ಸಿನಿಮಾ ಸ್ಟೈಲ್ ಕಿಡ್ನಾಪ್ ಮಾಡಲು ಹೋಗಿ 12 ಗಂಟೆಯೊಳಗೆ ಅಂದರ್
ಸಿನಿಮಾ ಶೈಲಿಯಲ್ಲಿ ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಒಂದೂವರೆ ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಮೂವರು ಕಿರಾತಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಜನವರಿ 25: ಬೆಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆಯೊಂದರಲ್ಲಿ ಕುಖ್ಯಾತ ಮೂವರು ಅಪಹರಣಕಾರರನ್ನು ಬಂಧಿಸಿದ್ದಾರೆ. ಬಂಧಿತರು ಸಿನಿಮಾ ಶೈಲಿಯಲ್ಲಿ ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಒಂದೂವರೆ ಕೊಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಬಂಧಿತರನ್ನು ಕೃಷ್ಣ (33), ವಿಜಯ್ ಕುಮಾರ್ ಮತ್ತು ಶ್ರೀನಿವಾಸ (35) ಎಂದು ಗುರುತಿಸಲಾಗಿದೆ.[ತಂದೆಯನ್ನು ಕೊಂದು ಪರಾರಿಯಾಗಿದ್ದ ಮಗನ ಬಂಧನ]
ಸಿನಿಮಾ ಸ್ಟೈಲ್ ಅಪಹರಣ
ಪ್ರಕರಣದ ಸಂಚುಕೋರ ಕೃಷ್ಣ ರೇಪ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದವ. ಈತ ಜೈಲಿನಲ್ಲಿದ್ದಾಗ ಅಲ್ಲಿ ಕೊಲೆ ಆರೋಪಿ ವಿಜಯಕುಮಾರ್ ಮತ್ತು ಶ್ರೀನಿವಾಸರ ಪರಿಚಯವಾಗಿತ್ತು. ಇವರೆಲ್ಲರೂ ಅಪಹರಣ ಮಾಡಿ ಹಣ ಮಾಡುವ ಸಂಚು ರೂಪಿಸಿದ್ದರು.
ಜೈಲಿನಿಂದ ಹೊರ ಬಂದ ಆರೋಪಿಗಳು ತಾವು ವಾಸವಿದ್ದ ಪ್ರದೇಶದಲ್ಲಿ ಜೀವಿಸುತ್ತಿದ್ದ ವಿಮಲಾ ಎನ್ನುವವರನ್ನು ಗಮನಿಸಿದ್ದರು. ಇವರ ಮಗಳು ಅಮೇರಿಕಾದಲ್ಲಿ ಕೆಲಸದಲ್ಲಿದ್ದು ಒಳ್ಳೆ ದುಡಿಮೆ ಇದೆ. ಹೀಗಾಗಿ ವಿಮಲಾರನ್ನು ಅಪಹರಣ ಮಾಡಿದರೆ ಹಣ ಸಿಗಬಹುದು ಎಂದು ಪ್ಲಾನ್ ಹಾಕಿಕೊಂಡಿದ್ದರು.[ಸಿಬಿಐನಿಂದ ಮಲ್ಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ಬಂಧನ]
ಅದರಂತೆ ವಿಮಲಾ ಮಗನಾದ ಶಿವಕುಮಾರ್ ಹೊಸದಾಗಿ ಖರೀದಿಸಿದ್ದ ಬುಲೆಟ್ ಮೋಟಾರ್ ಸೈಕಲ್ ಗೆ ಬಹುಮಾನ ಬಂದಿರುವುದಾಗಿ 23/01/2017ರಂದು ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. 'ಬಹುಮಾನ ಬ್ಲೂ ಡಾರ್ಟ್ ಕೊರಿಯರ್ ಸರ್ವಿಸ್'ನಲ್ಲಿ ಇದೆ ಸಂಜೆ 4 ಗಂಟೆಗೆ ಬಂದು ಪಡೆದುಕೊಂಡು ಹೋಗುವಂತೆ ತಿಳಿಸಿದ್ದರು.
ಬಹುಮಾನದ ಬಗ್ಗೆ ವಿಚಾರಿಸಲು ಶಿವಕುಮಾರ ಮನೆಯಿಂದ ಹೊರ ಹೋದ ಸಮಯದಲ್ಲಿ ಆರೋಪಿಗಳು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ವಿಮಲಾ ಮನೆ ಬಳಿಗೆ ಹೋಗಿದ್ದರು. 'ನಾವು ಕ್ರೈಂ ಪೊಲೀಸರು ನಿಮ್ಮ ಸೊಸೆ ಆತ್ನಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಸಾವು ಬದುಕಿನ ನಡುವೆ ಇದ್ದಾರೆ. ಆದ್ದರಿಂದ ನೀವುಗಳು ಪೊಲೀಸ್ ಠಾಣೆಗೆ ಬರಬೇಕೆಂದು," ವಿಮಲಾರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಸ್ವಲ್ಪ ದೂರ ಹೋದ ನಂತರ ಕಣ್ಣಿಗೆ ಬಟ್ಟೆ ಕಟ್ಟಿ ವಿಜಯಕುಮಾರ್ ಬಾಡಿಗೆಗೆ ವಾಸವಿದ್ದ ಹೆಬ್ಬಾಳದ ಮನೆಯಲ್ಲಿ ಕೂಡಿ ಹಾಕಿದ್ದರು. ಅವರ ಬಳಿ ಇದ್ದ ಮಾಂಗಲ್ಯ ಸರ ಮತ್ತು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದರು.
ನಂತರ ಆರೋಪಿಗಳು ವಿಮಲಾ ಮಗ ಶಿವಕುಮಾರ್ ಗೆ ಪೋನ್ ಮಾಡಿ, "ನಿಮ್ಮ ತಾಯಿ ನಮ್ಮ ಬಳಿ ಇದ್ದಾರೆ, ಸುರಕ್ಷಿತವಾಗಿ ಕಳುಹಿಸಲು ಒಂದೂವರೆ ಕೋಟಿ ಹಣವನ್ನು ನಾಳೆ ಸಂಜೆಯೊಳಗೆ ನೀಡಬೇಕು," ಎಂದು ಸಿನಿಮಾ ಸ್ಟೈಲಿನಲ್ಲಿ ಬೇಡಿಕೆ ಮುಂದಿಟ್ಟಿದ್ದರು.
ಬಲೆಗೆ ಬಿದ್ದ ಮಿಕಗಳು
ಆರೋಪಿಗಳು ಬೇಡಿಕೆ ಮುಂದಿಡುತ್ತಿದ್ದಂತೆ ಶಿವಕುಮಾರ್ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಕ್ಷಣ ಆರೋಪಿಗಳ ಪತ್ತೆಗಾಗಿ ಉತ್ತರವಿಭಾಗದ ಎಸಿಪಿ. ರವಿಪ್ರಸಾದ್ ನೇತೃತ್ವದಲ್ಲಿ ಪೊಲಿಸರು ಬಲೆ ಬೀಸಿದ್ದಾರೆ. ಮಾತ್ರವಲ್ಲ ಪ್ರಕರಣ ನಡೆದ ಒಂದು ದಿನದೊಳಗೆ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಆರೋಪಿಗಳಿಂದ ಈ ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಒಂದು ಬಜಾಜ್ ಅವೇಂಜರ್ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ. ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಪೊಲೀಸರ ಯಶಸ್ವಿಯಾಗಿದ್ದಾರೆ. ಆರಕ್ಷಕರ ಈ ಕಾರ್ಯಚರಣೆಗೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.