ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಡೈವೋರ್ಸ್: ಅಸಲಿ ಸಿನಿಮಾ ಶುರುವಾಗೋದೇ ಇನ್ಮುಂದೆ?
ಕಾಂಗ್ರೆಸ್ ಮುಕ್ತ್ ಭಾರತ್ ಮಾಡಲು ಹೊರಟಿರುವ ಬಿಜೆಪಿ, ತನ್ನ ಸುಪರ್ದಿಯಲ್ಲಿದ್ದ ರಾಜ್ಯವನ್ನು ಬಿಟ್ಟುಕೊಡಲು ಬಲವಾದ ಕಾರಣ ಇಲ್ಲದೆ ಇದ್ದೀತೇ, ಅದೂ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷವ ಇರುವ ಹೊತ್ತಿನಲ್ಲಿ, ಪಿಡಿಪಿ ಜೊತೆ ಮೈತ್ರಿ ಮುರಿದುಕೊಂಡ ಬಿಜೆಪಿಯ ನಿರ್ಧಾರದ ಹಿಂದೆ ಏನು ಕಾರಣ ಇರಬಹುದು?
ಕಣಿವೆ ಭಾಗದಲ್ಲಿ ಉಗ್ರರ ಉಪಟಳವನ್ನು ಹತ್ತಿಕ್ಕುವಲ್ಲಿ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರಕಾರ ವಿಫಲಗೊಂಡಿದೆ, ಅದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ, ಆ ಕಾರಣಕ್ಕಾಗಿ ಬಿಜೆಪಿ ಮೈತ್ರಿ ಮುರಿದುಕೊಂಡಿತು ಎನ್ನುವುದು ಒಂದು ಆಯಾಮ..
ವೀರಪ್ಪನ್ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿ ಈಗ ಜಮ್ಮು ರಾಜ್ಯಪಾಲರ ಸಲಹೆಗಾರ
ಇನ್ನೊಂದು ಆಯಾಮದ ಪ್ರಕಾರ, ಉಗ್ರರನ್ನು ಹತ್ತಿಕ್ಕುವ ವಿಚಾರದಲ್ಲಿ, ಮಾತುಕತೆಯೇ ಸರಿಯಾದ ದಾರಿ ಎಂದು ಪಿಡಿಪಿ, ಕೇಂದ್ರ ಸರಕಾರಕ್ಕೆ ತೀವ್ರ ಒತ್ತಡ ಹೇರುತ್ತಿದ್ದರಿಂದ, ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿತ್ತು. ಈ ಕಾರಣಕ್ಕಾಗಿ ಬಿಜೆಪಿ ಮೈತ್ರಿಮುರಿದುಕೊಂಡಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ.
ಈ ಎಲ್ಲಾ ವಿದ್ಯಮಾನಗಳಿಗೆ ಪೂರಕ ಎನ್ನುವಂತೆ ಭೂಸೇನಾ ಮುಖ್ಯಸ್ಥ ಜನರಲ್ ರಾವತ್, ಉಗ್ರರನ್ನು ಬೇಟೆಯಾಡಲು ನಾವಿನ್ನು ಮುಕ್ತ ಎಂದು ಹೇಳಿರುವುದು, ಜೊತೆಗೆ ಜಮ್ಮು, ಕಾಶ್ಮೀರದ ಭಾಗದ ಸಾರ್ವಜನಿಕರಲ್ಲೂ ಬಿಜೆಪಿ ಬೆಂಬಲ ವಾಪಸ್ ತೆಗೆದುಕೊಂಡ ನಿರ್ಧಾರ ಇದೇ ಕಾರಣಕ್ಕಾಗಿ ಎನ್ನುವ ಮಾತು ಅಲ್ಲಲ್ಲಿ ಚಾಲ್ತಿಯಲ್ಲಿದೆ.
