಅಮೃತ್ ಭಾರತ್ ರೈಲುಗಳು, ಅಮೃತ್ ಭಾರತ್ ಯೋಜನೆಯಡಿ ರೈಲು ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಭವಿಷ್ಯದಲ್ಲಿ ಉತ್ತಮ ಸಾರಿಗೆ ಸೌಕರ್ಯ ಒದಗಿಸಲು ಕಾಮಗಾರಿಗಳಿಗೆ ವೇಗ ನೀಡಬೇಕಿದೆ. ಆದ್ದರಿಂದ ಇಲಾಖೆಯ ವೆಚ್ಚವೂ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಹೊಸ ವಂದೇ ಭಾರತ್ ರೈಲುಗಳ ಸಂಚಾರ, ಸಿಗ್ನಲಿಂಗ್ಗಳ ಆಧುನೀಕರಣ, ರೈಲ್ವೆ ಮಾರ್ಗದ ವಿದ್ಯುದೀಕರಣಕ್ಕೆ ವೆಚ್ಚ ಅಧಿಕವಾಗಲಿದೆ. ಆದ್ದರಿಂದ 2022-23ನೇ ಸಾಲಿನ ಬಜೆಟ್ಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಜೆಟ್ನ ವೆಚ್ಚ ಏರಿಕೆಯಾಗಲಿದೆ.
ದೇಶದಲ್ಲಿ ರಾಜ್ಯಗಳ ಜೊತೆ ಸೇರಿ ಹಲವು ಕಾಮಗಾರಿಗಳನ್ನು ರೈಲ್ವೆ ಇಲಾಖೆ ಕೈಗೊಂಡಿದೆ. ಇವುಗಳಿಗೆ ಒಪ್ಪಂದದ ಪ್ರಕಾರ ಶೇ 50ರಷ್ಟು ಅನುದಾನವನ್ನು ಕೇಂದ್ರ ನೀಡಬೇಕಿದೆ. ಕಳೆದ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 2.45 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಬಾರಿ ಈ ಅನುದಾನ ಹೆಚ್ಚಳವಾಗಲಿದೆ.
2021-22ರಲ್ಲಿ 1.17 ಲಕ್ಷ ಕೋಟಿ, 2020-21ರಲ್ಲಿ 70,250 ಕೋಟಿ, 2019-20ರಲ್ಲಿ 55,088 ಕೋಟಿ ಅನುದಾನವನ್ನು ರೈಲ್ವೆ ಇಲಾಖೆಗೆ ಒದಗಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಇಲಾಖೆಯ ವೆಚ್ಚ ಏರಿಕೆಯಾಗುತ್ತಲೇ ಇದೆ. ಆದಾಯ ಸಂಗ್ರಹಣೆ ಜೊತೆ ದೇಶದ ಪ್ರಮುಖ ಸಾರಿಗೆ ವ್ಯವಸ್ಥೆ ಸುಧಾರಣೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ.
ರೈಲು ಮಾರ್ಗವನ್ನು ಸಂಪೂರ್ಣ ವಿದ್ಯುದೀಕರಣ ಮಾಡುವ ಮೂಲಕ ಇಂಧನದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿಯ ಬಜೆಟ್ನಲ್ಲಿ 60 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ. ಕಳೆದ ವರ್ಷ 75 ರೈಲುಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ ಸಂಚಾರ ಆರಂಭಿಸಿದ್ದು 50ಕ್ಕೂ ಹೆಚ್ಚು ಮಾತ್ರ.
ಬಜೆಟ್ನಲ್ಲಿ ರೈಲ್ವೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಸಿಗ್ನಲಿಂಗ್ಗಳಿ ಉನ್ನತೀಕರಣ, ಸೇತುವೆಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನ ನೀಡಬೇಕಿದೆ. ವೇಗದ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದ್ದು, ಇದಕ್ಕೆ ಅಗತ್ಯವಾಗಿ ಹಳಿಗಳ ಉನ್ನತೀಕರಣ ಆಗಬೇಕು. ಆದ್ದರಿಂದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅನುದಾನವನ್ನು ಹೆಚ್ಚಾಗಿ ನೀಡಬೇಕಿದೆ.
ಕೇಂದ್ರ ಸರ್ಕಾರ ರೈಲು ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲು ಅಮೃತ್ ಭಾರತ್ ನಿಲ್ದಾಣ ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆಯಡಿ ಒಟ್ಟು 1,309 ರೈಲು ನಿಲ್ದಾಣಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ನೀಡುವುದು ಈ ಯೋಜನೆಯ ಗುರಿಯಾಗಿದೆ.
ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುವುದು ಮಧ್ಯಂತರ ಬಜೆಟ್ ಮಾತ್ರ. ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಾಗುತ್ತದೆ.












Click it and Unblock the Notifications