ಕಾಶ್ಮೀರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಯನ್ನು ಹತ್ತಿಕ್ಕಲು ಮೋದಿ ಸರಕಾರ ವಿಫಲವಾಗುತ್ತಿದೆ ಎನ್ನುವ ಆರೋಪಗಳ ನಡುವೆ, ಮೈತ್ರಿ ಮುರಿದುಕೊಂಡು, ಸೇನೆಗೆ ಫುಲ್ ಪವರ್ ನೀಡಿ, ಭಯೋತ್ಪಾದಕರ ವಿರುದ್ದ ನಿರ್ದ್ಯಾಕ್ಷಿಣ್ಯ ಕ್ರಮಕ್ಕೆ ಮುಂದಾಗಲು ಅನುಕೂಲವಾಗಲೆಂದೇ, ಸಮ್ಮಿಶ್ರ ಸರಕಾರ ಪತನಗೊಂಡಿರುವ ಸಾಧ್ಯತೆ ಇದೆ. ಮುಂದೆ ಓದಿ..
ಎರಡು ಪಕ್ಷಗಳ ನಡುವಣ ಸಂಸಾರ, ಮೂರು ವರ್ಷ ಬಾಳಿದ್ದೇ ಹೆಚ್ಚು
ಬಿಜೆಪಿ ಮತ್ತು ಪಿಡಿಪಿಯ ಸಿದ್ದಾಂತಗಳು ಒಂದಕ್ಕೊಂದು ತಾಳೆಯಾಗದೇ ಇದ್ದರೂ, ಕಾಂಗ್ರೆಸ್ ಅನ್ನು ಹೊರಗಿಡಬೇಕು ಎನ್ನುವ ಕಾರಣಕ್ಕಾಗಿ, ಮುಫ್ತಿ ಮೊಹಮ್ಮದ್ ಸಯೀದ್ ಅವರ ಜೀವಿತಾವಧಿಯಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. ಅಸಲಿಗೆ ನೋಡಬೇಕೆಂದರೆ, ಈ ಎರಡು ಪಕ್ಷಗಳ ನಡುವಣ ಸಂಸಾರ, ಮೂರು ವರ್ಷ ಬಾಳಿದ್ದೇ ಹೆಚ್ಚು. ಕೊನೆಗೂ, ಬಿಜೆಪಿ ತನ್ನ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವ ಮೂಲಕ, ಹಲವು ಊಹಾಪೋಹಗಳಿಗೆ ಅನುವು ಮಾಡಿಕೊಟ್ಟಿದೆ.
ಹಿಂಸೆಯಿಂದ ಉಗ್ರರ ದಮನವಾಗುವುದಿಲ್ಲ, ಮಾತುಕತೆಯೇ ಸರಿ
ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ಉಗ್ರರ ವಿರುದ್ದ ತೀವ್ರ ಕಾರ್ಯಾಚರಣೆಗೆ ಮುಂದಾಗಿದ್ದರೂ, ಹಿಂಸೆಯಿಂದ ಉಗ್ರರ ದಮನವಾಗುವುದಿಲ್ಲ, ಮಾತುಕತೆಯೇ ಸರಿಯಾದ ದಾರಿ ಎಂದು ಜಮ್ಮು, ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ನಿಲುವಿನಿಂದ, ಕೇಂದ್ರ ಸರಕಾರ ಹಿಂದಕ್ಕೆ ಸರಿದಿತ್ತು. ರಂಜಾನ್ ಕದನ ವಿರಾಮದ ವೇಳೆ, ಉಗ್ರರ ಉಪಟಳ ಎಲ್ಲೆ ಮೀರಿತ್ತು. ಪ್ರತ್ಯೇಕತಾವಾದಿಗಳ ಜೊತೆ ಪಿಡಿಪಿ ಮೃದು ಧೋರಣೆ ಹೊಂದಿದ್ದರಿಂದ ಕೇಂದ್ರಕ್ಕೆ ಹಿನ್ನಡೆಯಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ರಾಷ್ಟ್ರಪತಿ ಆಡಳಿತದಿಂದಾಗಿ ಸೇನೆಗೆ ಫುಲ್ ಪವರ್
ಸದ್ಯ, ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತದಿಂದಾಗಿ ಸೇನೆಗೆ ಫುಲ್ ಪವರ್ ಸಿಕ್ಕಂತಾಗಿದೆ, ಇದರಿಂದ ನಮಗೆ ಇನ್ನೂ ಅನುಕೂಲವಾಗಿದೆ. ಬಹಳಷ್ಟ ನಮ್ಮ ಯೋಧರು ಹುತಾತ್ಮರಾದರು, ಅವರ ಬಲಿದಾನಕ್ಕೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ. ತೀವ್ರ ಕಾರ್ಯಾಚರಣೆಯ ಮೂಲಕ ಉಗ್ರರ ಹುಟ್ಟಡಗಿಸುತ್ತೇವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿರುವುದು, ಉಗ್ರರಿಗೆ ಸೇನೆಯ ಅಸಲಿ ಸಿನಿಮಾ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಉನ್ನತ ಅಧಿಕಾರಿಗಳ ಜೊತೆ ಗೃಹ ಇಲಾಖೆ ಸಭೆ
ರಾಷ್ಟ್ರಪತಿ ಆಡಳಿತ ಜಾರಿಯಾದ ಬೆನ್ನಲ್ಲೇ, ಕೇಂದ್ರ ಸರಕಾರ ಉಗ್ರರ ಕಾರ್ಯಾಚರಣೆಗೆ ವಿಶೇಷ ಯೋಜನೆ ಹಾಕಿಕೊಂಡಿದ್ದು, ಉನ್ನತ ಅಧಿಕಾರಿಗಳ ಜೊತೆ ಗೃಹ ಇಲಾಖೆ ಸಭೆ ನಡೆಸಿದ್ದು, ಅನಂತನಾಗ್ ಮತ್ತು ಪುಲ್ವಾಮದ ಗಡಿಭಾಗದಲ್ಲಿ ಭಾರೀ ಕಾರ್ಯಾಚರಣೆ ನಡೆಸಲು ಸೇನೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಜೊತೆಗೆ, ಕಾಶ್ಮೀರದಲ್ಲಿನ ರಕ್ತಸಿಕ್ತ ಉಗ್ರ ಅಧ್ಯಾಯಕ್ಕೆ ಕೊನೆಹಾಡಲು ಎಲ್ಲಾ ಕ್ರಮ ತೆಗೆದುಕೊಳ್ಳುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ವೀರಪ್ಪನ್ ವಿರುದ್ದ ಕಾರ್ಯಾಚರಣೆಯಲ್ಲಿ ವಿಜಯ್ ಕುಮಾರ್ ಪ್ರಮುಖ ಪಾತ್ರ
ಸೂಪರ್ ಕಾಪ್ ಎಂದೇ ಹೆಸರಾಗಿರುವ ಕೆ ವಿಜಯ್ ಕುಮಾರ್ ಅವರನ್ನು, ಜಮ್ಮು ಕಾಶ್ಮೀರದ ರಾಜ್ಯಪಾಲರಿಗೆ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ದಂತಚೋರ ವೀರಪ್ಪನ್ ವಿರುದ್ದ ಕಾರ್ಯಾಚರಣೆಯಲ್ಲಿ ವಿಜಯ್ ಕುಮಾರ್ ಪ್ರಮುಖ ಪಾತ್ರವಹಿಸಿದ್ದರು. ರಾಜ್ಯಪಾಲ ಎನ್ ಎನ್ ವೊಹ್ರಾ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸರಕಾರ ಮತ್ತು ಸೇನೆ, ಉಗ್ರರ ವಿರುದ್ದ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಿ ಎನ್ನುವುದು ಎಲ್ಲರ ಆಶಯ. (ಚಿತ್ರದಲ್ಲಿ ವಿಜಯ್ ಕುಮಾರ್)